![]() | ಮಕ್ಕಳ ಕ್ಯಾರೆಯೋಕೆ ವರ್ಕ್ ಶಾಪ್ |
ಸ್ನೇಹಿತರೇ,ಕಳೆದ ಡಿಸೆಂಬರ್ ೨೩ ರಂದು ಸುಗಮಕನ್ನಡ ಹಮ್ಮಿಕೊಂಡಿದ್ದ ಸುಗಮ ಚಿಣ್ಣರ ಲೋಕದ ಮೊಟ್ಟಮೊದಲ ಕಾರ್ಯಕ್ರಮ ಮಕ್ಕಳ ಕ್ಯಾರೆಯೋಕಿ ವರ್ಕ್ ಶಾಪ್ ಯಶಸ್ವಿಯಾಗಿಯೂ, ಮಕ್ಕಳಿಗೆ ಬಹಳ ಉಪಯುಕ್ತವಾಗಿಯೂ, ನಡೆಸಿಕೊಟ್ಟ ಶ್ರೀಮತಿ.ಪುಷ್ಪಾ ಜಗದೀಶ್ ರವರಿಗೆ ಉತ್ಸಾಹ ತರುವಂತಾಗಿಯೂ, ಪೋಷಕರಿಗೆ ಮನರಂಜನೆಯಾಗಿಯೂ, ಸಮಿತಿಯವರಿಗೆ ಪ್ರೋತ್ಸಾಹ ನೀಡಿತು.ಮಕ್ಕಳ ಪರಿಚಯ, ಅವರ ಆಸೆ ಆಕಾಂಕ್ಷೆಗಳನ್ನು ಅವರೊಂದಿಗೆ ಹಂಚಿಕೊಂಡು, ಕೆಲವು ಸರಳ ಸಂಗೀತ ಸ್ವರಗಳ ಅಭ್ಯಾಸದೊಂದಿಗೆ ಶುರುಮಾಡಿ ಮಕ್ಕಳೊಡನೆ ಬಲು ಬೇಗ ಸ್ನೇಹದಿಂದ ಬೆರೆತ ಶ್ರೀಮತಿ.
ಪುಷ್ಪಾ `ವರ್ಕ್ ಶಾಪ್' ನ ಮುಂದಿನ ನಾಕು ತಾಸುಗಳನ್ನು ಸೊಗಸಾಗಿ ನಿರ್ವಹಿಸಿ ಮಕ್ಕಳು ತಾವು ಕಲಿತಿದ್ದ ಹಾಡುಗಳನ್ನು ಹಾಡಿಸಿ ಕೆಲವು ಸಲಹೆಗಳನ್ನಿತ್ತರು. ಮಕ್ಕಳು ಅವನ್ನು ಅಳವಡಿಸಿಕೊಡದ್ದು ಮುಂದೆ ಜ.೫ ರಂದು ನಡೆದ ಕಾರ್ಯಕ್ರಮದಲ್ಲಿ ಅರಿವಾಯಿತು. ಭೋಜನ ವಿರಾಮದಲ್ಲಿ ಶ್ರೀಮತಿ.ಪುಷ್ಪಾ ತಾವು ಸಂಗೀತಲೋಕದಲ್ಲಿ ನಡೆದು ಬಂದ ದಾರಿ, ಸಾಧನೆ, ಪ್ರಶಸ್ತಿ-ಪ್ರಶಂಸೆಗಳ ಪ್ರತಿಬಿಂಬಿಸುವ ಭಾವಚಿತ್ರಗಳ ವಿವರಣೆ, ಗಣ್ಯರೊಡಗಿನ ಒಡನಾಟ ಎಲ್ಲವನ್ನೂ ಮಕ್ಕಳ ಜೊತೆ ಪೋಷಕರಿಗೂ ಪರಿಚಯಿಸಿದ್ದು ಆ ದಿನದ ವಿಶೇಷವೆನಿಸಿತು.
ಊಟದ ನಂತರ ಈ ರೀತಿಯ ಅಪರೂಪದ `ವರ್ಕ್ ಶಾಪ್' ಗೆ ಬಂದ ಮಕ್ಕಳಿಗೆ ಏನಾದರೊಂದು ವಿಶೇಷ ಕೊಡುಗೆ ನೀಡುವ ನಿಟ್ಟಿನಲ್ಲಿ ಸೊಗಸಾದ `ನಡೆದಿದೆ ಪೂಜಾರತಿ ವಿಶ್ವದೇವಿಗೆ' ಗೀತೆಯನ್ನು ಅಭ್ಯಾಸ ಮಾಡಿಸುವುದರೊಂದಿಗೆ ಮುಗಿಸಿದರು.ಸುಗಮ ಕನ್ನಡ ಸಮಿತಿಯ ಪರವಾಗಿ ಕನಕಾಪುರ ನಾರಾಯಣ ಅವರು ಶ್ರೀಮತಿ.ಪುಷ್ಪಾ, ಭಾಗವಹಿಸಿದ್ದ ಮಕ್ಕಳು ಮತ್ತು ಪೋಷಕರಿಗೂ ಧನ್ಯವಾದ ಸಮರ್ಪಿಸಿದರು