ದಾಸರಪದ (ನ)
ನಮ್ಮಮ್ಮ ಶಾರದೆ (ಗಣನಾಥ)
ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನಾರಮ್ಮ |ಪ|
ಕಮ್ಮಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೆ |ಅ.ಪ|
ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆ ದಾಡೆಯನಾರಮ್ಮ
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೆ ||೧||
ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾನಿವನಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೆ ||೨||
ರಾಶಿವಿದ್ಯೆಯ ಬಲ್ಲ ರಮಣೀ ಹಂಬಲನೊಲ್ಲ ಭಾಶಿಗನಿವನಾರಮ್ಮ
ಲೇಸಾಗಿ ಜನರ ಸಲಹುವ ಕಾಗಿನೆಲೆಯಾದಿ ಕೇಶವದಾಸ ಕಾಣೆ ||೩||
ನಾರಾಯಣನಾರಾಯಣ
ನಾರಾಯಣ ನಾರಾಯಣ ನಾರಾಯಣ| ನಾರಾಯಣ||ಪ||
ಭಕ್ತಿಬೇಕು ಪರಮ ವಿರಕ್ತಿ ಬೇಕು ಹರಿ ಸ|ರ್ವೋತ್ತಮನೆಂಬೋ ನೆನವಿರಬೇಕು||೧||
ಅರಿಷಡ್ವರ್ಗದ ವಿಜಯಬೇಕು ಗುರುಕುಲತಿಲಕ|ಗುರುಮಧ್ವಮತ ಬೇಕು ಗುರುಭಕ್ತಿ ಬೇಕು||೨||
ಹರಿಯ ಡಿಂಗರಿಗರ ಸಂಗ ಬೇಕು ಶಂಖಚಕ್ರ| ಧರನಾಗಿ ಇರಬೇಕು ಸ್ವರೂಪಯೋಗ್ಯತೆ ಬೇಕು||೩||
ವೇದಭ್ಯಾಸವು ಬೇಕು ಅದರರ್ಥ ಹರಿಯೆಂಬ | ಬೋಧವಿರಲುಬೇಕು ಖಳರಳಿಯಲುಬೇಕು||೪||
ವಾದಿರಾಜನೊಡೆಯ ಹಯವದನನ್ನ ದಿವ್ಯ| ಪಾದ ನಂಬಿಯಿರಬೇಕು||೫||
ನಾವು ಕುರುಬರು
ನಾವು ಕುರುಬರು ನಮ್ಮ ದೇವರು ಬೀರಯ್ಯ ||ಪ||
ಕಾವನಮ್ಮಜ್ಜ ನರಕುರಿಯ ಹಿಂಡುಗಳ ||ಅ||
ಅಷ್ಟ ಮದ ಮತ್ಸರಗಳೇಂಬ ಟಗರುಗಳು| ದೄಷ್ಟಿ ಜೀವಾತ್ಮನೆಂಬೋ ಆಡು|
ಸೄಷ್ಟಿ ಪ್ರಸಿದ್ಧವೆಂತೆಂಬ ಹೋತಗಳು| ಕತ್ತಿ ಕೋಲಿನಲಿ ಇರುತಿರುವ ನಮ್ಮಜ್ಜ ||೧||
ವೇದಶಾಸ್ತ್ರ ಪುರಾಣವೆಂತೆಂಬ ಶ್ವಾನಗಳು| ಕಾದಿದ್ದು ನಮ್ಮಜ್ಜ ಹಿಂಡಿನೊಳಗೆ|
ಹಾದಿಗಾಣದೆ ಕೂಗಿ ಬಾಯಾರಿ ಕಾಲ್ಗೆರಗೆ| ಆದರಿಸಿ ಅಂಬಲಿಯ ನೆರೆವನಮ್ಮಜ್ಜ||೨||
ಅರುಹೆಂಬ ಮರಿಗಳು ಹಿಂಡಿನೊಳಗೆ ಬಂದು| ಮರವೆಯಲಿ ಯಮನೆಂಬ ತೋಳ ಹೊಕ್ಕು|
ತುರುಬಿ ಹಿಂಜಾವದಲಿ ಕುರಿಯ ಮುರಿವುದ ಕಂಡು| ಅರಿತು ಅರಿಯದ ಹಾಗೆ ಇರುವ ನಮ್ಮಜ್ಜ||೩||
ಹುಟೋದಕೆ ಮೊದಲಿಲ್ಲ ಸಯೋದಕೆ ಕೊನೆಯಿಲ್ಲ" ಹುಟ್ಟು ಸಾವಿನ ಹೊಲಬ ಬಲ್ಲ ನಮ್ಮಜ್ಜ|
ಅಷ್ಟು ಪ್ರಾಣಿಗಳಿಗೆ ಇಷ್ಟು ಅಂಬಲಿ ಮಾಡಿ| ಹೊಟ್ಟೆ ತುಂಬುವ ಹಾಗೆ ಎರೆವ ನಮ್ಮಜ್ಜ||೪||
ಕಲಿಯುಗಕೆ ಗೌಡನಿವ ಸಂಗಾತಿ ಮಂತ್ರಿಸುತ| ಕಲಿಯುಗಂಗಳನೆಲ್ಲ ಮರೆತನೀತ|
ಜಲಜಾಕ್ಷ ಕಾಗಿನಿಲೆಯಾದಿ ಕೇಶವನ ಮನ| ವೊಲಿಸಿ ಭಜಿಸಿದವನುಹುಚ್ಚು ಕುರುಬ||೫||
ನಾನು ನೀನು ಎನ್ನದಿರೋ
ನಾನು ನೀನು ಎನ್ನದಿರೋಹೀನ ಮಾನವ|ಪ|| ನೆನ್ನ ನೀನೆ ತಿಳಿದು ನೋದಲೋ|ಅ|
ಹೊನ್ನು ಹೆಣ್ಣು ಮಣ್ಣು ಮೊರು ನಿನ್ನದೇನಿಲೊ| ಅನ್ನದಿಂದ ಬಂದ ಕಾಮ ನಿನ್ನದೇನಿಲೊ|
ಕರ್ಣದಿಂದ ಬರುವ ಘೋಷಾ ನಿನ್ನದೇನೆಲೊ| ನಿನ್ನ ಬಿತ್ತು ಪೋಪ ದೇಹ ನಿನ್ನದೇನೆಲೊ||೧||
ಹಲವು ಜನ್ಮದಿಂದ ಬಂದಿರುವೆ ನೀನೆಲೊ| ಮಲದ ಗರ್ಭದಲಿ ನಿಂದಿರುವೆ ನೀನೆಲೊ|
ಜಲದ ದಾರಿಯಲಿ ಬಂದಿರುವೆ ನೀನೆಲೊ|ಕುಲವು ಜಾತಿ ಗೊತ್ರವುಳ್ಳವನು ನೀನೆಲೊ||೨||
ಕಾಲಕರ್ಮ ಶೀಲ ನೇಮ ನಿನ್ನದೇನೆಲೊ| ಜಾಲವಿದ್ಯೆ ಬಯಲ ಮಾಯೆ ನಿನ್ನದೆನೆಲೊ|
ಕೀಲು ಜಡಿದ ತೊಗಲಗೊಂಬೆ ನಿನ್ನದೆನೆಲೊ| ಲೋಲ ಆದಿಕೆಶವನ ಭಕ್ತನಾಗೆಲೊ||೩||
ನಾರಾಯಣ ಎಂಬ ನಾಮದ
ನಾರಾಯಣ ಎಂಬ ನಾಮದ ಬೀಜವನು ನಾಲಿಗೆಯಾ| ಕೂರಿಗೆಯ ಮಾಡಿ ಬಿತ್ತಿರಯ್ಯಾ||ಪ||
ಹೃದಯ ಹೊಲವ ಮಾಡಿ ತನುವ ನೇಗಿಲ ಮಾಡಿ| ತನ್ವಿರಾ ಎಂಬ ಎರಡೆತ್ತು ಹೂಡಿ|
ಜ್ನಾನವೆಂಬೊ ಮಿಣಿಯ ಕಣ್ಣಿ ಹಗ್ಗವ ಮಾಡಿ| ಮನವೆಂಬ ಧಾನ್ಯವ ನೋಡಿ ಬಿತ್ತಿರಯ್ಯಾ||೧||
ಕಾಮ ಕ್ರೋಧಗಳೆಂಬ ಗಿಡವನು ತರಿಯಿರಯ್ಯಾ| ಮದಮತ್ಸರವೆಂಬ ಪೊದೆಯಾ ಇರಿಯಿರಯ್ಯಾ|
ಪಂಚೇಂದ್ರಿಯಗಳೆಂಬ ಮಂಚಿಕೆಯ ಹಾಕಿರಯ್ಯಾ| ಚಂಚಲವೆಂಬ ಹಕ್ಕಿಯ ಓಡಿಸಿರಯ್ಯಾ||೨||
ಉದಯಾಸ್ತಮಾನವೆಂಬ ಎರಡು ಕೊಳಗವ ಮಾಡಿ| ಆಯುಷದ ರಾಸಿಯ ಅಳೆಯಿರಯ್ಯಾ|
ಇದು ಕಾರಣ ಕಾಗಿನೆಲೆಯಾದಿ ಕೇಶವನ| ಮುದದಿಂದ ನೆನೆನೆನೆದ ಸುಖಿಯಾಗಿರಯ್ಯಾ||೩||
ನಾರಾಯಣ ನಿನ್ನ ನಾಮ
ನಾರಾಯಣ ನಿನ್ನ ನಾಮವೊಂದಿರುತಿರೆ| ಬೇರೊಂದ ನಾಮವಿನೇತಕಯ್ಯ||ಪ||
ನೆಟ್ಟನ ದಾರಿಯ ಬಟ್ಟೆಯೊಳಿರುತಿರೆ| ಬೆಟ್ಟವ ಬಳಸಲಿನ್ನೇತಕಯ್ಯ|
ಅಷ್ಟೈಶ್ವರ್ಯದ ಮೃಷ್ಟಾನ್ನವಿರುತಿರೆ| ಬಿಟ್ಟಿ ಕೂಳನು ತಿನ್ನಲೇತಕಯ್ಯ||೧||
ಪರಶು ನೇವಾಳಂಗಳಿರುತಿರೆ ಬೀದಿಯ| ಬರಿಗಲ್ಲ ತೊಳೆಯಲಿನ್ನೇತಕಯ್ಯಾ|
ಹರಿವಾಣದೊಳಗಮೃತಾನ್ನವು ಇರುತಿರೆ| ತಿರಿದ ಕೂಳನು ತಿನ್ನಲೇತಕಯ್ಯ||೨||
ಬೆಲ್ಲವು ಕರದಳಗಿರುತಿರೆ ಕಾಡಿನ| ಕಲ್ಲನು ಕಡಿಯಲಿನ್ನೇತಕಯ್ಯ|
ಬಲ್ಲಿದ ಕಾಗಿನೆಲೆಯಾದಿಕೇಶವನಿರೆ| ಚಿಲ್ಲರೆ ದೈವದ ಹಂಬಲೇತಕಯ್ಯ||೩||
ನಾರಾಯಣ ಎನ್ನಿ ನಾರದ ವರದನ
ನಾರಾಯಣ ಎನ್ನಿ ನಾರದ ವರದನ| ನಾರಾಯಣ ಎನ್ನಿರೋ ವೇದ|
ಪಾರಾಯಣನಾಗಿ ಕರಿಯ ಕಾಯ್ದತನ| ನಾರಾಯಣ ಎನ್ನಿರೋ||ಪ||
ಶಿವನೊಳು ಕೂಡಿಯೆ ಶಿವವರ್ಣನಾದನ ನಾರಾಯಣ ಎನ್ನಿರೊ|
ಶಿವನ ತುರುಬಿನೊಳು ಶಿವನ ಕಟ್ಟಿಸಿದನ ನಾರಾಯಣ ಎನ್ನಿರೊ|
ಶಿವನ ಹರಿಯ ಮಾಡಿದವನ ಸೊಸೆಯ ತಂದನ ನಾರಾಯಣ ಎನ್ನಿರೋ|
ಶಿವ ದರುಶನವಾಗಿ ಶಿವನು ತಾನಾದನ ನಾರಾಯಣ ಎನ್ನಿರೋ||೧||
ಗರುಡವಾಹನನಾಗಿ ಗಜವನು ಸಲಹಿದನ ನಾರಾಯಣ ಎನ್ನಿರೊ|
ಗರುಡನ ಗರಿಯೊಳು ಕಡಲ ತಂತಾತನ ನಾರಾಯಣ ಎನ್ನಿರೊ|
ಗರುಡನ ಮಾತೆಯಣ್ಣನ ಮುಖ್ಹಪಡೆದನ ನಾರಾಯಣ ಎನ್ನಿರೊ|
ಗರುಡ ಗಂಧರ್ವ ನಗರಿಯ ಮೆರೆದಾತನ ನಾರಾಯಣ ಎನ್ನಿರೋ||೨||
ಸ್ವರ್ಣವಾಹನನಾಗಿ ಕರ್ಣಕುಂಡಲವಿಟ್ಟನ ನಾರಾಯಣ ಎನ್ನಿರೊ|
ಸ್ವರ್ಣಪಂದದೊಳು ಶಿವನೊಪ್ಪಿಕೊಂಡನ ನಾರಾಯಣ ಎನ್ನಿರೊ|
ಸ್ವರ್ಣಖಚಿತವಾದ ರಥದೊಳು ಪೊಕ್ಕನ ನಾರಾಯಣ ಎನ್ನಿರೊ|
ನಿರ್ಣಯವಿದು ಕಾಗಿನೆಲೆಯಾದಿಕೇಶವನ ನಾರಾಯಣ ಎನ್ನಿರೊ||೩||
ನಾಮ ಮುಂದೊ ಸ್ವಾಮಿ ವಿಭೂತಿ ಮುಂದೊ
ನಾಮ ಮುಂದೊ ಸ್ವಾಮಿ ವಿಭೂತಿ ಮುಂದೊ ||ಪ||
ಭೂಮಿ ಆಕಾಶ ಪುತ್ತೊ ಆಕಾಶ ಭೂಮಿಯ ಪೊತ್ತೊ|
ಭೂಮಿಯ ಮುಂದೊ ಆಕಾಶ ಮುಂದೊ ಸ್ವಾಮಿ ||೧||
ತತ್ತಿ ಹಕ್ಕಿಯ ಪುತ್ತೊ ಹಕ್ಕಿಯ ತತ್ತಿಯ ಪೊತ್ತೊ|
ತತ್ತಿಯ ಮುಂದೊ ಹಕ್ಕಿಯು ಮುಂದೊ ಸ್ವಾಮಿ||೨||
ಬೀಜವು ಮುಂದೊ ವೃಕ್ಷವು ಮುಂದೊ ಸ್ವಾಮಿ||೩||
ಗಂಡ ಹೆಂಡಿರ ಪೊತ್ತೊ ಹೆಂಡಿರು ಗಂಡನ ಪುತ್ತೊ|
ಗಂಡನು ಮುಂದೊ ಹೆಂಡಿರು ಮುಂದೊ ಸ್ವಾಮಿ||೪||
ಕನಕನು ಹೇಳಿದ ಬೆಡಗಿದು ಕಂಡವರೆಲ್ಲರು|
ಮನದಲಿ ಚಿಂತಿಸಿ ಮಥಿಸಿ ನವನೀತ ಕಾಣಿರಿ||೫||
ನಾನು ನಿನ್ನ ಸೇವಕ
ನಾನು ನಿನ್ನ ಸೇವಕ ಏನಾದರೂ ಬರಲಿ ನಿನ್ನ ಬಿಡುವೆನೆ ರಂಗಾ||ಪ||
ಅಪತ್ತೆ ಬರಲಿ ಅತಿಶಯದ ಕ್ಲೆಶವೇ ಬರಲಿ| ಕೋಪ ಕಾಮಾದಿಗಳು ವೆಗ್ಗಳಿಸಲಿ|
ಪಾಪದ ರಾಶಿಗಳು ಬಂದು ಬೆನ್ನಟ್ಟಲಿ|ಶ್ರೀಪತಿ ನಿನ್ನ ಪಾದವನು ಬಿಡಬಲ್ಲನೆ||೧||
ಯಮನಪುರದ ಬಟ್ಟೆ ಅತಿ ಕಠಿಣವಾಗಲಿ| ಯಮನಾಳು ಬಲು ಭಯಂಕರರಾಗಲಿ|
ಯಮನು ದಂಡಿಸಿ ತೀವ್ರನಿರಯದೊಳಗೆ ಇಡಲಿ| ಕಮಲನಾಭನೆ ನಿನ್ನ ಪಾದವನು ಬಿಡಬಲ್ಲನೆ||೨||
ಲೋಕದೊಳಗಿದ್ದ ಜನರಿಗೆ ಬಪ್ಪ ದೋಷಗಳು| ಏಕವಾಗಿ ಎನಗೆ ಬರಲಿ ಇಂದೆ|
ನಾಕಳವಳಿಸಿದರು ನಿನ್ನಂಘ್ರೀಯುಗಳಾಣೆ| ಶ್ರೀಕಾಂತ ವಿಜಯವಿಠ್ಠಲರಂಗ ಕೇಳೊ||೩||
ನಂದ ನಂದನ ಬಾರೊ
ನಂದ ನಂದನ ಬಾರೊ || ಪ || ಎನಗೆ ನಿನ್ನ । ಸೌಂದರ್ಯ ಲೀಲೆಯ ತೋರೋ ।।ಅ ।।
ಕೊಳಲನೂದುವ ಚೆಂದದಿ ಹಣೆಯಲ್ಲಿ ಸುಳಿಗೂದಲಾಡುವಂದದಿ|
ತುಳಸೀ ಪುಷ್ಪದ ಬೃಂದದಿ। ಪುರದಾಚೆಯಲಿ । ನಲಿದಾಡುವಂದದಿ ।
ಘಲ ಘಲ ಘಲ ಘಲ ನಲಿವ ಕುಂಡಲ ನಿಜ । ತೋಳುಗಳೊಪ್ಪುವ ಬಾಮರಿಗಳಿಂದ ।
ಥಳ ಥಳ ಥಳ ಥಳ ಕಾಂತಿಗಳಿಂದ ।।೧।।
ಮಣಿಯಿಲ್ಲದ ಕೌಸ್ತುಭದಿ । ಎಸೆವ । ಮುಕುಟ ಮಣಿಹಾರ ಶ್ರೀ ವತ್ಸಾದಿ ।
ಮಣಿಮಯ ಕಿರೀಟದಿ । ಅಂದದೊಪ್ಪುವ ।
ಅಗಣಿತ ಮಹತೇಜದಿ । ಝಣ ಝಣ ಝಣ ಝಣ ಝಂ ಪರಿಮಳದಿ ।
ಕಿಣಿ ಕಿಣಿ ಕಿಣಿ ಕಿಣಿ ಕಿಂಕಿಣಿ ರವದಿಂದ ।ರಣ ರಣ ರಣ ರಣ ಉಡುಝಂಗೆಗಳಿಂದ ।।೨।।
ಅಮಿತ ಜಯ ಪಾಂಡುರಂಗ । ವಿಜಯಭಾವ । ಅಮರೇಶತುಂಗ ।
ವಿಮಲಮರಿ ಅಂತರಂಗ । ಪುರಂದರ ವಿಟ್ಠಲೇಶ ನಿಕರತುಂಗ ।
ಘಮ ಘಮ ಘಮ ಘಮ ಘಂ ಪರಿಮಳದಿ ।
ಅಮರರು ಮೃದಂಗ ತಾಳಗಳಿಂದ । ಧಿಮಿ ಧಿಮಿ ಧಿಮಿ ಧಿಮಿ ಧಿಂ ಧಿಂ ಎನ್ನುತ ।।೩।।
ನಂಬದಿರು ಈ ದೇಹ
ನಂಬದಿರು ಈ ದೇಹ ನಿತ್ಯವಲ್ಲ । ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೆ ।।ಪ ।।
ಎಲು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ । ಒಳಗೆ ಮಲಮೂತ್ರಾದಿ ಕ್ರಿಮಿಗಳಿರವು ।
ಹಲವು ವ್ಯಾಧಿಯ ಬೀಡು ಪಂಚಭೂತದ ನಾಡು । ಬಲುಹು ದೇಹವ ನೆಚ್ಚಿ ಕೆಡಬೇಡ ಮನುಜ ।।೧।।
ಸತಿಸುತರು ಹಿತರೆಂದು ಮತಿ ಮರೆತು ಮಮತೆಯಲಿ । ಅತಿಕಾಂಕ್ಷೆಯಿಂದ ದುರ್ವಿಷಯ ಬಲಿದು ।
ಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದ । ಗತಿಶೂನ್ಯನಾಗಿ ನೀ ಕೆಡಬೇಡ ಮನುಜ ।।೨।।
ಪರರ ನಿಂದಿಸದೆ ಪರವಧುಗಳನು ಬಯಸದೆ । ಗುರುವಿಪ್ರ ಸೇವೆಯನು ಮಾಡು ಬಿಡದೆ ।
ಹರಿಸ್ತುತಿಯ ನೀ ಕೇಳು ಹರಿ ಕೀರ್ತನೆಯ ಮಾಡು । ಸಿರಿಪುರಂದರ ವಿಠಲನೊಲಿದು ಪಾಲಿಸುವ ।।೩।।
ನಂಬಬೇಡಿ ನಾರಿಯರನು।
ನಂಬಬೇಡಿ ನಾರಿಯರನು। ಹಂಬಲ ಹಾರೈಸಬೇಡಿ ।।ಪ॥
ಅಂಬುಜಾಕ್ಷಿಯರೊಲುಮೆ। ಡಂಬಕವೆಂದು ತಿಳಿಯಿರೊ ।।ಅ॥
ಮಾಟವೆಲ್ಲ ಪುಸಿಯು ಸತಿಯರಾಟವೆಲ್ಲ ಸಂಚು ಸನ್ನೆ। ನೋಟವೆಲ್ಲ ಘನ್ನ ಘಾತಕ ಕೂಟವೆಲ್ಲ ವಂಚನೆ। ಪಾಟುಗೆಟ್ಟು ಹೆಂಗಳೊಡನೆ ಕೋಟಲೆಗೊಂಡು ತಿರುಗಬೇಡಿ। ನೀಟುಗಾತಿಯರೊಲುಮೆ ಬೂಟಕವೆಂದು ತಿಳಿಯಿರೋ ।।೧।।
ಸೋತನೆಂದು ವಿಟಗೆ ದೈನ್ಯ ಮಾತನಾಡಿ ಮರುಳುಗೊಳಿಸಿ। ಕಾತರವನು ಕೊಟ್ಟು ಅವನ ಮಾತಾಪಿತರ ತೊಲಗಿಸಿ । ಪ್ರೀತಿಪಡಿಸಿ ಹಣವ ಸೆಳೆದು ರೀತಿಗೆಡಿಸಿ ಕಡೆಯಲವನ । ಕೋತಿಯಂತೆ ಮಾಡಿಬಿಡುವ ಜಾತಿಕಾರ ಹೆಂಗಳ ।।೨।।
ಧರಣಿ ಜನರು ಕೇಳಿ ಲೇಶ ಕರುಣವಿಲ್ಲ ನಾರಿಯರಿಗೆ । ಎರಳೆ ಕಂಗಳ ಹೆಂಗಳೊಲುಮೆ ಬರೆಹ ನೀರಮೇಲಿನ । ಸರಸಮುಖಿಯರಿರವ ನೀವು ಬರಿದೆ ನಂಬಿ ಕೆಡಲುಬೇಡಿ। ಗುರುಪುರಂದರವಿಠಲರಾಯನ ಚರಣ ನಂಬಿ ಬದುಕಿರೊ ।।೩।।
ನಂಬಿ ಕೆಟ್ಟವರಿಲ್ಲವೋ । ರಂಗಯ್ಯನ।
ನಂಬಿ ಕೆಟ್ಟವರಿಲ್ಲವೋ । ರಂಗಯ್ಯನ। ನಂಬದೆ ಕೆಟ್ಟರೆ ಕೆಡಲಿ ।।ಪ॥
ಅಂಬುಜನಾಭನ ಪಾದವ ನೆನೆಯೆ ಭ। ವಾಂಬುಧಿ ದು:ಖವ ಪರಿಹರಿಸುವ ಕೃಷ್ಣ ।।ಅ॥
ಬಲಿಯ ಪಾತಾಳಕ್ಕೆ । ಇಳಿಸಿ ಭಕ್ತ। ಗೋಳಿದು ಬಾಗಿಲ ಕಾಯ್ದನು।
ಛಲದೊಳು ಅಸುರನ ಶಿರಗಳ ತರಿದು ತಾ । ನೊಲಿದು ವಿಭೀಷಣಗೆ ಪಟ್ಟಗಟ್ಟಿದ ಕೃಷ್ಣ ।।೧।।
ತರಳ ಪ್ರಹ್ಲಾದಗೊಲಿದು । ಉಗುರಿನಿಂದ । ಹಿರಣ್ಯನುದರ ಸೀಳಿದ।
ಕರಿರಾಜಗೊಲಿದು ನೆಗಳು ನುಂಗುತಿರಲಾಗಿ। ಶಿರವ ತರಿದು ಕಷ್ಟ ಪರಿಹರಿಸಿದ ಕೃಷ್ಣ ।।೨।।
ಪಾಂಡವರಿಂಗೊಲಿದು। ಕೌರವರನ್ನು। ತುಂಡು ಛಿದ್ರವ ಮಾಡಿದ।
ಅಂಡಲೆದು ದ್ರೌಪದಿ ಸಭೆಯೊಳು ಕೂಗೆ। ಬಂದು ಕಾಯ್ದ ಶ್ರೀ ಪುರಂದರವಿಠಲ ।।೩।।
ನಂಬಿದೆ ನಿನ್ನ ಪಾದವ।
ನಂಬಿದೆ ನಿನ್ನ ಪಾದವ। ವೇಂಕಟರಮಣ । ನಂಬಿದೆ ನಿನ್ನ ಪಾದವ।।ಪ॥
ನಂಬಿದೆ ನಿನ್ನ ಪಾದಾಂಬುಜಯುಗಳವ। ಚೆಂದದಿ ಸಲಹೋ ಮಂದರಧರನೆ ।।ಅ॥
ತಂದೆಯು ನೀನೆ । ತಾಯಿಯು ನೀನೆ । ಬಂಧುಬಳಗವು ನೀನೆ ।
ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ। ಬಂದೆನ್ನ ಸಲಹೊ ಮುಕುಂದ ಮುರಾರಿ ।।೧।।
ಚಿಕ್ಕಂದು ಮೊದಲು ನಾನು। ನಿನ್ನಯ ಪಾದ। ಹೊಕ್ಕು ಜೀವಿಸುತಿಹೆನು ।
ಘಕ್ಕನೆ ಜ್ಞಾನವ ಅಕ್ಕರದಿಂದಲೆ ಕೊಡು। ಮಕ್ಕಳ ಮಾಣಿಕ್ಯ ರುಕ್ಮಿಣಿಯರಸ ।।೨।।
ಮರೆತು ಮಾಯದೊಳು। ಮುಳುಗಿದೆ ಮಾಯೆ। ವರಿತು ಅರಿಯದಾದ।
ಮರೆಯದೆ ಎನನ್ನು ಸಲಹೊ ಕೃಪಾನಿಧಿ। ವರದ ಶ್ರೀ ವೇಂಕಟ ಪುರಂದರ ವಿಠಲ ।।೩।।
ನಂಬಿದೆ ನಿನ್ನ ಪಾದ ನರಸಿಂಹ
ನಂಬಿದೆ ನಿನ್ನ ಪಾದ ನರಸಿಂಹ । ಎನ್ನ । ಬೆಂಬಿಡದೆ ಸಲಹಯ್ಯ ನರಸಿಂಹ । ಹಂಬಲಿಸುವೆನು ಬಲು ನರಸಿಂಹ। ಪಾದ। ನಂಬಿದವರನು ಕಾಯೊ ನರಸಿಂಹ ।।೧।।
ತುಂಬುರು ನಾರದ ಪ್ರಿಯ ನರಸಿಂಹ। ಚೆಲ್ವ । ಶಂಬರಾರಿಯ ಪಿತನೆ ನರಸಿಂಹ। ಅಂಬರೀಷನ ಕಾಯ್ದೆ ನರಸಿಂಹ। ಜಗದಂಬರಮಣನೆ ಸಿರಿ ನರಸಿಂಹ।।೨।।
ಬಾಲ ಕರೆದಲ್ಲಿ ಬಂದೆ ನರಸಿಂಹ। ಭಕ್ತ। ಪಾಲಿಪ ದಯಾಳು ಸಿರಿ ನರಸಿಂಹ। ಲೀಲೆಯಿಂದ ಹಿರಣ್ಯನ ನರಸಿಂಹ। ಕೊಂದ। ಲೋಲ ಸಿರಿಯರಸನೆ ನರಸಿಂಹ।।೩।।
ಅಚ್ಯುತಾನಂದ ಗೋವಿಂದ ನರಸಿಂಹ। ಸಿರಿ । ಸಚ್ಚಿದಾನಂದ ಮುಕುಂದ ನರಸಿಂಹ। ಕಿಚ್ಚಿ ನಂದದಿ ಬೆಂದ ನರಸಿಂಹ। ಭವ। ವಿಚ್ಚೆಯಿಂದ ಬಿಡಿಸಯ್ಯ ನರಸಿಂಹ।।೪।।
ಕರಿ ಮೊರೆಯನು ಕೇಳಿ ನರಸಿಂಹ। ಬಲು। ಭರದಿಂದೊದಗಿ ಬಂದೆ ನರಸಿಂಹ। ಗರುಡವಾಹನನಾಗಿ ನರಸಿಂಹ ಉ। ಧ್ಧರಿಸಿ ಕಾಯ್ದೆಯಲ್ಲೊ ನರಸಿಂಹ।।೫।।
ದೇವರ ದೇವನು ನೀನೆ ನರಸಿಂಹ। ಬೇರೆ । ಕಾವರನು ಕಾಣೆನಯ್ಯ ನರಸಿಂಹ। ಭಾವಜನಯ್ಯನೆ ಸಿರಿ ನರಸಿಂಹ। ನಿನ್ನ। ಸೇವೆಯ ಪಾಲಿಸಿ ಕಾಯೊ ನರಸಿಂಹ ।।೬।।
ತಂದೆ ತಾಯಿ ಗುರು ದೈವ ನರಸಿಂಹ। ಎನ್ನ। ಬಂಧುಬಳಗವು ನೀನೆ ನರಸಿಂಹ। ಕುಂದು ಹೆಚ್ಚು ನೋಡಬೇಡ ನರಸಿಂಹ। ಪು। ರಂದರವಿಠಲ ಕಾಯೊ ನರಸಿಂಹ ।।೭।।
ನಂಬಿ ಭಜಿಸಿರೋ । ಜನರು।
ನಂಬಿ ಭಜಿಸಿರೋ । ಜನರು। ನಂಬಿ ಭಜಿಸಿರೋ ।।ಪ।।
ನಂಬಿ ಭಜಿಸಿ ಜನದ ಡಂಭಕತನವ ಬಿಟ್ಟು। ಅಂಬುಜಾಕ್ಷ ಚಾಣೂರಮಲ್ಲಾರಿಯ ।।ಅ॥
ಚಲ್ಲಣವ ಉಟ್ಟು ತೊಟ್ಟು ಮಲ್ಲಗಟ್ಟಿ ಬಿಗಿದು ಕಟ್ಟಿ ಗೋವ। ಳೆಲ್ಲರೊಡನೆ ಕೂಡಿ ಪೊಕ್ಕು ಮಲ್ಲರಂಗವ ಬಲರಾಮ ಕೂಡಿ ಆಡಿ ಕು। ವಲಯಗಜ ಪಿಡಿದು ಇಂಥಾ। ಬಿಲ್ಲನು ಲಘುಮಾಡಿದನೆಂಬ ಮಲ್ಲಾರಿಯ ।।೧।।
ಅಟ್ಟಿಗುಟ್ಟಿ ತೋಳು ತೊಡೆಯ ತಟ್ಟಿ ಬೊಬ್ಬೆ। ನಿಟ್ಟು ಬೆನ್ನಟ್ಟಿ ಗಗನಕ್ಕೆ ಪುಟನೆಗೆಯುತ। ಬಿಟ್ಟ ಮುಷ್ಟಿಕನ ಗೋಣು ಮೆಟ್ಟ್ಯತುಳ ರಜಕ। ಜಟ್ಟಿ ಮೆರೆದ ಚಾಣೂರಮಲ್ಲಾರಿಯ ।।೨।।
ಕೊಂಬು ಕೊಳಲು ಡೆಕ್ಕೆ ಢಕ್ಕೆ ಬೊಬ್ಬುಳಿಯಲ್ಲಿ ಬಾರಿಸುತ್ತ। ಭೊಂ ಭೊಂ ಭೊಂ ಭೊಂ ಭೊಂ ಎಂಬ ರಭಸದಿ। ಶಂಬರನ್ನ ಮಾಯವಿಡಲು ಅಂಬುಂಧಿಯೊಳಗಲ್ಲಾಡಿ। ಅಂಬುಜಾಕ್ಷ ಚಾಣೂರಮಲ್ಲಾರಿಯ ।।೩।।
ಮಂಡೆ ಗಲ್ಲವ ಪಿಡಿದು ದೈತ್ಯ ಬಿಡದೆ ಬಲದ। ದೊಡ್ಡ ತಾಂಡವ ಚಾಣೂರ ಶಿರವ ಕುಡಿಯುತ। ಖಂಡ ತುಂಡ ಮಾಡಿ ಅಸುರ। ಕಂಡು ಹಾ ಹಾ ಎನಲು ಜಗದಿ ಮೆರೆದ ಚಾಣೂರ ಮಲ್ಲಾರಿಯ ।।೪।।
ಮಾವನ ಶಿರವ ಕಡಿದು ದೇವಕಿಗೆ ಸಂತೋಷವಿತ್ತ। ದೇವ ಉಗ್ರಸೇನಗೊಲಿದು ಪಟ್ಟಗಟ್ಟಿದ। ದೇವತೆಯರು ಗಗನದಲ್ಲಿ ಪೂವಿನ ಮಳೆಗರೆಯಲಾಗಿ। ದೇವ ಪುರಂದರವಿಠಲರಾಯ ತಾನು ಮೆಚ್ಚಿದ ।।೫।।
ನಂಬು ಕಂಡ್ಯ ಮನವೆ।
ನಂಬು ಕಂಡ್ಯ ಮನವೆ। ನಂಬು ಶ್ರೀ ಕೃಷ್ಣನ ಚರಣಕಮಲವ ।।ಪ॥
ಒಂಭತ್ತು ಬಾಗಿಲ ಪಟ್ಟಣದೊಳಗೆ। ಸಂಭ್ರಮದಿಂದ ಬೈಲಾಗದ ಮುನ್ನ ನೀ। ।।೧।।
ಆರು ಮಂದಿ ಕಳ್ಳರು ಊರೊಳಗೆ। ಸೂರೆ ಮಾಡಿ ಗಾಸಿಮಾಡದ ಮುನ್ನ ನೀ ।।೨।।
ಏಳು ಸುತ್ತಿನ ಕೋಟೆ ಘನದುರ್ಗವನ್ನು। ಕಾಲನವರು ಬಂದು ಕರೆಯದ ಮುನ್ನ ನೀ ।।೩।।
ದೇಹ ನಾಯಕ ದೇವರು ತಾವು। ದೇಹದ ಬಿಡಕೆ ಬಿಡಪಾದ ಮುನ್ನ ನೀ ।।೪।।
ಪುರವಿದು ಸ್ಥಿರವಲ್ಲ ಮೆಚ್ಚಿ ಕೆಡಲು ಬೇಡ। ಪುರಂದರವಿಠಲನ್ನ ಆ ಪಾದಪದುಮವ ।।೫।।
ನಮ್ಮ ದೇವ ನಿಮ್ಮ ದೇವ
ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನಬೇಡಿ । ಬೊಮ್ಮನ ಪಡೆದ ದೇವನೊಬ್ಬನೆ ಕಾಣಿರೊ ।।ಪ॥
ಆದಿಯಲ್ಲಿ ಕರಿ ಮಕರಿಗೆ ಸಿಕ್ಕಿ ಬಾಧೆಯಿಂದ। ಆದಿದೇವ ಕಾಯೆಂದು ಮೊರೆಯಿಡಲು।
ಆ ದೇವ ಈ ದೇವ ಕಾಯ್ದುದಿಲ್ಲ ಕೇಳಿ। ಮಾಧವ ತಾ ಬಂದು ಸಲಹಿದ ಕಾರಣ ।।೧।।
ಹರಿ ಹರ ಬ್ರಹ್ಮರೊಳು ಹಿರಿಯವರಾರೆಂದು। ಪರಿಕಿಸಿ ಸುರಾಸುರರೆಲ್ಲರನು।
ವರ ಭೃಗುಮುನಿ ಬಂದು ಕರವೆತ್ತಿ ಸ್ಥಿರವಾಗಿ। ಹರಿಯೇ ಪರದೈವವೆಂದು ಅರುಹಿದ ಕಾರಣ ।।೨।।
ಏಕೋ ವಿಷ್ಣು ಎಂತೆಂದು ವೇದಗಳು ಅ। ನೇಕ ಮುಖಗಳಿಂದ ಸಾರುತಿರೆ।
ಕಾಕುಮತಿಯ ನೀಗಿ ಜೋಕೆಯಿಂದ ಭಜಿಸಿರೊ । ಶ್ರೀಕಾಂತ ಪುರಂದರವಿಠಲರಾಯನ ।।೩।।
ನಮ್ಮ ಶಾಸ್ತ್ರ ಇಲ್ಲಿ ಮಾರುವುದಲ್ಲ।
ನಮ್ಮ ಶಾಸ್ತ್ರ ಇಲ್ಲಿ ಮಾರುವುದಲ್ಲ। ಸುಮ್ಮನಿದ್ದರೆ ಯಾರು ಕೇಳುವರಿಲ್ಲ ।।ಪ॥
ಏಡಿ ಕಡಗವಿಟ್ಟು ಫಲವೇನಿಲ್ಲ। ಬೇಡ ತಾ ಮುತ್ತಿನ ಬೆಲೆ ಏನು ಬಲ್ಲ। ಕಾಡ್ಹಳ್ಳಿಗೌಡ ತಾ ಅರಸಾಗಲಿಲ್ಲ। ವೇದಶಾಸ್ತ್ರಕೆ ಮೂಢ ತಲೆದೂಗಲಿಲ್ಲ ।।೧।।
ಮೂಕ ತಾ ಮಾತಿನ ಸವಿ ಏನು ಬಲ್ಲ । ಲೌಕಿಕ ಬೇನೆ ಸನ್ಯಾಸೇನು ಬಲ್ಲ ।
ಕಾಕುಮಾನವ ಪುಣ್ಯ ಪಾಪೇನು ಬಲ್ಲ। ಶ್ರೀ ಕೃಷ್ಣನ ನೆನೆಯದವ ಮಾನವನಲ್ಲ ।।೨।।
ಕತ್ತೆ ಹೂರಣದ ರುಚಿ ತಿಳಿಯಲಿಲ್ಲ। ತೊತ್ತಿಗೆ ಪತಿವ್ರತೆ ಗುಣ ಬರಲಿಲ್ಲ।
ಮುತ್ತಿನ ಹಾರ ಕಪಿಗೆ ಹಾಕ ಸಲ್ಲ। ಕುತ್ತಿಗೆ ಕೊಯ್ವಗೆ ಕರುಣವೆ ಇಲ್ಲ ।।೩।।
ಅಚ್ಚ ಹೆಣ್ಣಿನ ಸಂಗ ಷಂಡೇನ ಬಲ್ಲ । ಮುಚ್ಚಿ ಮಾತ್ಹೇಳಿದರೆ ನ್ಯಾಯವೇನಿಲ್ಲ।
ಸ್ವಚ್ಛ ದೀಪದ ಬೆಳಕು ಕುರುಡೇನು ಬಲ್ಲ। ಮೊಚ್ಚೆಗಾರ ಸಕಲಾತ್ಯೇನು ಬಲ್ಲ ।।೪।।
ಹೆಣ್ಣಿಗೆ ಜಾರತ್ವ ಗುಣತರವಲ್ಲ। ತಣ್ಣೀರು ಬೇಸಿಗೆ ಗುಣ ತೋರಲಿಲ್ಲ ।
ಘನ್ನ ಪುರಂದರವಿಠಲನ ಭಕ್ತರೆ। ಅನ್ಯಾಯವರಿಯದ ಭವ ನೀಗುವಿರಲ್ಲ ।।೫।।
ನರಜನ್ಮ ಬಂದಾಗ ನಾಲಿಗೆ ಇರುವಾಗ
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ।।ಪ॥
ಕೃಷ್ಣಾ ಎಂದರೆ ಕಷ್ಟವು ಪರಿಹಾರ ಕೃಷ್ಣ ಎನಬಾರದೆ ।।ಅ॥
ಮಲಗಿದ್ದು ಮೈಮುರಿದೇಳುತ್ತಲೊಮ್ಮೆ ಶ್ರೀಕೃಷ್ಣಾ ಎನಬಾರದೆ ।
ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣಾ ಎನಬಾರದೆ ।।೧।।
ಸ್ನಾನ ಪಾನ ಜಪ ತಪಗಳ ಮಾಡುತ ಕೃಷ್ಣಾ ಎನಬಾರದೆ ।
ಶಾಲ್ಯಾನ್ನ ಷಡುರಸ ತಿಂದು ತೃಪ್ತನಾಗಿ ಕೃಷ್ಣಾ ಎನಬಾರದೆ ।।೨।।
ಗಂಧವ ಪೂಸಿ ತಾಂಬೂಲವ ಮೆಲುವಾಗ ಕೃಷ್ಣಾ ಎನಬಾರದೆ ।
ಚೆಂದುಳ್ಳಿ ಹಾಸಿಗೆಯೊಳು ಕುಳಿತೊಮ್ಮೆ ಶ್ರೀ ಕೃಷ್ಣಾ ಎನಬಾರದೆ ।।೩।।
ಕಂದನ್ನ ಬಿಗಿ ಬಿಗಿದಪ್ಪಿ ಮುದ್ದಾಡುತ ಕೃಷ್ಣಾ ಎನಬಾರದೆ ।
ಮಂದಗಾಮಿನಿಯೊಳು ಸರಸವಾಡುತಲೊಮ್ಮೆ ಕೃಷ್ಣಾ ಎನಬಾರದೆ ।।೪।।
ಮೇರೆ ತಪ್ಪಿ ಮಾತನಾಡುವಾಗಲೊಮ್ಮೆ ಕೃಷ್ಣ ಎನಬಾರದೆ ।
ದಾರಿಯ ನಡೆವಾಗ ಭಾರವ ಹೊರುವಾಗ ಕೃಷ್ಣಾ ಎನಬಾರದೆ ||೫।।
ಪರಿಹಾಸ್ಯದ ಮಾತನಾಡುತಲೊಮ್ಮೆ ಶ್ರೀ ಕೃಷ್ಣಾ ಎನಬಾರದೆ ।
ಪರಿ ಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣಾ ಎನಬಾರದೆ ।।೬।।
ದುರಿತ ರಾಸಿಗಳನು ತರಿದು ಬಿಸಾಡುವ ಕೃಷ್ಣಾ ಎನಬಾರದೆ।
ಗರುಡಗಮನ ನಮ್ಮ ಪುರಂದರವಿಠಲನ ಕೃಷ್ಣಾ ಎನಬಾರದೆ॥ ೭।।
ನರನಾದ ಮೇಲೆ ಹರಿನಾಮ
ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು ।।ಪ॥
ಭೂತದಯಾಪರನಾಗಿರಬೇಕು । ಪಾತಕವೆಲ್ಲವ ಕಳೆಯಲು ಬೇಕು। ಮಾತು ಮಾತಿಗೆ ಹರಿಯೆನ್ನಬೇಕು ।।೧।।
ಆರು ವರ್ಗವನಳಿಯಲು ಬೇಕು । ಮೂರು ಗುಣಂಗಳ ಮೀರಲು ಬೇಕು। ಸೇರಿ ಬ್ರಹ್ಮನೊಳಿರಬೇಕು॥೨।। ಅಷ್ಟಮದಂಗಳ ತುಳಿಯಲು ಬೇಕು। ದುಷ್ಟರ ಸಂಗವ ಬಿಡಲು ಬೇಕು । ಕೃಷ್ಣ ಕೇಶವ ಎನ್ನಬೇಕು ।।೩।। ವೇದಶಾಸ್ತ್ರವನೋದಲು ಬೇಕು । ಭೇದಹಂಕಾರವ ನೀಗಲು ಬೇಕು। ಮಾಧವಸ್ಮರಣೆಯೊಳಿರಬೇಕು ।।೪।। ಶಾಂತಿ ಕ್ಷಮೆ ದಮ ಪಿಡಿಯಲು ಬೇಕು । ಭ್ರಾಂತಿ ಕ್ರೋಧವ ಕಳೆಯಲು ಬೇಕು । ಸಂತರ ಸಂಗದಿರತಿಯಿರಬೇಕು ।।೫।।
ಗುರುವಿನ ಚರಣಕ್ಕೆರಗಲು ಬೇಕು । ತರಣೋಪಾಯವನರಿಯಲು ಬೇಕು । ವಿರಕ್ತಿಮಾರ್ಗದಲಿರಬೇಕು ।।೬।।
ಬಂದದ್ದುಂಡು ಸುಖಿಸಲು ಬೇಕು । ನಿಂದಾಸ್ತುತಿಗಳ ತಾಳಲು ಬೇಕು । ತಂದೆ ಪುರಂದರವಿಠಲನೆನಬೇಕು ।।೭।।
ನನ್ನಿಂದ ನಾನೇ
ನನ್ನಿಂದ ನಾನೇ ಜನಿಸಿ ಬಂದೆನೆ ಕೃಷ್ಣ?
ಎನ್ನ ಸ್ವತಂತ್ರವು ಲೇಶವಿದ್ದರೂ ತೋರೋ |ಪ|
ಕಂದನ ಆಡಿಸುತ್ತಿರೆ ತಾಯ
ಕಂದ ಬಾವಿಯ ಅಂಚಿಗೆ ಹೋಗುತ್ತಿರೆ
ಬಂದು ಬೇಗನೆ ಬಿಗಿದಪ್ಪದಿರಲು
ಆ ಕಂದನ ತಪ್ಪೋ? ಮಾತೆಯ ತಪ್ಪೋ? ಪರಮಾತ್ಮಾ||೧||
ದೂರು ನಿನ್ನದು ದಾರಿ ನಿನ್ನದು ರಂಗ
ನಾರೀ ಮಕ್ಕಳ ತನು ಮನ ನಿನ್ನದಯ್ಯ ||೨||
ನ್ಯಾಯವಾದರೆ ದುಡುಕು ನಿನ್ನದೋ ರಂಗ
ಮತ್ತನ್ಯಾಯವಾದರೆ ಪೇಳುವರಾರೋ ||೩||
ಮಾಯಾರಹಿತ ಕಾಗಿನೆಲೆಯಾದಿ ಕೇಶವ
ಕಾಯಯ್ಯ ಎನ್ನನು ಮರೆಯದೆ ವಿಠಲಯ್ಯ ||೪||
ನಂಬಿ ಕೆಟ್ಟವರಿಲ್ಲವೊ ರಂಗೈಯನ
ನಂಬಿಕೆಟ್ಟವರಿಲ್ಲವೊ ರಂಗೈಯನ | ನಂಬದೆ ಕೆಟ್ಟರೆ ಕೆಡಲಿ ||ಪ||
ಅಂಬುಜನಾಭನ ಅಖಿಳ ಲೋಕೇಶನ | ಕಂಬು ಕಂಧರ ಕೃಷ್ಣ ಕರುಣಾ ಸಾಗರನ ||ಅ.ಪ||
ತರಳ ಪ್ರಹ್ಲಾದ ಸಾಕ್ಷಿ ಸರಸಿಯೊಳಿದ್ದ | ಕರಿರಾಜನೊಬ್ಬ ಸಾಕ್ಷಿ ||೧||
ಮರಣಕಾಲದಿ ಅಜಾಮಿಳ ಮಗನನು ಕರೆಯೆ |
ಗರುಡನೇರಿ ಬಂದ ಗರುವ ರಹಿತನ ||೨||
ದೊರೆಯು ತನ್ನ ಪುತ್ರನನ್ನು | ಕೊರಳ್ ಹಿಡಿದು ಹೊರಡಿಸಲು ||೩||
ಅರಣ್ಯದೊಳಗವನಿದ್ದ ಸ್ಥಳದಲ್ಲಿ| ಭರದಿಂದೋಡಿ ಬಂದ ಭಕ್ತವತ್ಸಲನ್ನ ||೪||
ತರುಣಿ ದ್ರೌಪದಿ ಸೀರೆಯ ದುಶ್ಯಾಸನ | ಸರಸರ ಸೆಳೆಯುತಿರೆ ||೫||
ಕರುಣಿ ತನ್ನೊಡತಿಯೊಡನೆ ಆಡುವುದ ಬಿಟ್ಟು | ತ್ವರದಿ ಅಕ್ಷಯವಿಟ್ಟ ಸಿರಿ ಕೃಷ್ಣರಾಯನ ||೬||
ನಮೋ ಪಾರ್ವತೀಪತಿ ನುತಜನಪರ ನಮೋ
ನಮೋ ಪಾರ್ವತೀಪತಿ ನುತಜನಪರ ನಮೋ ವಿರೂಪಾಕ್ಷ ||ಪ||
ರಮಾರಮಣನಲ್ಲಮಲ ಭಕುತಿ ಕೊಡು ನಮೋ ವಿಶಾಲಾಕ್ಷ ||ಅ||
ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷ |
ಫಾಲನೇತ್ರ ಕಪಾಲ ರುಂಡಮಣಿ ಮಾಲಾಧೃತ ವಕ್ಷ |
ಶ್ರೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧಕ್ಷ |
ಶ್ರೀ ಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ ||೧||
ವಾಸವನುತ ಹರಿದಾಸ ಈಶ ಕೈಲಾಸವಾಸ ದೇವ |
ದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ |
ಭಾಸಿಸುತಿಹುದಶೇಷ ಜೀವರಿಗೆ ಈಶನೆಂಬ ಭಾವ |
ಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ ||೨||
ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೋ ಸರ್ವತ್ರ |
ಹತ್ತಿರ ಕರೆದು ಅಪತ್ಯನಂದದಿ ಪೊರೆಯುತ್ತಿರೊ ತ್ರಿನೇತ್ರ |
ತೆತ್ತಿಗನಂತೆ ಕಾಯುತ್ತಿಹ ಬಾಣನ ಸತ್ಯದಿ ಸುಚರಿತ್ರ |
ಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತೃ ಕೃಪಾಪಾತ್ರ ||೩||
ನಮಸ್ತೆ ವಿಮಲೆ ಕೋಮಲೆ ರಮಾದೇವಿ
ನಮಸ್ತೆ ವಿಮಲೆ ಕೋಮಲೆ ರಮಾದೇವಿ | ನಮಸ್ತೆ ನಮಸ್ತೆ ||ಪ||
ತರುಣಿ ಶಿರೋಮಣಿ
ನಿನ್ನ ಶೀಲ ಸೌಂದರ್ಯವನು | ಧರೆಯೊಳು ವರ್ಣಿಸುವ ಕವಿಯು ದಾವ | ಸ್ವರಮಣನೆನಿಪ
ರಮಣನುರದೊಳೆಂದೆಂದು ನೀ | ನರಮನೆಯ ಮಾಡಿ ಭಾಪುತೆ ಮೆರೆದೆಲೆಲೆ ||೧||
ತನ್ನ ಮೈಯಿಂದ ಮಕ್ಕಳ ಸೃಜಿಸಿ ಯುಗಯುಗದಿ ನಿನ್ನ ತಾರುಣ್ಯ ಲಾವಣ್ಯಗಳನು | ಮನ್ನಿಸಿ
ಪೊರೆದ ಹರಿಯ ಪಟ್ಟದ ರಮಣಿ ಜಗ | ನ್ಮಾನ್ಯೆ ಚೈತನ್ಯೆ ಲಾವಣ್ಯೆ ಗುಣಗಣಸದನೆ ||೨||
ನಿನ್ನಂಗವಪ್ಪಲು ನೋಡಲು ಮುಖವ ಚುಂಬಿಸಲು | ಅನಂತ ಕರ ವಕ್ತ್ರನೇತ್ರಗಳು |
ಪೂರ್ಣ ಹಯವದನ ಕೈಕೊಂಡ ನಿನ್ನ ಗಂಡ | ಸ್ವರ್ಣಸಮವರ್ಣೆ ಕರ್ಣಾಯಿತಾಕ್ಷಿ ||೩||
ನಂಬು ನಂಬು ನಾರಾಯಣನ
ನಂಬು ನಂಬು ನಾರಾಯಣನ ಈ | ಮಿಕ್ಕ ದೈವಗಳು ಕಾಯಬಲ್ಲವೆ ||ಪ||
ಅಂಬರದಿ ಧ್ರುವನ್ನ ನೋಡು ಈ ಭಕ್ತಿಮೌಳಿ | ಯೆಂಬೊ ಪ್ರಹ್ಲಾದನ್ನ ನೋಡು | ಕುಂಭಿಣಿಯೊಳು
ವಿಭೀಷಣಗೆ ಶ್ರೀರಾಮ ಕೊಟ್ಟ | ತುಂಬಿದ ಭಾಗ್ಯವ ನೋಡಯ್ಯ ||೧||
ಹಿರಣಾಕ್ಷನೆಂಬೊ ದೈತ್ಯನ ಆ ಸಿರಿಯೆಲ್ಲ | ಕರಗಿ ಹೋದದ್ದು ನೋಡಯ್ಯ |
ದುರುಳರಾವಣ ಏನಾದ ಆ ದುಃಖವನ್ನು | ಪಾರಂಪರ್ಯದಿಂದ ಕೇಳಯ್ಯ ||೨||
ನ್ಯಾಯಕ್ಕಾಗಿ ಮನೆಗೆ ಬಂದ ಶ್ರೀಕೃಷ್ಣನ| ಕಟ್ಟಿದ ಖಳನೇನಾದ |
ಹಯವದನನ್ನ ನಂಬಿದ ನಮ್ಮ ಧರ್ಮರಾಯನ ಭಾಗ್ಯ ನೋಡಯ್ಯ ||೩||
ನಮ್ಮಮ್ಮ ಶಾರದೆ
ನಮ್ಮಮ್ಮ ಶಾರದೆ ಉಮಾಮಹೇಶ್ವರಿ | ನಿಮ್ಮೊಳಗಿಹನ್ಯಾರಮ್ಮ ||ಪ||
ಕಮ್ಮಗೋಲನ ವೈರಿ ಸುತನಾದ ಸೊಂಡಿಲ |ಹೆಮ್ಮೆಯ ಗಣನಾಥನೆ ||ಅ||
ಮೋರೆಕಪ್ಪಿನ ಭಾವ ಮೊರದಗಲದ ಕಿವಿ ಕೋರೆ ದಾಡೆಯವನ್ಯಾರಮ್ಮ|
ಮೂರುಕಣ್ಣಿನ ಸುತ ಮುರಿದಿಟ್ಟ ಚಂದ್ರನ | ಧೀರ ತಾ ಗಣನಾಥನೆ ಅಮ್ಮಯ್ಯ ||೧||
ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ | ದಿಟ್ಟ ತಾನಿವನ್ಯಾರಮ್ಮ|
ಪಟ್ಟದ ರಾಣಿ ಪಾರ್ವತಿಯ ಕುಮಾರ | ಹೊಟ್ಟೆಯ ಗಣನಾಥನೆ ಅಮ್ಮಯ್ಯ ||೨||
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ | ಭಾಷಿಗನಿವನ್ಯಾರಮ್ಮ|
ಲೇಸಾಗಿ ಜನರ ಸಲಹುವ ನೆಲೆಯಾದಿ | ಕೇಶವನ ದಾಸ ಕಾಣೆ ಅಮ್ಮಯ್ಯ ||೩||
ನರಸಿಂಹ ವಜ್ರಸಿಂಹ
ನರಸಿಂಹ ವಜ್ರಸಿಂಹ | ಸರಸಿಜನಾಭಾ ದಕ್ಷಿಣ ಶರಧಿನಿವಾಸಾ ||ಪ||
ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು | ಪರಿಯ ದೈವವೆ ಮೊರೆಹೋಗಲೂ |
ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು | ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ||೧||
ಭುಗಿಲೆನೆ ಧಿಗಿಲೆನೆ ದಿಕ್ಕಿನಲಿ ಪ್ರತಿ ಶಬ್ದ ಪುಟ್ಟಿತಿರೆ | ಗಲಿರುಳು ಒಂದೆಂದರು ಸಕಲರೂ |
ಝಗಝಗಿಪ ಬೆಳಗು ಕವಿದುದು ಮೂರು ಲೋಕಕ್ಕೆ|ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ||೨||
ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆ | ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ | ಕಕ್ಕಸದ
ದೈವ ಅನಂತ ಪದುಮನಾಭ | ಮುಕ್ತಿದಾಯಕ ವಿಜಯವಿಠ್ಠಲ ಮಹದಾ ||೩||
ನಾನೇನ ಮಾಡಿದೆನೋ ರಂಗಯ್ಯ
ನಾನೇನ ಮಾಡಿದೆನೋ ರಂಗಯ್ಯ ರಂಗ ನೀ ಎನ್ನ ಕಾಯಬೇಕೋ ||ಪ||
ಮಾನಾಭಿಮಾನವು ನಿನ್ನದು ಎನಗೇನು
ದೀನರಕ್ಷಕ ತಿರುಪತಿಯ ವೆಂಕಟರಮಣ ||ಅ ಪ||
ರಕ್ಕಸಸೂದನನೇ ಕೇಳು ಧ್ರುವರಾಯ ಚಿಕ್ಕವನಲ್ಲವೇನೋ....
ಉಕ್ಕಿಬರುವಕರ್ಮ ಮಾಡಿದ ಅಜಮಿಳ ನಿಮ್ಮಕ್ಕನ ಮಗನೇನೋ.... ||೧||
ಕರೀರಾಜ ಕರೆಸಿದನೇ ದ್ರೌಪದಿದೇವಿ ಬರೆದೋಲೆ ಕಳುಹಿದಳೇ....
ಹರುಷದಿಂದಲಿ ಋಷಿಪತ್ನಿಯ ಶಾಪವ ಪರಿಹರಿಸಿದೆಯಲ್ಲೋ.... ||೨||
ಮುಪ್ಪಿಡಿ ಅವಲಕ್ಕಿಯ ತಂದವನಿಗೆ ಒಪ್ಪುವಂತೆ ಕೊಡಲಿಲ್ಲವೇ....
ಸರ್ಪಶಯನ ಶ್ರೀಪುರಂದರ ವಿಠ್ಠಲ ಅಪ್ರಮೇಯ ಕಾಯೋ.... ||೩||
ನೀ ಎನ್ನ ಕಾಯಬೇಕಯ್ಯಾ
ನೀ ಎನ್ನ ಕಾಯಬೇಕಯ್ಯಾ ಆಂಜನೇಯ ನೀ ಎನ್ನ ಕಾಯಬೇಕಯ್ಯಾ ||ಪ||
ನೀನು ಎನ್ನ ಕಾಯಬೇಕು ನಾನು ನಿನ್ನ ಭಜಿಸಬೇಕು
ನಾನು ನೀನು ಜೋಡಿಗೂಡಿ ರಾಮ ಭಜನೆಯ ಮಾಡಬೇಕು ||ಅ ಪ||
ದುಸ್ತರ ಸಂಸಾರ ಜಲಧಿ ರಾಮ ಭಜನೆಯ ನೌಕೆಯಲ್ಲಿ
ದಾಟ ಹೊರಟಿಹ ನಾನು ಪಯಣಿಗ ನೀನೆ ಅಂಬಿಗ ದಾಟಿಸಯ್ಯ ||೧||
ಆಜನ್ಮ ಬ್ರಹ್ಮಚಾರಿ ಅಪ್ರತಿಮ ಬಲಶಾಲಿ ನೀನು
ರಾಮನಾಮದ ಭಂಡಾರವ ಭಕ್ತವೃಂದಕೆ ಹಂಚಿದಾತ ||೨||