ದಾಸರಪದ (ಧ)
ಧವಳಗಂಗೆಯ ಗಂಗಾಧರ ಮಹಾಲಿಂಗ
ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ | ಧವನ ತೋರಿಸಯ್ಯ ಗುರುಕುಲೋತ್ತುಂಗ ||ಪ||
ಅರ್ಚಿಸಿದವರಿಗಭೀಷ್ಟವ ಕೊಡುವ | ಹೆಚ್ಚಿನ ಅಘಗಳ ಬೇಗನೆ
ತರಿವ | ದುಶ್ಚರಿತರನ್ನೆಲ್ಲ ದೂರದಲ್ಲಿಡುವ ನಮ್ಮಚ್ಚುತಗಲ್ಲದ ಅಸುರರ ಬಡಿವ ||೧||
ಮಾರನ ಗೆದ್ದ ಮನೋಹರಮೂರ್ತಿ | ಸಾರ ಸಜ್ಜನರಿಗೆ ಸುರ ಚಕ್ರವರ್ತಿ |
ಧಾರುಣಿಯೊಳಗೆ ತುಂಬಿದೆ ನಿನ್ನ ಕೀರ್ತಿ | ಹರಿಯ ತೋರಿಸಯ್ಯ ನಿನಗೆ ಶರಣಾರ್ಥಿ ||೨||
ಚೆನ್ನ ಪ್ರಸನ್ನ ಶ್ರೀ ಹಯವದನನ್ನ |ಅನುದಿನ ನೆನೆವಂತೆ ಮಾಡೊ ನೀ ಎನ್ನ |
ಅನ್ಯರನರಿಯೆನೊ ಗುರುವೆಂಬೆ ನಿನ್ನ | ಇನ್ನಾದರು ಹರಿಯ ತೋರೊ ಮುಕ್ಕಣ್ಣ ||೩||
ಧನ್ಯನೋ ಶೇಷಗಿರಿದಾಸ
ಧನ್ಯನೋ ಶೇಷಗಿರಿದಾಸ ನೀನೂ | ಪುಣ್ಯವಂತನು ಅಹುದೊ ಮನೊ ವಾಚದಲಿ||ಪ||
ಮುಂಗೈಯ ಮ್ಯಾಲಿನ ಗಿಳಿ ಹಾರಿಹೋದಂತೆ | ರಂಗ ಮಧ್ವನ ಸ್ಮರಣೆ ಮಾಡಿಕೊಳುತ |
ಮಂಗಳಾಂಗನಾಗಿ ಸ್ವರ್ಗಸ್ಥನಾದಿ ಕ್ಷಣ | ಭಂಗುರವೆಂಬ ಪ್ರಮಾಣ ಸಿದ್ಧಿಸಿತು ಗಡ ||೧||
ಸತ್ ಶಿಷ್ಯನೆಂದೆನಿಸಿಕೊಂಡದಕೆ ಎನ್ನ ಮ | ನೋತ್ಸಾಹ ಮಾತ್ರ ಬಂದಾಗಲಿಲ್ಲಾ | ವತ್ಸ ಕೇಳು
ಉಪಸರ್ಗ ಕೂಡಿದ ನಾಭಿ | ತತ್ಸಮಾನಾಯಿತೊ ಇಂದಿನಾರಭ್ಯವೂ ||೨||
ಒಂದೆ ಪ್ರವಾಹದೊಳು ಈಸು ಬೀಳಲು ಸುಳಿ | ಯಿಂದ ಹಿಂದಕೆ ಒಬ್ಬನಿಂದಂತೇವೆ |
ಇಂದು ಎನಗಾಯಿತೋ ಭೂಮಿಯೊಳಗೆ ಋಣಾನು | ಬಂಧ ಇಂತಿರಲಿಕ್ಕೆ ಯತ್ನ ಒಬ್ಬರದಿಲ್ಲ ||೩||
ಪರಿಣಾಮಕೆ ನಿನಗೆ ಸಾನುಕೂಲಾವಾಗಿ | ಅನಿಲದೇವನು ಒಲಿದು ಹರಿಯ ಕೂಡಾ |
ಪ್ರಣಮಪೂರ್ವಕದಿಂದ ಪಂಚತ್ವ ಐದಿದೆ ಸಾ | ಧನ ಪೂರ್ತಿಕಾಲ ಎಳ್ಳನಿತು ಉಳದಿಪ್ಪದೊ ||೪||
ವಿಧಿ ಸಂವತ್ಸರ ಭಾದ್ರಪದ ಶುಕ್ಲದ ಭಾನು | ಬಿದಿಗೆಯಲಿ ಪ್ರವರ ಗೌತಮ ಸಂಗಮಾ | ನಿಧಿಯಲಿ
ವಿಜಯವಿಠ್ಠಲನಂಘ್ರಿಯಗಳವನು | ಹೃದಯದಲಿ ಇಟ್ಟು ದೇಹದ ತ್ಯಾಗಮಾಡ್ದೆ ||೫||
ಧನ್ಯನಾದೆನು ವಿಠಲನ ಕಂಡು ಓಡಿತು
ಧನ್ಯನಾದೆನು ವಿಠಲನ ಕಂಡು ಓಡಿತು ಅಘದ್ ಹಿಂಡು ||ಪ||
ಧನ್ಯನಾದೆನೊ ಕಾಮನ್ನ ಪಿತನ ಲಾ | ವಣ್ಯಮೂರುತಿಯ ಕಣ್ಣಿಲೆ ಕಂಡು ||ಅ||
ದೇವವರೇಣ್ಯ ಸದಾ ವಿನೋದಿ ವೃಂ | ದಾವನ ಸಂಚರ ಗೋವನ ಕಂಡು ||೧||
ಮಂಗಳಾಂಗ ಕಾಳಿಂಗ ಮಥನ ಮಾ | ತಂಗವರ ವರದ ರಂಗನ ಕಂಡು ||೨||
ಹಾಟಕಾಂಬರ ಕಿರೀಟ ಸಾರಥಿ | ತಾಟಕಾರಿ ವೈರಾಟನ ಕಂಡು ||೩||
ಚಿಂತಿತ ಫಲದ ಕೃತಾಂತನಾತ್ಮಜಾ | ದ್ಯಂತರಹಿತ ನಿಶ್ಚಿಂತನ ಕಂಡು ||೪||
ಮಾತುಳಾಂತಕ ವಿಧಾತಪತಿ ಜಗ | ನ್ನಾಥ ವಿಠಲ ವಿಖ್ಯಾತನ ಕಂಡು ||೫||
ಧಣಿ ನೀನಿರಲು ತಣಿಸಿ ಪರರ
ಧಣಿ ನೀನಿರಲು ತಣಿಸಿ ಪರರ | ದಣಿವುದುಂಟೆ ಲೋಕದಿ ||ಪ||
ಕ್ಷಣ ಕ್ಷಣದಲಿ ಪೊರೆವ ಚಿಂತಾ | ಮಣಿ ನೀನಿರೆ ತ್ರಿಭುವನಕೆ ||ಅ.ಪ||
ಕರದಲಿರುವ ಮಣಿಯ ಬೆಲೆಯ | ನರಿಯದಂಥ ಮೂಢ ಜನರು |
ಪರರಿಗಿತ್ತು ಹರುಷದಿಂದ | ಪುರಿಯ ಕೊಂಬು ತೆರದಲಿ ||೧||
ಘೋರ ದುರಿತ ದೂರ ಮಾಡಿ | ಸಾರ ಫಲಗಳನ್ನು ಕೊಡುವ | ನಾರಸಿಂಗ
ಮಂತ್ರವಿರಲು | ಭೈರವನನು ಜಪಿಸುವಂತೆ ||೨||
ಪಡೆದ ಜನಕನಲ್ಲದೆನ್ನ | ನುಡಿಗೆ ಒಲಿವರುಂಟೆ
ಜಗದಿ | ಕಡಲಶಯನ ಎನ್ನ ಕರವ | ಪಿಡಿಯುತ ಪ್ರಸನ್ನನಾಗೋ ||೩||
ಧರೆಯೊಳಗೆ ಹೆಳವನಕಟ್ಟೆಯಲಿ ನೆಲಸಿ
ಧರೆಯೊಳಗೆ ಹೆಳವನಕಟ್ಟೆಯಲಿ ನೆಲಸಿ | ಪರಿಪೂರ್ಣಕಳೆಯಿಂದ ಭಕುತರನು
ಒಲಿಸಿ | ಸ್ಥಿರವಾಗಿ ಪೂಜೆಯನು ನೆಲಸಿ ನೀನಿಂದೆ | ಕರುಣ ದೃಷ್ಟಿಯಲಿ ಭಕ್ತರನು ಮನ್ನಿಸುವೆ ||೧||
ಹತ್ತು ಅವತಾರದಲಿ ಇದಿರಾಂತವರ ಗೆಲಿದು | ಮತ್ತೆ ಪದವಿಯ ಕೊಟ್ಟುರಕ್ಷಿಸಿ
ಕಾಯ್ದೆ | ವಿಸ್ತರಿಸಿ ಪೂಜೆಯನು ಮಾಡಿಸಿಕೊಂಬೆ | ತೆತ್ತೇಸಕೋಟಿ ದೇವರ್ಕಳನು ರಕ್ಷಿಸಿದೆ ||೨||
ಉದಯ ಮಧ್ಯಾಹ್ನ ಸಂಜೆಯಲಿ ಪೂಜೆಯನು | ವಿಧವರಿತು ಸೇವೆಯನು ಅನುಸರಿಸಿಕೊಂಬೆ ಸಹೃದಯ ಭಕ್ತರನು ಕಾಯ್ದು ಪಾಲಿಸುವೆ | ಮುದದಿಂದ ಹೆಳವನಕಟ್ಟೆಯಲಿ ನೆಲಸಿರುವೆ ||೩||
ಧ್ವಜದ ತಿಮ್ಮಪ್ಪ
ಧ್ವಜದ ತಿಮ್ಮಪ್ಪ ಪಲ್ಲಕಿಯೇರಿ ತನ್ನಯ| ನಿಜಗಿರಿಯಾತ್ರೆಗೈದಿದ ಹರುಷವ ಕೇಳಿ ||ಪ||
ಬಲದಲಂಬುಜವ ಭವಾದಿಗಳೆಡದಲಿ| ಉಲಿವ ವೇದ ಉಪನಿಷದುಗಳು|| ಸಲುಗೆಯಲ್ಲಿ
ಸನಕಾದಿಗಳು ಸೇವಿಸೆ ಮುನ್ನ| ಹಲವು ಋಷಿ ಮುನಿನಿಕರ ಹಿಂದೆ ಬರುತಿರಲಿ ||೧||
ಛತ್ರವ ಶಚಿ ಚಾಮರವ ಢಾಳಿಸೆ ಇಂದ್ರ| ಚಿತ್ತಜಾತನು ವ್ಯಜನವ ಬೀಸಲು|| ಹೊತ್ತು ಮಾರುತಿ
ಹಡಪ ಹೊಳೆವೆಲೆಗಳ ಕೂಡಲು| ಹಸ್ತದ ಕಾಳಂಜಿ ಹರಿಣಾಂಕನು ಬರೆ ||೨||
ವರುಣನು ಸ್ವಾದುಜಲವ ಪಿಡಿದು ಬರೆ| ತರುಣಿ ತನಗೆ ಆಧಾರದಂತಿರಲು| ಸುರರು ಸುಮನಗಳಿಂದ
ಸರ್ವರು ತಮತಮ್ಮ| ಪರಿಪರಿ ಆಯುಧಗೊಂಡು ಬಳಸಿಬರೆ ||೩||
ಮಂದರ ಮಧ್ಯಮ ತಾರಕ ಮೋಹನ| ದಿಂದ ಗಂಧರ್ವರು ಗಾನಮಾಡೆ|
ತೋಂಧಿಮಿಧಿಮಿಕೆಂದು ತಾಳಮೇಳದೆನಾ| ರಂದ ಪಾಡಲು ಆಡುತಾಡುತ ಬರುತಿರೆ ||೪||
ಲೋಕನಾಯಕ ಲೋಕೈಕ ರಕ್ಷಾಮಣಿ| ಸಾಕಾರರೂಪ ಸದ್ಗುಣಭರಿತ | ವೆಂಕಟೇಶ ವ್ಯಾಸಮುನಿವರದನಾದ ಕರು| ಣಾಕರ ಪುರಂದರವಿಠಲನು ಗರುಡ ||೫||
ಧನ್ಯನಾದೆ ನಾ
ಧನ್ಯನಾದೆ ನಾ| ನೀಜಗದೊಳು| ಧನ್ಯನಾದೆ ನಾ ||ಪ||
ಪನ್ನಗಶಯನನ ಕಣ್ಣಿನಿಂದಲಿ ಕಂಡು| ಧನ್ಯನಾದೆ ನಾ ||ಅ||
ಉನ್ನತ ಮಹಿಮ ಪಾ| ವನ್ನಚರಿತ ಸುರಸನ್ನುತಚರಣನ||
ಪನ್ನಗಾರಿವಾ| ಹನ್ನ ಪುರುಷರನ್ನ| ಚೆನ್ನಿಗ ಶ್ರೀ|ರಂಗನ್ನ ಮಹಿಮೆಯ ಕಂಡು ||೧||
ದೇವ ದೇವೋತ್ತಮ| ಕಾವ ನಮ್ಮ ಈಗ| ಭಾವಜನಯ್ಯನು|| ಕಾವೇರಿತೀರದ|
ಉತ್ತಮ ಕ್ಷೇತ್ರದೊಳು| ಪಾವನ ನರಸಿಂಗನ ಕಂಡು ||೨||
ಭಾನುಕೋಟಿಪ್ರಭ| ಸ್ವಾನಂದಪೂರ್ಣನ| ದೀನ ರಕ್ಷಕನ||
ಸಿರಿಪುರಂದರವಿಠಲ ಚೆನ್ನಿಗ| ಶ್ರೀರಂಗನ ಮಹಿಮೆಯ ಕಂಡು| ಧನ್ಯನಾದೆ ನಾ ||೩||
ಧರ್ಮ ಏಕಃ ಸಹಾಯಃ
ಧರ್ಮ ಏಕಃ ಸಹಾಯಃ ||ಪ||
ಪರಬ್ರಹ್ಮಮೂರುತಿಯ ಪಾದವ ಭಜಿಪ ಸುಜನರಿಗೆ ||ಅ||
ಹರಿಭಕುತಿಯನು ಮಾಳ್ಪ ಪರಮ ಭಾಗವತರಿಗೆ| ಕರೆದು ಭೂಸುರರಿಗನ್ನವನಿತ್ತಗೆ| ರಸತಿಯರನು
ಕಂಡು ಮನವೆಳಸದಿದ್ದವಗೆ| ಪರರುಪದ್ರವ ಬಿಡಿಸಿ ಪೊರೆವ ಸುಜನರಿಗೆಲ್ಲ ||೧||
ನಿತ್ಯ ನೇಮವ ಬಿಡದೆ ಸತ್ಯದಲಿ ನಡೆದವಗೆ| ವ್ಯರ್ಥವಾಗಿ ಹೊತ್ತು ಕಳೆಯದವಗೆ| ಚಿತ್ತಶುದ್ಧಿಯಲಿ
ಪರವಸ್ತು ಹರಿಯನು ತನ್ನ| ಹೃತ್ಕಮಲಮಧ್ಯದಲಿ ಇಟ್ಟು ಭಜಿಪರಿಗೆಲ್ಲ ||೨||
ಮಾತೃಪಿತೃಗಳನ್ನ ಪ್ರಿಯದಲ್ಲಿ ಪೊರೆದವಗೆ| ಯಾತ್ರೆಗಳ ಮಾಳ್ಪ ಪುಣ್ಯಾತ್ಮಗೆ| ಧಾತ್ರಿಯೊಳು ಪುರಂದರವಿಠಲನ ನಾಮವನ್ನು| ಕೀರ್ತನೆ ಮಾಡಿ ಲೋಲಾಡುತಿಹ ಸುಜನರಿಗೆ ||೩||
ಧರ್ಮಕ್ಕೆ ಕೈ ಬಾರದೀ
ಧರ್ಮಕ್ಕೆ ಕೈ ಬಾರದೀ ಕಾಲ| ಪಾಪ| ಕರ್ಮಕ್ಕೆ ಮನಸೋಲೋದೀ ಕಲಿಕಾಲ ||ಪ||
ದಂಡ ದ್ರೋಹಕೆ ಉಂಟು| ಪುಂಡುಪೋಕರಿಗುಂಟು| ಹೆಂಡತಿಮಕ್ಕಳಿಗಿಲ್ಲವೀ ಕಾಲ||
ದಿಂಡೇರಿಗುಂಟು ಜಗಭಂಡರಿಗುಂಟು| ಅಂಡಲೆವರಿಗಿಲ್ಲವೀ ಕಾಲ ||೧||
ಮತ್ತೆ ಸುಳ್ಳರಿಗುಂಟು| ನಿತ್ಯ ಹಾದರಕುಂಟು| ಉತ್ತಮರಿಗಿಲ್ಲವೀ ಕಾಲ| ತೊತ್ತೇರಿಗುಂಟು ತಾಟಕಿಗುಂಟು| ಹೆತ್ತ ತಾಯಿಗಿಲ್ಲವೀ ಕಾಲ ||೨||
ಹುಸಿ ದಿಟವಾಯಿತು| ರಸ ಕಸವಾಯಿತು| ಸೊಸೆ ಅತ್ತೆ ದಂಡಿಸೋದೀ
ಕಾಲ|| ಬಿಸಜಾಕ್ಷ ಪುರಂದರವಿಠಲನ ಮನದಲ್ಲಿ| ಸ್ತುತಿಸುವವರಿಗಿಲ್ಲವೀ ಕಾಲ ||೩||
ಧರ್ಮ ದೊರಕೊಂಬುವುದೆ
ಧರ್ಮ ದೊರಕೊಂಬುವುದೆ ಸಜ್ಜನರಿಗೆ| ದು| ಷ್ಕರ್ಮ ಸತಿಯರುಳ್ಳ
ಪುರುಷೋತ್ತಮರಿಗೆ ||ಪ||
ಧನವಿದ್ದರೇನಯ್ಯ ಮನವಿಲ್ಲದವರಿಗೆ| ಮನವಿದ್ದರೇನಯ್ಯ ಧನವಿಲ್ಲವು||
ಧನವೂ ಮನವೂ ಎರಡುಳ್ಳ ಪುರುಷರಿಗೆ| ಅನುಕೂಲವಾದಂಥ ಸತಿಯಿಲ್ಲವಯ್ಯ ||೧||
ನಿನ್ನ ಕಣ್ಣ ಮುಂದೆ ಹೋಗುವ ಜೀವನು| ಇನ್ನು ನಿನಗೆ ನಾಚಿಕೆಯಿಲ್ಲವು||
ಎನ್ನದು ತನ್ನದು ಎಂಬ ಭ್ರಾಂತಿಯ ಬಿಟ್ಟು| ಇನ್ನೀ ದೇಹವ ನಂಬಿ ಕೆಡಬೇಡ ಮನುಜ ||೨||
ಈಗ ಮಾಡುವ ಧರ್ಮ ನಾಳೆಯೆಂದೆನಬೇಡ| ನೀವಾರು ನಾವಾರು ಎಲೆ ಮನುಜ|
ಊಳಿಗದವರೆಂಬ ಭಟರು ಬಂದೆಳೆವಾಗ| ನಾಳೆ ಮಾಳ್ಪೆನೆನೆ ಬಿಡುವರೆ ಮನುಜ ||೩||
ಎಂದೆಂದು ಈ ಪರಿ ಅಲ್ಲಲ್ಲಿ ಬಳಲಿಕೆ| ಮುಂದೆ ಕಾಣೆನು ಸಾಧನವನು||
ತಂದೆ ಶ್ರೀಪುರಂದರವಿಠಲರಾಯನ| ಒಂದು ಸಾರಿಯು ನೀ ನೆನೆ ಕಂಡ್ಯ ಮನುಜ ||೪||
ಧರ್ಮವೆಂಬ ಸಂಬಳವ
ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೋ| ಪೆರ್ಮೆಯಿಂ ದೇಹವ ನಂಬಬೇಡಿ
ಕಾಣಿರೋ ||ಅ||
ಅಟ್ಟ ಅಡುಗೆ ಉಣಲು ಬಿಡನು| ಕೊಟ್ಟ ಸಾಲ ಕೇಳಬಿಡನು| ಪೆಟ್ಟಿಗೆಯೊಳಗಿದ್ದ
ಚಿನ್ನವ| ತೊಟ್ಟೇನೆಂದರೆ ಯಮನು ಬಿಡನು ||೧||
ಅಕ್ಕನಿಲ್ಲಿ ಕರೆಯಲಿಲ್ಲ| ಮಕ್ಕಳನ್ನು ಪಡೆಯಲಿಲ್ಲ| ದುಃಖಗೊಂಡು ಕಣ್ಣೀರನು|
ಉಕ್ಕಿಸಿದರೆ ಬಿಡನು ಯಮನು ||೨||
ಪೇಳ್ವೆ ನೆಂಟರಿಂಗೆ ಕರೆದು| ಬೇಳೆ ಬೆಲ್ಲವನ್ನು ತಂದು|| ನಾಳೆ ಮಗನ ಮದುವೆ ಎಂದು|
ತಾಳು ಎಂದರೆ ಯಮನು ಬಿಡನು ||೩||
ಮಾಳಿಗೆಮನೆಯಿರಲಿ| ಜಾಳಿಗೆ ತುಂಬ ಹೊನ್ನಿರಲಿ|
ಆಳುಮಂದಿ ಶಾನೆಯಿರಲಿ| ಕಾಲನು ತಾ ಬೆನ್ನ ಬಿಡನು ||೪||
ಅರ್ತಿಯಿಂದ ಸಂಸಾರವ|ವ್ಯರ್ಥವಾಗಿ ನೆಚ್ಚಬೇಡಿ|
ಕರ್ತ್ರು ಪುರಂದರವಿಠಲನ್ನ| ಭಕ್ತಿಯಿಂದಲೆ ಭಜಿಸಿರೊ ||೫||
ಧರ್ಮವೇ ಜಯವೆಂಬ
ಧರ್ಮವೇ ಜಯವೆಂಬ ದಿವ್ಯ ಮಂತ್ರ ||ಪ||
ಮರ್ಮವನ್ನರಿತು ಮಾಡಲುಬೇಕು ತಂತ್ರ ||ಅ||
ವಿಷವಿಕ್ಕಿದವಗೆ ಷಡ್ರಸವನುಣಿಸಲುಬೇಕು| ದ್ವೇಷ ಮಾಡಿದವನ ಪೋಷಿಸಲು ಬೇಕು||
ಪುಸಿಯಾಡಿ ಕೆಡಿಸುವನ ಹಾಡಿ ಹರಸಲು ಬೇಕು| ಮೋಸ ಮಾಡುವನ್ಹೆಸರು ಮಗನಿಗಿಡಬೇಕು ||೧||
ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು| ಬಂಧನದೊಳಿಟ್ಟವರ ಬೆರೆಯಬೇಕು||
ಕೊಂದ ವೈರಿಯ ಮನೆಗೆ ನಡೆದುಹೋಗಲು ಬೇಕು| ಕುಂದೆಣಿಸುವವರ ಗೆಳೆತನ ಮಾಡಬೇಕು||೨||
ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು| ಕಂಡು ಸಹಿಸದವರ ಕರೆಯಬೇಕು|| ಪುಂಡರೀಕಾಕ್ಷ ಶ್ರೀಪುರಂದರವಿಠಲನ| ಕೊಂಡಾಡಿ ತಾ ಧನ್ಯನಾಗಬೇಕು ||೩||
ಧರ್ಮಶ್ರವಣವಿದೇತಕೆ
ಧರ್ಮಶ್ರವಣವಿದೇತಕೆ| ಮೂರ್ಖಗೆ ||ಪ||
ಕರ್ಮಾನುಷ್ಠಾನವನೆಸಗದಿರುವ| ದುರ್ಮತಿಗೇತಕೆ ಬ್ರಾಹ್ಮಣಜನ್ಮ ||ಅ||
ಕೋಣಗೆ ವೀಣಾಗಾನವಿದೇತಕೆ| ಮಾಣಿಕ್ಯವೇತಕೆ ಮರ್ಕಟಗೆ|
ತ್ರಾಣವು ತೊಲಗಿದ ಹೆಣ್ಣಿಗೇತಕೆ ಕ| ಟ್ಟಾಣಿ ಮುತ್ತಿನ ಹಾರವು ಕೊರಳಿಗೆ ||೧||
ಷಡುರಸಾನ್ನವಿದೇತಕೆ ಗರ್ದಭ| ಉಡುಗೊರೆ ಸಹಿತಲೆ ಶ್ವಾನನಿಗೆ||
ಕಡುವೃದ್ಧಗೆ ಮೈನೆರೆದ ಹೆಣ್ಣಿನ| ಒಡನೆ ಭೋಗಿಪೆನೆಂಬಭಿಲಾಷೆಯೇಕೆ ||೨||
ಹುಟ್ಟುಕುರುಡಗೆ ದೀಪವಿದೇತಕೆ| ಭ್ರಷ್ಟನಿಗೇತಕೆ ಕುಲಧರ್ಮ||
ಸೃಷ್ಟಿಯೊಳಧಮಗೆ ಪುರಂದರವಿಠಲನ| ಮುಟ್ಟಿ ಭಜಿಪೆನೆಂಬ ಅಭಿಲಾಷೆಯೇತಕೆ ||೩||
ಧರಣಿಗೆ ಧೊರೆಯೆಂದು
ಧರಣಿಗೆ ಧೊರೆಯೆಂದು ನಂಬಿದೆ| ಇಂಥ| ಪರಮಲೋಭಿಯೆಂಬುದರಿಯೆ ಶ್ರೀಹರಿಯೆ ||ಪ||
ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ| ಓಡಿ ನೀರೊಳು ಸೇರಿಕೊಂಡೆ
ಬೇಗ|| ಹೇಡಿಯ ತೆರದಲಿ ಮೋರೆಯ ತೋರದೆ| ಓಡಿ ಅರಣ್ಯದಿ ಮೃಗಗಳ ಸೇರ್ದೆ ||೧||
ಬಡವರ ಬಿನ್ನಹ ಲಾಲಿಸದೆ ಹಲ್ಲ| ಕಡು ಕೋಪದಲಿ ತೆರದಂಜಿಸಿದೆ||
ತಡೆಯದೆ ಭಿಕ್ಷುಕನಾದರೆ ಬಿಡರೆಂದು| ಕೊಡಲಿಯ ಪಿಡಿದು ಕೋಡಗಹಿಂಡ ಕಾಯ್ದೆ ||೨||
ಉತ್ತಮನೆಂದರೆ ಮತ್ತೆ ಚೋರನಾದೆ| ಬತ್ತಲೆ ನಿಂತೆ ತೇಜಿಯನೇರಿದೆ||
ಎತ್ತ ಹೋದರು ಬಿಡೆ ಮತ್ತೆ ನಿನ್ನನು ದೇವ| ಚಿತ್ತಜನಕ ಶ್ರೀಪುರಂದರವಿಠಲ ||೩||
ಧನ್ಯರೆ ನೀವು ಧನ್ಯರೆ
ಧನ್ಯರೆ ನೀವು ಧನ್ಯರೆ | ಪನ್ನಂಗ ಶಯನನ ಕನ್ಯೆಯರು |
ನಮಮ್ಯಾಲೆ ಅನಂತ ದಯಮಾಡಿ | ಮನ್ನಿಸಿ ಬನ್ನಿರಿ ||ಪ||
ಇಂದಿರಾ ದೇವಿಯರು ಕುಂದುನೋಡದೆ |
ನಮ್ಮ ಮಂದಿರಕ್ಕೆ ಬನ್ನಿರೆಂದು ದ್ರೌಪದಿಯು ||೧||
ಮುದ್ದು ಪಾದಕೆ ನಾನು ಬಿದ್ದು ಬೇಡುವೆ |
ದಯ ಇದ್ದರೆ ಬಾ ಅನಿರುದ್ಧನ ರಾಣಿ ||೨||
ಕಡು ಭಾಗ್ಯ ಸುಭದ್ರಾ ಅಡಿಗೆರಗುತ |
ಕರಹಿಡಿದು ರಾಮೇಶನ ಮಡದಿ ಬಾರಮ್ಮ ||೩||
ಧನ್ಯನಲ್ಲವೇ ಅವನು ಧನ್ಯವಲ್ಲವೆ
ಧನ್ಯನಲ್ಲವೇ ಅವನು ಧನ್ಯವಲ್ಲವೆ ||ಪ||
ಪನ್ನಗಾರಿ ಧ್ವಜನ ಮಹಿಮೆಯನ್ನು ಪೊಗಳುತಿರುವ ನರನು ||ಅ||
ಅರುಣ ಉದಯದಲ್ಲಿ ಎದ್ದು | ದುರಿತದೂರವನ್ನು ಸ್ಮರಿಸಿ |
ಹರುಷದಿಂದ ಶೌಚ ಕರ್ಮ | ಅರಿತು ನಿರುತ ಚರಿಸುವರನು ||೧||
ಸತ್ಯಮತದ ಪದ್ಧತಿಯನು | ಚಿತ್ತವಿಟ್ಟು ಆಚರಿಸುತ |
ಭೃತ್ಯನೆಂದು ಪೇಳಿಕೊಳುವ | ನಿತ್ಯ ತೃಪ್ತನಾದವರನು ||೨||
ಸಿರಿಯುತ ರಂಗೇಶವಿಠಲ | ಸರುವ ದೇವರೊಡೆಯನೆಂದು |
ಸ್ಥಿರದಿ ನಂಬಿ ಅವನ ಪಾದ ಮರೆಯ ಹೊಕ್ಕ ಜಾನ ನರನು ||೩||
ಧನ್ಯ ಧನ್ಯವಾಯಿತು ಜನುಮಾ
ಧನ್ಯ ಧನ್ಯವಾಯಿತು ಜನುಮಾ | ಆವಪುಣ್ಯವೋ ಅರಿಯೇ ನಮ್ಮಾ ||ಪ||
ನಾನಾ ಜನ್ಮದ ಬಲಿಯನೆ ಗೆದ್ದು ಸಲೆ | ಮಾನುಷ ದೇಹದಲಿಂದು |
ಮಾನುಭಾವರ ವಂಶದಿ ಬಂದು | ಅವರ | ಸಾನಿಧ್ಯ ಸೇವೆಯ ಪಡೆದು ||೧||
ಗುರುಕ್ಷೇತ್ರವೇ ಯನಗಿದೇ ಕಾಶೀ | ಗಂಗೆ | ಮೆರೆವುದು ಗುರುತೀರ್ಥವೆನಿಸಿ |
ಗುರು ವಿಶ್ವೇಶ್ವರ ನೆನೆವಾಸೀ | ಕಂಡು | ಪೂರಿತಾಯಿತು ಮನದಾಸಿ ||೨||
ಛಂದ ದೋರಿಸಿ ಭಕ್ತಿಯವರ್ಮ | ಭವ | ಬಂಧಗಳಿಸಿದ
ಕರ್ಮ | ತಂದೆ ಮಹಿಪತಿ ಶ್ರೀ ಪಾದ ಧರ್ಮಾ | ನಿಜ | ನಂದನ ಗಾನಂದೋಬ್ರಹ್ಮಾ ||೩||
ಧರಿಯೊಳು ಸಂತ ಚರಿಯ ಅಗಾಧಾ
ಧರಿಯೊಳು ಸಂತ ಚರಿಯ ಅಗಾಧಾ ||ಪ||
ನಾನಾ ಕಲ್ಪನೆಗಳೆದು ವಿಚಾರದಿ | ತಾನಾದನು ನಿಜಬೋಧಾ ||೧||
ಭಗವಧ್ಯಾನದಿ ಜನಸ್ತುತಿ ನಿಂದೆಗೆ | ಬಗಿಯನು ಹರುಷವಿಷಾದಾ ||೨||
ಗುರುಮಹಿಪತಿ ಪ್ರಭುನಾಮಕೀರ್ತನೆಯಲಿ | ಗರೆವರು ಪರಮಾಹ್ಲಾದಾ ||೩||
ಧನ್ಯನಾದೆನಾ ಗುರು
ಧನ್ಯನಾದೆನಾ ಗುರು ||ಪ||
ಸನ್ನುತಾಂಗ ಗುರುರಾಜರ ನೋಡಿ ||ಅ||
ಘನ್ನ ಮಹಿಮರಿವರು | ವರ ಪಾವನ್ನ ಚರಿತರಿವರು |
ಮುನ್ನ ಮಾಡಿದಪರಾಧಗಳೆಣಿಸದೆದೆ || ಉನ್ನತ ಸುಖಗಳನೀವರ ನೋಡಿ ||೧||
ಬುಧರ ಮಹಾತ್ಪ್ರಭುವೋ | ಭಜಿಪರ ಮಧುರ | ಸುರದ್ರುಮವೋ |
ಸುಧೆಗೆ ಪರಿಮಳವ ರಚಿಸಿದ ವಸುಧೆಯೊಳು | ಅಧಮರ ಮುರಿದಿಹ ಧೀರರ ನೋಡಿ ||೨||
ಶ್ರೀಶ ಕೇಶವನ್ನ | ಮನದೊಳುಪಾಸನೆಗೈವರನು | ಭಾಸುರಾಂಗ
ಯತಿರಾಘವೇಂದ್ರರನು ಈ ಸಮಯದಿ ಕೊಂಡಾಡುತೆ ನೋಡಿ ||೩||
ಧ್ಯಾನವನೆ ಮಾಡು ಬಿಂಬಮೂರುತಿಯ
ಧ್ಯಾನವನೆ ಮಾಡು ಬಿಂಬ ಮೂರುತಿಯ ||ಪ||
ಆನಂದದಲಿ ಕುಳಿತು ಅಂತರಂಗದಲಿ ||ಅ||
ಸದಾಚಾರನಾಗಿ ದ್ವಾದಶ ಗುರುಗಳಿಗೆರಗಿ | ಮುದದಿಂದ
ಮೂಲಮಂತ್ರವನು ಜಪಿಸಿ | ಸದಮಲ ಭಕುತಿಯಲಿ ದೇಹಸ್ಥನ ತಿಳಿದು |
ಪದುಮಾಸನವ ಹಾಕಿ ಪರಮ ವಿಶ್ವಾಸದಲಿ ||೧||
ಅಂಗವನು ಚಲಿಸದೆ ಚೆಂದಾಗಿ ದೃಢದಿಂದ | ಕಂಗಳನು ಮುಚ್ಚಿ ಇಂದ್ರಿಯಂಗಳ ಜರಿದು |
ಮಂಗಳ ಶೋಭಿತನ ಅಖಂಡ ಧ್ಯಾನವನು ಅಂತ | ರಂಗದಲಿ ನಿಲಿಸಿ ಎಲ್ಲವನು ಕಾಣೊ ||೨||
ಭಗವದ್ರೂಪಗಳೆಲ್ಲ ಒಂದು ಸಾರಿ ಸ್ಮರಿಸಿ | ದುಗುಳೆ ಪರಮ ಗುರುವಿನ ಮೂರ್ತಿಯನು |
ತೆಗೆದು ಆವಾಹನವನೆ ಮಾಡಿ ಅಲ್ಲಿಂದಲೆ | ಸ್ವಗುರುಬಿಂಬಮೂರುತಿಯಲಿ ಐಖ್ಯವನೆ ಮಾಡೊ ||೩||
ತಿರುಗಿ ಮೆಲ್ಲಗೆ ಮೂರು ರಂಧ್ರದಿಂದಲಿ ನಿನ್ನ | ವರಮೂರ್ತಿಯಲಿ ಚಿಂತನೆಯ ಮಾಡೊ |
ಭರದಿಂದ ಎಲ್ಲವನು ತಂದು ಹೃದಯದಲ್ಲಿ | ಸ್ಥಿರವಾಗಿ ಇಪ್ಪ ಮೂರುತಿಯೊಡನೆ ಕೂಡಿಕೊ ||೪||
ಆತನೆ ಬಿಂಬಮೂರುತಿಯೆಂದು ತಿಳಿದುಕೊ | ಆ ತರುವಾಯ ನಾಡಿಗಳ ಗ್ರಹಿಸಿ |
ಆ ತೈಜಸನ ತಂದು ವಿಶ್ವಮೂರುತಿಯಲ್ಲಿ | ಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ ||೫||
ಜ್ಞಾನಪ್ರಕಾಶದಲಿ ನಿನ್ನ ಹೃದಯ | ಸ್ಥಾನ ಚೆನ್ನಾಗಿ ಅಷ್ಟದಳಕಮಲ ಮಧ್ಯ |
ಶ್ರೀನಿವಾಸಮೂರ್ತಿ ನಿಲ್ಲಿಸಿ ಬಾಹ್ಯದಲಿ | ಏನೇನು ಪೂಜೆಗಳ ಅದನೆ ತಿಳಿದು ಮಾಡೊ ||೬||
ಗುಣ ನಾಲ್ಕರಿಂದ ಉಪಾಸನೆಯನು ಮಾಡು | ಕ್ಷಣಕ್ಷಣಕೆ ಹರಿರೂಪ ನೀ ನೋಡುತ |
ಅನುರೇಣು ಚೇತನಕೆ ತಾನೆ ನಿಯಾಮಕ | ಫಣಿಶಾಯಿಯಲ್ಲದೆ ಮತ್ತೊಬ್ಬರಿಲ್ಲವೆಂದು ||೭||
ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ | ಸಮ ವಿಷಯದ ತಿಳಿದು ಒಂದೆ ಭಕುತಿಯಲಿ |
ಸಮಾಧಿಗೊಳಗಾಗಿ ದಿವ್ಯದೃಷ್ಟಿಯಲಿ | ಕ್ರಮದಿಂದ ಭರಿತಭಾವವನು ಕಾಣೊ ||೮||
ಈ ಪರಿ ಧೇನಿಸಲು ದೇವ ಕರುಣವ ಮಾಳ್ಪ | ಪಾಪ ಸಂಚಿತವು ಪ್ರಾರಬ್ಧ ನಾಶ |
ಅಪರೋಕ್ಷಿತನಾಗಿ ನಿನ್ನ ಯೋಗ್ಯತೆಯಿದ್ದಷ್ಟು | ಗೋಪಾಲವಿಠಲನೊಲಿವನಾಗ ||೯||
ಧಾನ್ಯ ದೊರಕಿತು ಎನಗೆ
ಧಾನ್ಯ ದೊರಕಿತು ಎನಗೆ| ಧನವು ದೊರಕಿತು ||ಪ||
ಓಣಿಯೊಳಗೆ ಹೋದ ಮಾ|ಣಿಕದ ಹರಳು ದೊರಕಿತೋ| ||ಅ||
ಕಟ್ಟಿ ಹಗೆಯ ಹಾಕುವುದಲ್ಲ| ಒಟ್ಟಿ ಕೆಸರ ಬಡಿಯುವುದಲ್ಲ||
ಮುಟ್ಟಿ ಹಿರಿದು ಮೇಯಿಸಿದರೊಂ|ದಿಷ್ಟು ಸೂಡು ಸವಿಯಲಿಲ್ಲ ||೧||
ಹರಿದು ಗೊಣಸು ಹಚ್ಚುವುದಲ್ಲ| ಮುರಿದು ಸಣ್ಣಗೆ ಮಾಡುವುದಲ್ಲ||
ಅರಿದು ಇದನು ಪೇಟೆಗೆ ಒಯ್ದರೆ| ಕರೆದು ಬೆಲೆಯನು ಕಟ್ಟುವುದಲ್ಲ ||೨||
ಪಾಲುಪಸುಗೆ ಹಂಚುವುದಲ್ಲ| ಮೇಲೆ ಚಾರರು ಒಯ್ಯುವುದಲ್ಲ||
ಶ್ರೀಲೋಲ ಪುರಂದರವಿಠಲನ| ಮೂಲನಾಮ ದೊರಕಿತಲ್ಲ ||೩||
ಧ್ಯಾನಿಸಲರಿಯೆ ನಿನ್ನ ಶ್ರೀನಿವಾಸ
ಧ್ಯಾನಿಸಲರಿಯೆ ನಿನ್ನ ಶ್ರೀನಿವಾಸ ||ಪ||
ಧ್ಯಾನಿಸಲರಿಯೆನು ದೀನಮಂದಾರ ನಿ |
ತ್ಯಾನಂದ ಮೂರ್ತಿಯಂದರಿತು ಹೃದಯದೊಳು ||ಅ||
ಯಮನಿಯಮಾಸನದಿ ಪ್ರಾಣಾಯಾಮ | ಕ್ರಮದಿ ಪ್ರತ್ಯಾಹಾರದಿ | ಭ್ರಮಗೊಳಿಸುವ ಮನವ ನಿಲಿಸಿಧಾರಣೆಯನು |
ಪಮ ಸಮಾಧಿಯಲಿ ಹಂಮಮಯಂಬುವದು ಬಿಟ್ಟು ||೧||
ಪರಿಪರಿಶಾಸ್ತ್ರ ವೇದ ಪುರಾಣಗಳ | ತರತಮ ಭೇದಾಭೇದದುರವಿಗೆ ಸಾಕ್ಷಿಯಾ |
ಗಿರುವ ತತ್ವೇಶರ ಗುರುವೆನಿಸುವ ನಿನ್ನ | ಚರಣಕಮಲವರಿತು ||೨||
ಮದಮತ್ಸರಾದಿಗಳು ಕೂಡಿಯನ್ನನು | ಬಾಧಿಸುತಿಪ್ಪವು ಅನುದಿನವು | ಸದಮಲಾತ್ಮಕ ಶ್ರವಣ ಮನನಗಳರಿಯೆ ಮೋ | ಹದ ಕೂಪದಲ್ಲಿ ಬಿದ್ದೆ ಗುರುರಾಮ ವಿಠಲನೆ ||೩||
ಧ್ಯಾನಿಸು ಮನುಜ ಮುದಮುನಿಪದವ
ಧ್ಯಾನಿಸು ಮನುಜ ಮುದಮುನಿಪದವ | ಹೀನ ಭವದಲಿ ಬಳಲುವಿ ಯಾಕೆ? |
ಮನಸಿನ ಕಲ್ಮಷ ಕಳೆದು ಘನ್ನ | ಜ್ಞಾನಮಾರ್ಗವ ತೋರುವರು | ವಾನರಕುಲದಿ ತಾನವತರಿಸಿ |
ಜಾನಕಿಪತಿಯ ಸೇವಕನೆನಿಸಿ | ವಾಣಿರಮಣನ ಪದವಾಂತು | ಪುನಃ ಭೂಭಾರಕ ಖಳ
ಕೃತಾಂತನ | ಈತನು ಜಗಕೆ ಜೀವನದಾತ | ಈತನ ಸ್ಮರಣೆ ಪಾತಕಹರವು | ಈತನೊಲಿದರೆ
ಭಯವಿಲ್ಲ ಮನುಜ | ಪ್ರೀತನಾಗುವ ನಿಜಶ್ರೀಕಾಂತನು | ಶ್ರೀಕರ ಶ್ಯಾಮಸುಂದರ ವಿಠಲನು |
ಲೋಕನಿಯಾಮಕನಹುದೆಂದು | ಈ ಕಲಿಯುಗದಿ ಸಂಸ್ಥಾಪಿಸಿ ಮೆರೆದ | ನಾಕಾಧಿಪನುತ
ಪಾವನನ |
ಧೀರೇಂದ್ರರನು ನಂಬಿರೋ
ಧೀರೇಂದ್ರರನು ನಂಬಿರೋ ಸಜ್ಜನರೆಲ್ಲಾ ||ಪ||
ಮಾರುತ ಮತದಲ್ಲಿ ವೀರರೆಂದೆನಿಸಿದ |ಮಾರಪಿತನಂಘ್ರಿ ಕಮಲವ ಭಜಿಸುವ ||ಅ||
ವರದೇಂದ್ರ ಕರಜರ ವರದಾ ತೀರಸ್ಥರ |
ನಿರುತವು ಸೇವಿಸೆ ಪರಮ ಪದವಿಯ ನೀವ ||೧||
ಪುರುಷಸೂಕ್ತ ಅತಿ ಸುಲಭ ಭಾಷ್ಯವ ಗೈದ |
ಪುರುಷಸಿಂಹ ನಾಮಹರಿಗೆ ಅರ್ಪಿಸಿದ ||೨||
ವರ ಭಾಷ್ಯ ಮೊದಲಾದ ಸದ್ಗ್ರಂಥಗಳನ್ನೆಲ್ಲ |
ನೆರೆ ಪೇಳ್ವೆ ವರಗುರುಶಾಮಸುಂದರ ಪ್ರಿಯ ||೩||
ಧುಮ್ಮಸಾಲೆನ್ನಿರೈಯ್ಯಾ
ಧುಮ್ಮಸಾಲೆನ್ನಿರೈಯ್ಯಾ | ಒಮ್ಮೆ ಸಾಧು ಜನರು | ಬೊಮ್ಮನ ಪದವಪಡದ |
ನಮ್ಮ ಮುಖ್ಯ ಪ್ರಾಣನ ||ಪ||
ನಷ್ಪರಾವಣನ ಬಾಲಕ್ಕಿಟ್ಟ ಬೆಂಕಿಯಿಂದ ಲಂಕಾ |
ಪಟ್ಟಣದ ಸುಟ್ಟು ಬೊಬ್ಬೆ ನಿಟ್ಟ ಹನುಮಪ್ಪನಾ ||೧||
ಪಾಪಕರ್ಮಕೀಚಕಾದಿ | ಕಾಪುರುಷ ಕೌರವರಾ |
ಕೋಪಾಗ್ನಿಯಲಿ ಸುಟ್ಟ | ಭೂಪ ಭೀಮನಾ ||೨||
ಉದ್ಧಟ ದುರ್ವಾದಿಗಳಾ | ಸಿದ್ಧಾಂತವೆಂಬ
ವಹ್ನಿಯಲ್ಲಿ | ಬುದ್ಧಿಯಿಂದ ಉರಹಿದಾಪ್ರ | ಸಿದ್ಧಮಧ್ವರಾಯನಾ | ಮೂಲ ಗುರುವಾಗಿ ಜಗ |
ಪಾಲಿಸುವಾ ಮಹಿಪತಿ | ಬಾಲನ ಪ್ರಿಯ ಸಿರಿ | ಲೋಲನಿಜ ದಾಸನಾ ||೪||
ಧೂಪಾರತಿಯ ನೋಡುವ
ಧೂಪಾರತಿಯ ನೋಡುವ ಬನ್ನಿ ||ಪ||
ನಮ್ಮ| ಗೋಪಾಲಕೃಷ್ಣದೇವರ ಪೂಜೆಯ ||ಅ||
ಮುತ್ತು ಛತ್ರ ಚಾಮರ ಪತಾಕ ಧ್ವಜ| ರತ್ನ ಕೆತ್ತಿಸಿದ ಪದಕ ಹಾರಗಳು|| ಮತ್ತೆ
ಕೋಟಿಸೂರ್ಯಪ್ರಭೆಯ ಧಿಕ್ಕರಿಸುವ| ಸತ್ಯಭಾಮೆ ರುಗ್ಮಿಣಿಯರಸ ಶ್ರೀಕೃಷ್ಣನ ||೧||
ಢಣಢಣಢಣವೆಂಬ ತಾಳ ದಂಡಿಗೆ ಭೇರಿ| ಝಣಕು ಧಿಮಿಕು ಎಂಬ ಮದ್ದಳೆಯ||
ಝಣಝಣಿಸುವ ರವ ವೀಣೆ ಕಿನ್ನರಿಸ್ವರ| ಘನರಾಗದಿಂದಲಿ ಹಾಡುತ ಪಾಡುತಲಿ ||೨||
ಷಡಪಂಚ ಘಂಟೆ ಝಾಗಟೆಯು ಮೊದಲಾದ| ದೃಢವಾದ ವಾದ್ಯ ಮಂಗಲನಿನದದಲಿ||
ಪಡೆದ ಕಾಂತಿ ಧವಳ ಶಂಖದ ಪೂಜೆಗಳಿಂದ| ಒಡೆಯ ಶ್ರೀಯರಸನ ಸಂಭ್ರಮದ ಪೂಜೆಯ ||೩||
ಹರಿ ಸುರಪತಿ ವಿರಿಂಚಿಜನಕ| ಪರಮ ಮೂರುತಿ ಪುರುಷೋತ್ತಮನ||
ಪರದೈವವೆಂಬ ಶ್ರೀರಂಗನಾಥನಾದ| ಪುರಂದರವಿಠಲದೇವರ ಪೂಜೆಯ ||೪||
ಧೂಪಾರತಿಯ ನೋಡುವ
ಧೂಪಾರತಿಯ ನೋಡುವ ಬನ್ನಿ| ನಮ್ಮ| ಗೋಪಾಲಕೃಷ್ಣದೇವರ ಪೂಜೆಯ ||ಪ||
ಮದ್ದಳೆ ಜಾಗಟೆ ತಾಳ ದಂಡಿಗೆ ಭೇರಿ| ತದ್ಧಿಮಿ ಧಿಮಿಕೆಂದು ರಭಸಗಳು||
ಅದ್ಭುತ ಶಂಖನಾದಗಳಿಂದಲಿ ನಮ್ಮ| ಪದ್ಮನಾಭದೇವರ ದಿವ್ಯಪೂಜೆಯ ||೧||
ಅಗರು ಚಂದನ ಧೂಪ ಗುಗ್ಗುಳ ಸಾಂಬ್ರಾಣಿ| ಮಘಮಘಿಸುವ ಧೂಪದಾರತಿಯು||
ಮಿಗಿಲಾದ ಏಕಾರತಿ ಭಕ್ತಿಯಲಿ ನಮ್ಮ| ಜಗನ್ನಾಥವಿಠಲದೇವರ ಪೂಜೆಯ ||೨||
ಹರಿಸರ್ವೋತ್ತಮನ ಭಕ್ತರಾಧಾರನ| ಪರಮ ಮಂಗಳಮೂರ್ತಿ ಪಾವನನ||
ಪರದೈವವಾದಂಥ ಶ್ರೀರಂಗನಾಥನ| ಪುರಂದರವಿಠಲದೇವರ ಪೂಜೆಯ ||೩||