ದಾಸರಪದ (ವ)
ವೃಂದಾವನಗಳಿಗಾನಮಿಸಿ ನಿತ್ಯ
ವೃಂದಾವನಗಳಿಗಾನಮಿಸಿ ನಿತ್ಯ| ನಂದ ತೀರ್ಥಮತೋದ್ಧಾರಕರೆನಿಪ ನವ ||ಪ||
ವರ ಮಧ್ವಮುನಿ ವಿಮಲಕರ ಪದ್ಮ ಸಂಜಾತ | ಗುರು ಪದ್ಮನಾಭ ಮಾಧವ ಕವೀಂದ್ರಾ | ಕರಸರೋರುಹ ||೧||
ಶ್ರೀ ಸುಧೀಂದ್ರಾರ್ಯರಪ್ರಪೌತ್ರರೆನಿಪ | ವಸುಧೀಂದ್ರ ವ್ಯಾಸರಾಯ ಶ್ರೀನಿವಾಸಮುನಿಯಾ | ಭೂಸುರರು ಪರಮ ಸಂತೋಷದಲಿ ಸ್ಮರಿಸೆ ನಿ | ರ್ದೋಷರನ ಮಾಡಿ ಅಭಿಲಾಷೆ ಪೂರೈಸುತಿಹ ||೨||
ದೇವತೆಗಳು ಇವರು ಸಂದೇಹ ಬಡಸಲ್ಲಾ ಮಿ | ಥ್ಯಾವಾದಿಗಳ ಪರಾಭವ ಮಾಡಿ ಈ ವಸುಂಧರೆಯೊಳಗೆ ಕೀರ್ತಿಯುತರಾಗಿ ಲಕ್ಷ್ಮೀವರ ಜಗ | ನ್ನಾಥ ವಿಠಲನ ಯೈದಿಹರಾ ||೩||
ವೃಂದಾರಕ ವಂದ್ಯ ಯದುಕುಲಾಂಬುಧಿ ಚಂದ್ರ
ವೃಂದಾರಕ ವಂದ್ಯ ಯದುಕುಲಾಂಬುಧಿ ಚಂದ್ರ || ಪ ||
ಮೃಗಮದತಿಲಕ ವಿರಾಜಿತ ಖಳಶೂಲ | ಮೃಗನರ ರೂಪಧೃತ ಸುಗುಣ ವಿಶಾಲ ||೧||
ಖಗಾಸನ ಕಮಲಾರಮಣ ಕಲಿನಾಶ | ಖಗಮುಕ್ತಿದಾಯಕ ಕನಕಗೇಶ ||೨||
ಮಣಿಮಯ ಭೂಷಣಾಮಿತ ಭೃತ್ಯ ಚಿಂತಾ | ಮಣಿ ಕಲ್ಪಕುಜ ಧೇನು ಮಹಿಮಾನಂತ ||೩||
ಸ್ವಾಮಿಪುಷ್ಕರ ವರ ಸನ್ನಿದಸದನ | ಸ್ವಾಮಿ ವರಾಹ ಹಿರಣ್ಯಾ0ಕ ಮಥನ ||೪||
ರಾಕೇಂದುಕೋಟಿ ಪ್ರಕಾಶ ಕಲುಷ ನೀ | ರಾಕೃತ ನಮೋ ಪ್ರಸನ್ವೆಂಕಟೇಶ ||೫||
ವೃಥಾ ಭವದಿ ಮೆರೆದೆ
ವೃಥಾ ಭವದಿ ಮೆರೆದೆ | ರಥಚರಣಧರನ ಸ್ಮೃತಿಯನೆ ಮರೆದೆ || ಪ ||
ಸತಿಸುತರೆನ್ನವರತಿಶಯ ಗೃಹಧನ | ಪತಿಯು ನಾನೆಂಬೊ ಮಮತೆವಿಡಿದು | ರತಿಪತಿಪಿತನಂಘ್ರೆರತಿ ಲೇಶವಿಲ್ಲದೆ | ಸತತ ಯಮಪುರದ ಪಥವನೆ ಪಿಡಿದು ||೧||
ಅತಿಥಿಗಳೊಲ್ಲದೆ ಯತಿಪೂಜೆಯಿಲ್ಲದೆ | ಪೂತಿ ಮಲಭಾಂಡ ಭರಿತನಾಗಿ | ಚತುರ್ಮುಖನಯ್ಯನ ವ್ರತವ ಬಿಸುಟು ಅನ್ಯ | ಪತಿತ ಮಾರ್ಗವ ಪೊಂದಿ ಹತಭಾಗ್ಯನಾಗಿ ||೨||
ಮಿತಮನರಹಿತ ದುರ್ಮತಪಂಡಿತನಾಗಿ | ಪ್ರತಿಬೊಮ್ಮ ರಕ್ಕಸೋನ್ನತನೆನಿಸಿ | ಅತಿ ಪ್ರಾಜ್ಞಶಾಸ್ತ್ರದೇವತೆ ಪ್ರಸನ್ವೆಂಕಟ | ಪತಿಯನೆ ಬಿಟ್ಟಿನ್ನಿತರವ ಭಜಿಸಿ ||೩||
ವೃಂದಾವನದಲಿ ನಿಂದು ರಾಜಿಪನ್ಯಾರೆ ಪೇಳಮ್ಮಯ್ಯ
ವೃಂದಾವನದಲಿ ನಿಂದು ರಾಜಿಪನ್ಯಾರೆ ಪೇಳಮ್ಮಯ್ಯ || ಪ ||
ಬಂದ ಜನರಘ ವೃಂದ ತಳೆದು ಅ - | ನಂದಕೊಡುವೊ ರಾಘವೇಂದ್ರ ಕಾಣಮ್ಮ ||ಅ||
ನತಿಸುವ ಜನರನ ಹಿತದಲಿ ಪಾಲಿಪನ್ಯಾರೇ ಪೇಳಮ್ಮಯ್ಯ |
ಸತಿಯರು ಬೇಡಲು ಸುತರನ ನೀಡುವನ್ಯಾರೇ ಪೇಳಮ್ಮಯ್ಯ |
ಮತಿಹರಿಹತರಿಗೆ ಶುಭ ಮತಿಯನು | ನೀಡುವನ್ಯಾರೆ ಪೇಳಮ್ಮಯ್ಯ |
ಪತಿತಪಾವನ ಶ್ರೀಪತಿ ಕರುಣದಲಿ | ವಿತತ ಮಹಿಮ ಗುರುವರ್ಯ ಕಾಣಮ್ಮ ||೧||
ಕುಸ್ಟರೋಗಗಳ ನಸ್ಟಮಾಡುವನ್ಯಾರೇ ಪೇಳಮ್ಮಯ್ಯ |
ದೃಷ್ಟಿಹೀನರಿಗೆ ಶುಭದೃಷ್ಟಿಯ ನೀಡುವನ್ಯಾರೆ ಪೇಳಮ್ಮಯ್ಯ |
ಅಸ್ಟ ದಾರಿದ್ರ್ಯತಿ ಕಷ್ಟವ ತಿರೆಯುವನ್ಯಾರೇ ಪೇಳಮ್ಮಯ್ಯ |
ಶಿಷ್ಟಜನರೊಳತಿ ಶ್ರೇಷ್ಠನೆನಿಸಿ | ಸೃಷ್ಠಿ ಜನಗಲಿಗಭೀಷ್ಟವ ನೀತಮ್ಮಾ ||೨||
ಭೂತಪ್ರೇತಗಳ ಭೀತಿಯ ಬಡಿಸುವನ್ಯಾರೇ ಪೇಳಮ್ಮಯ್ಯ |
ಮಾತಪಿತರ ತೆರ ದೂತರ ಪಾಲಿಪನ್ಯಾರೇ ಪೇಳಮ್ಮಯ್ಯ |
ನೀತ ಮಹಿಮೆಯನೀತರ ತೋರುವಾನ್ಯಾರೇ ಪೇಳಮ್ಮಯ್ಯ |
ನೀತ ಮಹಿಮೆಯನೀತೆರ ತೋರುವನ್ಯಾರೇ ಪೇ ಳಮ್ಮಯ್ಯ |
ದಾತ ಗುರುಜಗನ್ನಾಥವಿಠಲಗತಿ | ಪ್ರೀತಿಕರ ಯತಿನಾಥ ಕಾಣಮ್ಮ ||೩||
ವೃಂದಾವನದಲಿ ನಿಂತ ಸುಯತಿವರನ್ಯಾರೇ
ವೃಂದಾವನದಲಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ ||ಪ||
ವಂದಿಪ ಜನರಿಗೆ ನಂದ ಕೊಡುವೊ ರಾಘ - | ವೇಂದ್ರ ಮುನಿವರನೀತ ನೋಡಮ್ಮ ||ಅ||
ಇಂದಿರೆ ರಮಣನ ಛಂದದಿ ಭಜಿಸ್ಯಾ - | ನಂದದಲಿಹನ್ಯಾರೇ ಪೇಳಮ್ಮಯ್ಯಾ |
ನಂದತೀರ್ಥಮತ ಸಿಂಧುವರಕೆ ಬಾಲ - | ಚಂದಿರನೆನಿಸಹನ್ಯಾರೇ ಪೇಳಮ್ಮಯ್ಯ |
ಮಂದಜನವ ಹರಿ ಕಂದುಗೊರಳರ | ವೃಂದದಿ ಶೋಭಿಪನ್ಯಾರೆ ಪೇಳಮ್ಮಯ್ಯ|
ಹಿಂದೆ ವ್ಯಾಸಮುನಿ ಎಂದು ಕರೆಸಿದ ರಾಘ - | ವೇಂದ್ರ ಗುರುವರ – ನೀತ ನೋಡಮ್ಮ ||೧||
ನತಿಸುವ ಜನರಿಗೆ ಸತಿಸುತರನು ಬಲು | ಹಿತದಲಿ ನೀಡುವನ್ಯಾರೆ ಪೇಳಮ್ಮಯ್ಯ |
ಪ್ರತಿದಿನ ತನ್ನನು ಮತಿಪೂರ್ವಕ ಬಲು | ತುತಿಪರ ಪಾಲಿಪನ್ಯಾರೇ ಪೇಳಮ್ಮಯ್ಯ |
ಮತಿಯುತ ಪಂಡಿತ ತತಿಯಭಿಲಾಷವ | ಸತತ ಪೂರ್ತಿಪನ್ಯಾರೇ ಪೇಳಮ್ಮಯ್ಯ |
ಕ್ಷಿತಿಸುರರಿಗೆ ಸದ್ಗತಿದಾಯಕ ಮಹ | ಯತಿಕುಲವರ ಗುರುರಾಯರ ಕಾಣಮ್ಮ ||೨||
ಮಾತೆಯು ಸುತರಲಿ ಪ್ರೀತಿಗೊಳಿಸುವ | ತಾತನ – ತೆರದಿಹನ್ಯಾರೇ ಪೇಳಮ್ಮಯ್ಯ |
ಪ್ರೇತನಾಥ ಮಹ ಭೂತಗಣಗಳ | ಭೀತಿಯ ಬಿದಿಸುವನ್ಯಾರೇ ಪೇಳಮ್ಮಯ್ಯ |
ಭೂತಳ ಜನಕೃತ ಪಾತಕ ಕಾನನ | ವೀತಿಹೋತ್ರತೆರನ್ಯಾರೇ ಪೇಳಮ್ಮಯ್ಯ |
ದಾತ ಗುರುಜಗನ್ನಾಥವಿಠಲ ನಿಜ | ದೂತ ಜನಕ ಮಹದಾತನೀತಮ್ಮ ||೩||
ವೃಂದಾವನ ನೋಡಿರೋ
ವೃಂದಾವನ ನೋಡಿರೋ – ಗುರುಗಳ ವೃಂದಾವನ ಪಾಡಿರೋ ||ಪ||
ವೃಂದಾವನ ನೋಡಿ – ಆನಂದ ಮದವೇರಿ ಚೆಂದದಿ ದ್ವಾದಶ ಪೌಂಡ್ರಂಕಿತಗೊಂಬ ||ಅ||
ತುಂಗಭದ್ರಾನದಿಯ ತೀರದಿ ಇದ್ದ ತುಂಗಾ ಮಂಟಪ ಮಧ್ಯದಿ ಶೃಂಗಾರ ತುಳಸಿ ಪದ್ಮಾಕ್ಷ ಸರಗಳಿಂದ ಮಂಗಳಕರ ಮಹಾ ಮಹಿಮೆಯಿಂದೊಪ್ಪುವ ||೧||
ದೇಶ ದೇಶದಿ ಮೆಚ್ಚುತ – ಇಲ್ಲಿಗೆ ಬಂದು ವಾಸವಾಗಿ ಸೇವಿಪ ಭಾಷೆ ಕೊಟ್ಟಮದದಿ ಬಹುವಿಧ ವರಗಳ ಸೂಸುವ ಕರ ಮಹಾಮಹಿಮೆಯಿಂದೊಪ್ಪುವ ||೨||
ನಿತ್ಯ ಸನ್ನಿಧಿ ಸೇವಿಪ – ಭಕ್ತರಿಗೆಲ್ಲ ಮತ್ತಭೀಷ್ಟವ ಕೊಡುತ ಪತ್ಯಾಧಿಗುಣ ಸಿಂಧು ವೆಂಕಟವಿಠಲನ ನಿತ್ಯ ಸನ್ನಿಧಿಯಿಂದ ನಿರುತ ಪೂಜೆಯಗೊಂಬ ||೩||
ವೃಂದಾವನದೇವಿ ನಮೋ ನಮೋ
ವೃಂದಾವನದೇವಿ ನಮೋ ನಮೋ | ಚೆಲ್ವ | ಮಂದರಧರನ ಮನಃಪ್ರಿಯಳೆ || ವೃಂದಾವನದೇವಿ ನಮೋ ನಮೋ ||ಪ||
ನಿನ್ನ ಸೇವಿಸಿ ಉದಕವನೆರೆಯಲು | ಮುನ್ನ ಮಾಡಿದ ಪಾಪ ಹೋಗುವುದು||
ಎನ್ನ ಇಪ್ಪತೊಂದು ಕುಲದವರಿಗೆಲ್ಲ || ಉನ್ನಂತ ವೈಕುಂಠ ಪದವೀವಳೆ ||೧||
ಒಂದೊಂದು ದಳದಲ್ಲಿ ಒಂದೊಂದು ಮೂರುತಿ | ಸಂದಣಿಸಿವೆ ಬಹುಗುಪಿತದಲಿ ||
ಬಂದು ಕುಂಕುಮ ಶಂಖ ಚಕ್ರ ಧರಿಸಿದರೆ | ತಂದೆ ನಾರಾಯಣ ಕರೆದೊಯ್ಯುವ ||೨||
ಹರಿಗೆ ಸಮರ್ಪಿಸಿದ ತುಳಸಿ ನಿರ್ಮಾಲ್ಯವ | ಕೊರೊಲೊಳು ಧರಿಸಿ ಕರ್ಣದೊಲಳಿಟ್ಟರೆ||
ದುರಿತರಾಶಿಗಳೆಲ್ಲ ಅಂಜಿ ಓಡುತಲಿವೆ| ಹರಿಯು ತನ್ನವರೆಂದು ಕೈಪಿಡಿವ ||೩||
ಹತ್ತು ಪ್ರದಕ್ಷಿಣೆ ಹತ್ತು ವಂದನೆ ಮಾಡೆ| ಉತ್ತಮ ವೈಕುಂಠಪದವೀವಳೇ||
ಭಕ್ತಿಯಿಂದಲೆ ಬಂದು ಕೈ ಮುಗಿದವರನ್ನು| ಕರ್ತು ನಾರಾಯಣ ಕರೆದೊಯ್ವನು ||೪||
ಆವಾವ ಪರಿಯಲ್ಲಿ ಸೇವೆಯ ಮಾಡಲು | ಪಾವನ ವೈಕುಂಠಪದವೀವಳೇ||
ದೇವ ಶ್ರೀಪುರಂದರವಿಠಲರಾಯನ ದೇವಿ ನಿನ್ನ ಮುಟ್ಟಿ ತ್ರಾಹಿಎಂಬೆ ||೫||
ವೃಂದಾವನದೊಳಾಡುವನ್ಯಾರೆ
ವೃಂದಾವನದೊಳಾಡುವನ್ಯಾರೆ | ಗೋಪಿ | ಚಂದಿರವದನೆ ನೋಡುವ ಬಾರೆ ||ಪ||
ಅರುಣಪಲ್ಲವಪಾದಯುಗಳನೆ| ದಿವ್ಯ| ಮರಕತ ಮಂಜುಳಾಭರಣನೆ||
ಸಿರಿವರ ಯದುಕುಲಸೋಮನೆ|ಇಂಥ | ಪರಿಪೂರ್ಣಕಾಮ ನಿಸ್ಸೀಮನೆ ||೧||
ಹಾರಹೀರಗುಣಧಾರನೆ| ದಿವ್ಯ| ಸಾರ ಶರೀರಶೃಂಗಾರನೆ ||
ಆರಿಗಾದರು ಮನದೂರನೆ| ತನ್ನ | ಸೇರಿದವರ ಮಾತ ಮೀರನೆ||೨||
ಮಕರಕುಂಡಲಕಾಂತಿಭರಿತನೆ | ದಿವ್ಯ ಅಕಳಂಕರೂಪಲಾವಣ್ಯನೆ ||
ಸಕಲರೊಳಗೆ ದೇವನೀತನೆ | ನಮ್ಮ| ಮುಕುತೀಶ ಪುರಂದರವಿಠಲನೆ ||೩||
ವೃಂದಾವನವೇ ಮಂದಿರವಾಗಿಹ
ವೃಂದಾವನವೇ ಮಂದಿರವಾಗಿಹ | ಇಂದಿರೆ ಶ್ರೀ ತುಳಸಿ ||ಪ||
ನಮ್ಮ| ನಂದನ ಕಂದ ಮುಕುಂದಗೆ ಪ್ರಿಯವಾದ | ಚಂದಾದ ಕೊರಳಲಿಟ್ಟ ಶ್ರೀತುಲಸಿ ||ಅ||
ತುಲಸಿ ವನದಲ್ಲಿ ಹರಿ ಇಹನೆಂಬೋದು| ಶ್ರುತಿ ಸಾರುತಿದೆ ಕೇಳಿ||
ತುಲಸೀ ದರ್ಶನದಿಂದ ದುರಿತಗಳೆಲ್ಲ | ಹರಿದು ಹೋಗೋದು ಕೇಳಿ||
ತುಲಸೀ ಸ್ಪರ್ಶದಿಂದ ದೇಹ ಪಾವನವೆಂದು| ನೀವೆಲ್ಲ ತಿಳಿದು ಕೇಳಿ||
ತುಲಸೀಸ್ಮರಣೆ ಮಾಡಿ ಸಕಲಿಷ್ಟವ ಪಡೆದು| ಸುಖದಲಿ ನೀವು ಬಾಳಿ||೧||
ಮೂಲಮೃತ್ತಿಕೆಯನು ಧರಿಸಿದ ಮಾತ್ರದಿ | ಮೂರು ಲೋಕವಶವಾಹುದು|
ಮಾಲೆಗಳನೆ ಕೊರಳಲಿಟ್ಟ ಮನುಜಗೆ | ಮುಕ್ತಿಮಾರ್ಗನೀವುದು||
ಕಾಲ ಕಾಲಗಳಲ್ಲಿ ಮಾಡಿದ ದುಷ್ಕರ್ಮ| ಕಳೆದು ಬಿಸುಟು ಹೋಗೋದು|
ಕಾಲನ ದೂತರ ಅಟ್ಟಿ ಕೈವಲ್ಯವ | ಲೀಲೆಯ ತೋರುವುದು ||೨||
ಧರೆಯೊಳು ಸುಜನರ ಮರೆಯದೆ ಸಲಹುವ | ವರ ಲಕ್ಷ್ಮೀ ಶ್ರೀತುಲಸಿ |
ಪರಮ ಭಕ್ತರ ಪಾಪಗಳೆಲ್ಲ ತರಿದು | ಪಾವನ ಮಾಡುವಳು ತುಲಸಿ |
ಸಿರಿ ಆಯು ಪುತ್ರಾದಿಸಂಪತ್ತುಗಳನಿತ್ತು | ಹರುಷವೀವಳು ತುಲಸಿ |
ಪುರಂದರವಿಠಲನ್ನ ಚರಣಕಮಲದ | ಸ್ಮರಣೆ ಕೊಡುವಳು ತುಳಸಿ ||೩||
ವೃಂದಾವನ ದರುಶನವಾಯಿತು
ವೃಂದಾವನ ದರುಶನವಾಯಿತು | ಇಂದು ಪೋದವುಭವ ವೃಂದಾವನಗಳೆಲ್ಲ ||ಪ||
ಕುಂದು ಕೊರತೆಯಿಲ್ಲದ ಜ್ಞಾನಗಳೂ | ಬಂದು ಘಟಿಸಿತು ಭಕುತಿ ವೈರಾಗ್ಯ |
ಇಂದಿನದಿನ ಆನಂದಪುಟ್ಟಿ ಹರಿ | ದ್ವಂದ್ವ ಪದಗಳನು ತೋರಿಸುವಂಥ ||೧||
ಹಾಟಕರತ್ನ ಖಚಿತವಾದಂಥಾ | ಮಾಟಮಾದವು ಆಭರಣಗಳೂ |
ಸಾಟಿಯಿಲ್ಲದ ಪುಷ್ಪಮಾಲವ ಧರಿಸಿದ | ಕೋಟಿ ಸೂರ್ಯಪ್ರಭೆ ಸೋಲಿಸುವಂಥ ||೨||
ನೋಡಿದನಯನ ಅನ್ಯತ್ರನೋಡವೂ | ಪಾಡಿದ ಜಿಹ್ವಾ ಅನ್ಯತ್ರಪಾಡವೂ |
ನಾಡಿನೊಳಿಂಥಾ ಶ್ರೀಪಾದ ರಾಜರಿಗೆ | ಈಡುಗಾಣೆ ಮುದ್ದುಮೋಹನವಿಠಲ ||೩||
ವೆಂಕಟೇಶ ಮಂತ್ರ ಒಂದೇ
ವೆಂಕಟೇಶ ಮಂತ್ರ ಒಂದೇ |ಸಂಕಟ ಪರಿಹರಿಸಿ ಸಂಪದವಿಯ ಕೊಡುವ ||ಪ||
ಬಲನ ಭೂಸುರಹತ ಪೋಗಾಡಿದ ಮಂತ್ರಾ | ಬಲಿಯ ಕನಕ ಸ್ತೇಯ ಕಳೆದ ಮಂತ್ರಾ ||
ಬಲವಂತ ವೃಷಭನ್ನ ಸಂಹರಿಸಿದ ಮಂತ್ರಾ | ಕಲಿಯುಗದೊಳಗಿದೆ ಸಿದ್ಧ ಮಂತ್ರಾ ||೧||
ವೃದ್ಧ ಬ್ರಾಹ್ಮಣನಿಗೆ ಪ್ರಾಯವನು ಕೊಟ್ಟ ಮಂತ್ರಾ | ಶುದ್ಧನ್ನ ಪರಿಶುದ್ಧ್ಹ ಮಾಳ್ಪ ಮಂತ್ರಾ |
ಉದ್ಧರಿಸಿ ಶಿಲೆಯನ್ನು ಸ್ತ್ರೀಯ ಮಾಡಿದ ಮಂತ್ರಾ| ಶ್ರದ್ಧೆಯನು ಪಾಲಿಸುವ ಸುಲಭ ಮಂತ್ರಾ ||೨||
ಗುರು ತಲ್ಪಕನ ದೋಷ ನಾಶ ಮಾಡಿದ ಮಂತ್ರಾ | ಹರನ ಸುತ ಬರಲವನ ಪೊರೆದ ಮಂತ್ರಾ |
ಸ್ಮರಿಸಲಾಕ್ಷಣ ಒಮ್ಮೆ ಮುಂದೆ ನಿಲುವ ಮಂತ್ರಾ | ಅರಸರಿಗೆ ವಲಿದಿಪ್ಪ ಆದಿ ಮಂತ್ರಾ ||೩||
ಅಜ ಭವಾದಿಗಳಿಗೆ ಪಟ್ಟಗಟ್ಟಿದ ಮಂತ್ರ| ರಜ ದೂರವಾಗಿದ್ದ ರಮ್ಯವಾದ ಮಂತ್ರಾ |
ಕುಜನ ಕುಲವನಕೆ ಕುಠಾರ ಮಂತ್ರಾ | ಪ್ರಣವ ಪೂರ್ವಕಾಲದಿಂದ ಜಪಿಸಲು ವೊಲಿವ ಮಂತ್ರಾ ||೪||
ಅಣು ಮಹತ್ತಿನಲಿ ಪರಿಪೂರ್ಣ ಮಂತ್ರಾ | ಫಣಿಶೈಲ ನಿಲಯ ಸಿರಿ ವಿಜಯವಿಠಲನ ಮಂತ್ರಾ |
ಕ್ಷಣ ಕ್ಷಣಕೆ ಬಲ್ಲವರಿಗೆ ಪ್ರಾಣ ಮಂತ್ರಾ ||೫||
ವೆಂಕಟಪತಿ ಶರಣು ಹಾಹಾ
ವೆಂಕಟಪತಿ ಶರಣು ಹಾಹಾ ವೆಂಕಟಪತಿ ಶರಣು ||ಪ||
ಕಮಲಸಂಭವನುತ ಚರಣ ಶುಭಾಕಮಲಾರಿಕುಳಭರಣ |
ಕಮಲಸುಖ ಸಂತಾರುಣ ಕಿರಣ ಕರುಣಾಸಂಪೂರ್ಣ ||೧||
ಸಿರಿ ಭೂದೇವಿಯರ ರಮಣ ದಿವ್ಯಸರಸಾಕ್ಷ ಖಗವರಗಮನ |
ಸುರರಿಪುಗಣಾಸುರದಮನ ಭವಹರ ಸುರವರಸಮ ನಾಮ ನಮೊ ||೨||
ಶೇಶಗಿರಿಯತಟನಿಲಯ ಫಣಶೇಷಭೂಷಣ ಮಣಿ ನಿಲಯ |
ಪ್ರಸನ್ವೆಂಕಟ ತಿರುಮಲೆಯೊಳಿಹ ಚೆಲುವ ಸ್ವಸುಖ ಭೋಕ್ತ ಭಕ್ತರಾಶ್ರಯ ||೩||
ವೆಂಕಟಾದ್ರಿವರದ ಶಂಕರನುತಪಾದ
ವೆಂಕಟಾದ್ರಿವರದ ಶಂಕರನುತಪಾದ ||ಪ||
ಶಂಖಾರಿ ಅಹಿಪರಿಯಂಕಶಾಯಿ ಉದಾರಿ | ಕಿಂಕರಕೋಶ ಸಂಕಟನಾಶ | ಪಂಕಜನಾಭಸಂಖ್ಯಾತ ರವಿಭಾ||೧||
ಗಜಬಂಧನ ನಿವಾರಿಕುಜಮಸ್ತಕವಿದಾರಿ | ಅಜಮಿಳರಕ್ಷ ನಿಜಜನಪಕ್ಷ | ಕುಜನ ವಿಶಿಕ್ಷಾಂಬುಜ ಪತ್ರಾಕ್ಷ ||೨||
ಕಂಸ ಮಥನನಕಾರಿ ಹಂಸಡಿಬಿಕ ವೈರಿ | ಸಂಶಯಹರ ಗೋಪಾಂಸು ಲಿಪ್ತಾಂಗ ಹಿ | ಮಾಂಶುಕುಲೇಶ ಭವಶರಧಿನಾಶ ||೩||
ಭೈಶ್ಮೀ ಸತ್ಯರಮಣ ಭೂಷಿತ ಅಖಿಳಾಭರಣ | ದ್ವೇಷಕೃತ ದಮಘೋಷಜಹರ ಮ | ಹೀಶೆಜ್ಞ ಭೋಕ್ತಾಗ್ರೇಸರ ಶಕ್ತ ||೪||
ಸ್ವಾಮಿ ತೀರ್ಥಕರ್ತ ಕಾಮಿತ ಫಲದಾತ | ಸ್ವಾಮಿ ಪ್ರಸನ್ವೆಂಕಟಾಮಲ ಮೂರ್ತಿ | ನಾ ಮೊರೆಹೋಗುವೆ ಪ್ರೇಮದ ಪ್ರಭುವೆ ||೫||
ವೆಂಕಟಾದ್ರಿ ನಿಲಯನ ಪಂಕಜನಾಭನ
ವೆಂಕಟಾದ್ರಿ ನಿಲಯನ ಪಂಕಜನಾಭನ ತೋರವ್ವ ಲಕುಮಿ ||ಪ||
ವಸುದೇವ ದೇವಕಿ ಕಂದಾ – ನಮ್ಮ ಶಶಿಮುಖಿಯರೊಡನೆ ಆನಂದಾ ಪಶುಗಳ ಕಾಯ್ದ ಗೋವಿಂದ – ನಮ್ಮ ಬಿಸಜನಾಭ ಮುಕುಂದಾ ||೧||
ಸಾಮರಾಜ ವರದಾ – ಬಲು ಪ್ರೇಮದಿ ಭಕುತರಪೊರೆದಾ ಆ ಮಹಾ ದಿತಿಜರ ತರಿದಾ – ನಿ ಸ್ಸೀಮ ಮಹಾಮಹಿಮನಾಗಿ ಮೆರೆದ – ನಮ್ಮ ||೨||
ಉರಗಗಿರಿಯಲಿಪ್ಪ – ಅಂದು ಮರುತನ ಹೆಗಲೇರಿ ಬಪ್ಪ ಶರಣಗೊರವಿತ್ತ ತಪ್ಪ ಸಿರಿ ಮೋಹನ ವಿಠಲ ತಿಮ್ಮಪ್ಪ – ನಮ್ಮಪ್ಪನ ||೩||
ವೆಂಕಟೇಶ ನಿನ್ನ ನಾಮಕ್ಕೆ
ವೆಂಕಟೇಶ ನಿನ್ನ ನಾಮಕ್ಕೆ | ಮೊದಲು ನಾಕಕ್ಷರಗಳು ನೋಡೈ ||ಪ||
ಬಿಂಕವಾದ ನಾಲ್ಕು ವೇದಶಾಸ್ತ್ರ ಪುರಾಣಗಳಿದರಿನ್ದೈ ||ಅ||
ವೇದವೊಯ್ದನ ಸಾಗಿಸಿ ಗೆದ್ದೆ ಮೊದಲು ನೀನಲ್ಲವೆ |
ವೇಷವ ತಾಳಿದೆ ಶರಧಿಯ ಮಥನ ಲೇಸು ನಿನಗಲ್ಲವೆ ||
ವೇಗದಿಂದಲಿ ಎತ್ತಿ ದೈತ್ಯನ ಸೀಳಿದೆ ನೀನಲ್ಲವೆ|
ವೆಕ್ಕಸ ಇಹ ಪಾತಕನ ಕರುಳು ನಿನಗೆ ಒಂದು ಮಾಲೆಯಾಗಿಲ್ಲವೆ ||೧||
ಕಂಮು ಮಾಡಿ ಮೂರುತಿಯಲ್ಲಿ ಬಲಿಯ ಹಾಕಿದೆ ಪಾತಾಳಕ್ಕೆ|
ಕಲ್ಮಷ ನುಡಿಯ ಸುತನ ಕೈಯ ಮಾತೆಯ ಕೊಲ್ಲೋದಕ್ಕೆ ||
ಕಡ ನಿಲ್ಲದೆ ವನವಾಸಕ್ಕೆ ಬಂದೆ ಸೀತೆಯ ಹುಡುಕುವುದಕ್ಕೆ |
ಕಂಸಮಾವನ ಕೊಂದೆ ತಂದೆತಾಯಿಗಳ ಬಿಡಿಸೋದಕ್ಕೆ ||೨||
ಟೇಕಿಮಾಡಿ ಮೂರ್ಪುರ ಸತಿಯರ ವೃತವ ಕೆಡಿಸಿಬಿಟ್ಟೆ |
ಟಕ್ಕಿಸಿ ಎಡಬಲ ಲಕ್ಷ್ಮಿಯ ತೆಗೆದು ವೃಕ್ಷಸ್ಥಳದಲಿಟ್ಟೆ||
ಟಂಕಿ ಬೆಳ್ಳಿ ಟಂಕಿ ನರಲೋಕಕ್ಕೆ ಉಡುಪಿಗೆ ಮನಸಿಟ್ಟೆ |
ಟೀರ್ಕೋಡಿಯಲಿ ಟ್ಟಾಣವ ಹಾಕಿದೆ ಜಗದ ಕುದುರೆಯ ಬಿಟ್ಟೆ ||೩||
ಶಾಕದ ತುದಿಯಲ್ಲಿ ಶಾಂತಪಾಂಡವರು ದ್ರೌಪದಿ ವನವಾಸ |
ಶ್ಯಾಮಸುಂದರ ಶರಣು ಸಜ್ಜನ ಗುರುಚಂದ್ರ ಭಾಸ||
ಶ್ಯಾಮ ಸಹಿತ ಬಹು ಮುಕ್ತಿಯ ಪೊಂದಿದ ರುಕ್ಮಾಂಗದಪೋಷ |
ಶಾಶ್ವತ ಸಲಹುವ ಪುರಂದರವಿಠಲ ಕಲಿಯುಗ ವೇಂಕಟೇಶ ||೪||
ವೆಂಕಟೇಶ ಬೇಡಿಕೊಂಬೆ
ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೊ ||ಪ||
ಬ್ರಹ್ಮ| ಶಂಕರಾದಿವಂದ್ಯ ಎನಗೆ ಮುಕ್ತಿ ತೋರಿಸೊ ||ಅ ಪ||
ನಷ್ಟ ಮೊದಲಾದಂಥ ಕಷ್ಟ ಬಿಡಿಸೊ | ನಿನ್ನ |
ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ ||
ಇಷ್ಟ ಭಕ್ತ ಜನರೊಳು ಎನ್ನ ಸೇರಿಸೊ| ಈ |
ಸೃಷ್ಟಿಯೊಳು ನಿನ್ನ ದಾಸದಾಸನೆನಿಸೊ ||೧||
ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ|
ಪೊಂ| ಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ||
ಘಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣ್ಣಿಸೊ|
ಮುಂದೆ| ಹುಟ್ಟಿ ಬಹ ಜನ್ಮಂಗಳ ಎನಗೆ ಬಿಡಿಸೊ ||೨||
ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ|
ಉ | ತ್ಕ್ರುಷ್ಟ ಬಂಗಾರದೊಳು ಎನ್ನ ಸೇರಿಸೊ||
ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ|
ಸ್ವಾಮಿ| ದಿಟ್ಟ ಪುರಂದರವಿಠಲನೆ ದಯದಿ ಪಾಲಿಸೊ ||೩||
ವೆಂಕಟರಮಣನೆ ಬಾರೊ
ವೆಂಕಟರಮಣನೆ ಬಾರೊ ಶೇಷಾಚಲವಾಸನೆ ಬಾರೊ ||ಪ||
ಪಂಕಜನಾಭ ಪರಮಪವಿತ್ರ ಶಂಕರಮಿತ್ರನೆ ಬಾರೊ ||ಅ||
ಮುದ್ದುಮುಖದ ಮಗುವೆ ನಿನಗೆ ಮುದ್ದುಕೊಡುವೆನು ಬಾರೊ |
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ ||೧||
ಮಂದರಗಿರಿಯನೆತ್ತಿದಾನಂದ ಮೂರ್ತಿಯೆ ಬಾರೊ |
ನಂದನಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೊ||೨||
ಕಾಮನಯ್ಯಕರುಣಾಳು ಶ್ಯಾಮಲವರ್ಣನೆ ಬಾರೊ |
ಕೋಮಲಾಂಗ ಶ್ರೀಪುರಂದರವಿಠಲನೆ ಸ್ವಾಮಿರಾಯನೆ ಬಾರೋ ||೩||
ವೆಂಕಟೇಶಾ ವೆಂಕಟೇಶಾ
ವೆಂಕಟೇಶಾ ವೆಂಕಟೇಶಾ ||ಪ|| ಕಿಂಕರರಕ್ಷಕ ಹರಿ | ಣಾ೦ಕಸುಮುಖ ||ಅ||
ಬಳಲಿದೆ ಸಂಸ್ಕೃತಿಹಳುವದೊಳಲೆದು ನಿ | ನ್ನೆಲೆ ತೋರಿಸದೀ ಛಲ ಮಾಣೆಲೊ ||೧||
ಎನ್ನ ನೀ ಕೈ ಬಿಟ್ಟರನ್ಯರಿಲ್ಲವೋ ಗತಿ || ಬಿನ್ನಪ ಕೇಲ್ಪಾಲಮುನ್ನೀರಾಗಾರ ||೨||
ಆರ್ತಹ್ನ೦ಬಳವಿತ್ತು ಕೀರ್ತಿ ಮೇರೆಯೋ ಹರಿ | ಕಾರ್ತಸ್ವರಾಚಲಮೂರ್ತಿ ಹರ್ತಾರ್ತಿ ||೩||
ದೇಶಾ ಕಾಲಾವಿದ್ಯ ಘಾಸಿಗೊಳಿಸಿ ಸರ್ವ | ನಾಶವಾಗದ ಮುನ್ನ ನೀ ಸಲಹೆಲೊ ||೪||
ತಂದೆವೆಂಕಟೇಶವಿಠಲ ನಿನಗಭಿ | ವಂದಿಸುವೆನೊ ಭವಬಂಧ ಬಿಡಿಸೊ ||೫||
ವೆಂಕಟೇಶ ಸಂಕಟಹರ ನಿರ್ಭೀತ
ವೆಂಕಟೇಶ ಸಂಕಟಹರ ನಿರ್ಭೀತ | ಕುಂತಿಯುತ ಸೂತ | ಭವ ವನಧಿಯ ಪೋತ ||ಪ||
ಬಿಂಕದಿಂದ ಪೊರೆ | ಕಿಂಕರ ಎನ್ನನು | ಮಂಕುಮತಿಯ ಕಳೆ | ಪಂಕಜ ಪಾಣಿಯೆ ||ಅ||
ಮಂದರೋದ್ಧಾರಿ ಸುಂದರ ಮುರವೈರಿ | ಬಾರಯ್ಯ ಶೌರಿ | ಎಂದೀಗೆ ಕಾಂಬೆನೊ ಕಂಸಾರೀ |
ದನುಜ ಸಮಹಾರೀ || ಸಿಂಧುಶಯನ ಅರ | ವಿಂದ ನಯನ ಹೃ|ನ್ಮ0ದಿರದಲಿ ಆ | ನಂದವನೀಯೋ ||೧||
ಬಿಂಬಾನೆ ಗುರು ಗೋವಿಂದ ವಿಠಲಯ್ಯ | ನೀಯೆನ್ನ ಸಲಹಯ್ಯ | ತುಂಬೀಹ ಷದ್ವೈರಿಯ ಕಳೆಯಯ್ಯ |
ನಿನ್ನಯ ಮಹಿಮೆಯ || ಹಂಬಲ ಹೃದಯಾಂಬರದೊಳು ತುಂಬಿಸಿ | ಪೊಂಬರಿಸಯ್ಯನೆ ತವಪದ ತೋರಿಸೊ ||೩||
ವೇಣುನಾದ ಪ್ರಿಯ ಗೋಪಾಲಕೃಷ್ಣ
ವೇಣುನಾದ ಪ್ರಿಯ ಗೋಪಾಲಕೃಷ್ಣ ||ಪ||
ವೇಣುನಾದ ವಿನೋದ ಮುಕುಂದ | ಗಾನವಿನೋದ ಶೃಂಗಾರ ಗೋಪಾಲ ||ಅ||
ವಂದಿತಚರಣ ವಸುಧೆಯಾಭರಣ | ಇಂದಿರಾರಮಣ ಇನಕೋಟಿತೇಜ |
ಮಂಧರಧರ ಗೋವಿಂದ ಮುಕುಂದ | ಸಿಂಧುಶಯನ ಹರಿ ಕಂದರ್ಪಜನಕ ||೧||
ನವನೀತಚೋರ ನಂದಕುಮಾರ | ಭುವನೈಕವೀರ ಬುದ್ಧಿವಿಸ್ತಾರ |
ರವಿಕೋಟಿತೇಜ ರಘುವಂಶರಾಜ | ದಿವಿಜವಂದಿತ ದನುಜಾರಿ ಗೋಪಾಲ ||೨||
ಪರಮದಯಾಳು ಪಾವನಮೂರ್ತಿ | ವರ ಕೀರ್ತಿಹಾರ ಶೃಂಗಾರಲೋಲ |
ಉರಗೇಂದ್ರಶಯನ ವರ ಹಯವದನ | ಶರಣರಕ್ಷಕ ಪಾಹಿ ಕೋದಂಡರಾಮ ||೩||