ದಾಸರಪದ (ಬ)
ಬಿಡುವೇನೇನಯ್ಯಾ ಹನುಮ
ಬಿಡುವೇನೇನಯ್ಯಾ ಹನುಮ ಬಿಡುವೇನೇನಯ್ಯಾ ||ಪ||
ಬಿಡುವೇನೇನೋ ಹನುಮ ನಿನ್ನ ಅಡಿಗಳಿಗೆ ಶಿರವಾ ಬಾಗಿ
ಜ್ಞಾನ ಭಕ್ತಿ ವೈರಾಗ್ಯವನು ಕೊಡುವೋ ತನಕ ಸುಮ್ಮನೆ ನಾನು ||ಅ ಪ||
ಹಸ್ತಾವನೆತ್ತಿದರೇನು ಹಾರಕಾಲ ಹಾಕಲೇನು
ಭೃತ್ಯನೋನಿನ್ನವನು ನಾನು ಹಸ್ತೀವರದನ ತೋರುವ ತನಕ ||೧||
ಹಲ್ಲುಮುಡಿಯ ಕಚ್ಚಿದರೇನು ಅಂಜುವನೇನೋ ನಿನಗೆ ನಾನು
ಪುಲ್ಲನಾಭನಲ್ಲಿ ಮನಸು ನಿಲ್ಲಿಸೋತನಕ ಸುಮ್ಮನೆ ನಾನು ||೨||
ಡೊಂಕುಮೋರೆ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ
ಕಿಂಕರ ನಿನಗೆ ಕಿಂಕರ ನಾನು ಪುರಂದರವಿಠಲನ ತೋರುವ ತನಕ |೩||
ಬಾರೋ ನಮ್ಮ ಮನೆಗೆ
ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ
ಗೊಲ್ಲ ಬಾಲಕರನು ನಿಲ್ಲಿಸಿ ಪೆಗಲೇರಿ
ಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ ೧
ಕಸ್ತೂರಿ ತಿಲಕವ ಶಿಸ್ತಾಗಿ ಪಣೆಯೊಳಿಟ್ಟು
ಮಸ್ತಕದಲಿ ಪರವಸ್ತು ತೋರಿದ ಕೃಷ್ಣ ೨
ಮುಜ್ಜಗವನೆಲ್ಲ ಬೊಜ್ಜೆಯೊಳಗಿಟ್ಟು
ಗೆಜ್ಜೆಯ ಕಟ್ಟಿ ತಪ್ಪ್ ಹೆಜ್ಜೆಯನಿಕ್ಕುತ ೩
ನಾರೇರು ಬಿಚ್ಚಿಟ್ಟ ಸೀರೆಗಳನೆವೊಯ್ದು
ಮ್ಯಾರೆ ಇಲ್ಲದ ಕರತೋರೆಂದ ಶ್ರೀಕೃಷ್ಣ ೪
ಅಂಗನೆಯರ ವೃತಭಂಗವ ಮಾಡಿದ
ರಂಗವಿಠಲ ಭವಭಂಗವ ಪರಿಹರಿಸೊ ೫
ಬಾರೋ ಬಾರೋ ಬಾರೋ ಹರಿ
ಬಾರೋ ಬಾರೋ ಬಾರೋ ಹರಿ
ತೋರೋ ತೋರೋ ಮುಖವ ದೊರಿ ಪ
ಧೀರನೆ ಬಹು ಗಂಭೀರನೆ ಗೋರಸ
ಚೋರನೆ ಗೋಪೀಚಾರನೆ ಬ್ಯಾಗನೆ
ವೀರಾಧಿವೀರನೆ ಎನ್ನ ವಾರೆನೋಟ ನೋಡುವರೆ
ಗುರುಮಾಡದಲೆ ಮನ ಸೇರಿ ಸುಖಬಡಿಸಲು ಅ.ಪ
ಭೃಂಗಗಳ್ಯಾತಕೆ ಕೂಗಿದವೊ ಅಂಗಜಠರಗಳು ಸೇರಿದವೊ
ರಂಗನೆ ಗರುಡತುರಂಗನೆ ವಿದ್ವತರಥಾಂಗನೆ ಸಜ್ಜನಸಂಗನೆ ಬ್ಯಾಗನೆ
ಮಂಗಳರೂಪನೆ ಬೆಳದಿಂಗಳೊಳು ನೀನು ಪಿ-
ಳ್ಳಂಗೋವಿನೂದಲು ಆ ರಂಗ ಎನ್ನ ಬಿಡಿಸಿದ ೧
ಕಾವರೆ ನಿನ್ನ್ಹೊರತಿನ್ನಾರೊ ಭಾವಜಪಿತ ಮಂದಿರ ಸೇರೊ
ದೇವನೆ ಭಕುತರಕಾವನೆ ವರಗಳನೀವನೆ ರಿಪುವರದಾವನೆ ಬ್ಯಾಗನೆ
ದೇವಾಧಿದೇವನೆ ಎನ್ನ ಕಾವನು ನೀನಲ್ಲದೆ ಇ
ನ್ನ್ಯಾವನು ಈ ಭೂಮಿಯೊಳಗೀವನು ಕಾಣೆನೊ ನಾನೊಬ್ಬ ೨
ಈ ಸಮಯದಿ ಪರಿಪಾಲಿಪರ್ಯಾರೊ ವಾಸುದೇವವಿಠಲ ನೀ ತೋರೊ
ಶ್ರೀಶನೆ ಸುಂದರಹಾಸನೆ ಮುನಿಮನವಾಸನೆ ಶಶಿರವಿಭಾಸನೆ ಬ್ಯಾಗನೆ
ಹಾಸುಮಂಚದೊಳು ಹುವ್ವಿನ ಹಾಸಿಕಿಯೊಳು ಮಲಗಿ
ಬ್ಯಾಸರಗೊಂಡೆನು ಪರಿಹಾಸವಮಾಡದೇ ಬ್ಯಾಗ ೩
ಬ್ಯಾಗೆ ಬರುವೇನೆಂದು
ಬ್ಯಾಗೆ ಬರುವೇನೆಂದು ಸಾಗಿ ಮಧುರಿಗೆ ಹೋದ
ಹ್ಯಾಗೆ ಮಾಡುವೊಣುದ್ಧವ
ಭಾಗವತಪ್ರಿಯಗಿನ್ನು ಬಾಗಿ ನಮಿಸುತ ನಾವು
ಹೋಗಬ್ಯಾಡೆಂತೆಂದೆವೊ ಉದ್ಧವ ಪ
ಗೋಕುಲವಾಸ ಬಿಟ್ಟ್ಯಾಕೆ ತೆರಳಿದ ಸ್ವಾಮಿ
ಈ ಕಾರ್ಯವನು ತಿಳುಹಿಸೊ
ಶ್ರೀಕರಕಮಲಾರ್ಚಿತ ಚರಣ ಧ್ವಜವಜ್ರ
ರೇಖವಾದವ ಚಲಿಸಿದ
ವಾಕಶಾಸನಪ್ರಿಯನು ಪರಮನಿರ್ದಯಮಾಡಿ
ವ್ಯಾಕುಲರಾಗಿದ್ದೆವೊ ಉದ್ಧವ ೧
ಯಂತ್ರಮಾಯದಲಿ ಶ್ರೀಕಾಂತನೊಲಿಸುವುದಕ್ಕೆ
ಮಂತ್ರವನು ಮಾಡರಿಯೆವೊ
ಅಂತರಂಗದಲಿ ಅನಂತಗುಣ ಸ್ತುತಿಸಲೇ
ಕಾಂತ ಭಕ್ತರೆಲ್ಲವೊ
ನಿಂತು ನಿತ್ಯಾನಂದಮೂರ್ತಿಯ ನೋಡದಲೆ
ಭ್ರಾಂತರಾಗಿ ಪೋದೆವಲ್ಲೊ ಉದ್ಧವ ೨
ಅತಿಕ್ರೂರನೆನಿಸುವಕ್ರೂರ ಬಂದು ನಮಗ-
ಹಿತಮಾಡಿ ಪೋದನಲ್ಲೊ
ಮತಿಹೀನರಾಗಿ ಹರಿಯ ರಥವ ನಿಲಿಸದಲೆ ಮುಂ
ದೆತನವರಿಯದೆ ನಿಂತೆವೊ
ಪೃಥಿವಿ ಒಳಗಿಂತ ಗೋಪಿಕಾಸ್ತ್ರೀಯರೆಂದು ಭಾಳಪ
ಕೀರ್ತಿ ಗೊಳಗಾದೆವೊ ಉದ್ಧವ ೩
ಸಕ್ಕರೆಯಂಥ ಸವಿಮಾತನಾಡುತ ನಮಗೆ
ದಕ್ಕಿ ದಕ್ಕದಲ್ಹೋದನೊ
ಮತ್ತೇನು ಪೇಳೋಣ ಮಂದಭಾಗ್ಯರು ಹರಿಯ
ದಕ್ಕಿಸಿಕೊಳ್ಳದೆ ಹೋದೆವೊ
ಸಿಕ್ಕರೆ ಧನವು ಶತಸಾವಿರ ಕೊಪ್ಪರಿಗೆ ಅಷ್ಟ
ಧಿಕ ಸುಖವಾದೀತೊ ಉದ್ಧವ ೪
ಮಡದಿಯರು ಕೇಳಿಗೆ ಮಧುರಾಪಟ್ಟಣದಂಥ
ಚೆದುರೆಯರು ನಾವಲ್ಲವೊ
ಮದನನಾಟಕ ಮದಗಜಗಮನೇರಿಗಿನ್ನು
ಮುದದಿ ಮರುಳಾಗಿಪ್ಪನೊ
ವಿಧಿ ಬರೆದನೇನಂದರೀ ನಮ್ಮ ಪಣೆಯಲ್ಲಿ
ಪದುಮಾಕ್ಷನಗಲುವಂತೆ ಉದ್ಧವ ೫
ಮಲ್ಲರನೆ ಮಡುಹಿದ್ದ ಮಾವನ್ನೆ ಹರಿಯು ನಮ್ಮ
ಕೊಲ್ಲಿ ಪೋದಂತಾಯಿತೊ
ಸಲ್ಲನಡತೆಯ ಸೊಟ್ಟ ಕುಬ್ಜೆಗೆ ಕಡೆಯು ನಾ
ವಲ್ಲವೆಂದವಗೆ ಪೇಳೊ
ನಿಲ್ಲದೆ ಹೋಗಿ ಹಿಂದಕೆ ಸುಳ್ಳಲ್ಲೊಂದು ಬೆರೆಸದಲೆ
ಎಲ್ಲ ವಾರ್ತೆಗಳ ಹೇಳೊ ಉದ್ಧವ ೬
ಕಲ್ಲಾಗದೀ ವಿಧಿಯ ಕಾಮನ ಪಿತನಗಲಿ ಸೊಲ್ಲು ಸೊಲ್ಲಿಗೆ ಬಳಲೆವೊ
ಮಲ್ಲಿಗ್ವೊಣಗಿದ ದಾರದಂತೆ ಗೋವ್ರಜ ಮೂಲೆ
ಯಲ್ಲಿ ನಾವಿರಲಾರೆವೊ
ಎಲ್ಲಿ ಬಂದೊದಗಿತೀ ಬಿಲ್ಲ್ಹಬ್ಬನಮಗೆ ಭೀ
ಮೇಶಕೃಷ್ಣನ ತೋರಿಸೊ ಉದ್ಧವ ೭
ಬ್ಯಾಡಿರವ್ವಾ ಎನ್ನ ಕಂದನ್ನ
ಬ್ಯಾಡಿರವ್ವಾ ಎನ್ನ ಕಂದನ್ನ ದೂರಬ್ಯಾಡಿರೆ
ಗಾರುಮಾಡಿ ಚೋರನೆಂದು ಸಾರಿ ತಂದ ದುರುಳನೆನ್ನಾ ಪ
ಹಸಿದೆ ಮಗುವೆ ಹಸಿದೆ ಚಿನ್ನ ಶಿಶುವೆ ಪಾಲ್ಗುಡಿಯಾ ಬಾರೆನ್ನೆ
ಮಿಸುನಿಬಟ್ಟಿಲೊಳಿಪ್ಪ ಪಾಲಿನ ಬಿಸಿಗೆ ಬೋವ್ವೆಂದು ಬೆದರುವ
ಮೊಸರುಹರಿವೆಯೊಡದು ನಿಮ್ಮ ಪೊಸಬೆಣ್ಣೆಯ ಮೆಲುವನೆಂತೋ
ಸೊಸೆಯಾರೊಂದುಗೂಡೆನ್ನ ಕೂಸಿಗೆ ಪುಶಿಯ ವಾಕು ನುಸಿಸಿ ೧
ಮುದ್ದು ತಾರೋರಂಗ ಎನಲು ಎದ್ದು ಚಪ್ಪಳೆಗಳಿಡುತ
ಬಿದ್ದು ಅಂಬೆಗಾಲನಿಕ್ಕಿ ಮುದ್ದು ನೀಡಲರಿಯನೆ
ಕದ್ದು ನಿಮ್ಮನೆ ಕೆನೆಪಾಲನು ಗೆದ್ದು ನಿಮ್ಮ ಬಾಲರ ಬೆನ್ನ
ಗುದ್ದಿ ಓಡಿಬರುವನೆಂತೊ ಬುದ್ಧಿಯಿಲ್ಲವೇನೆ ನಿಮಗೆ ೨
ಎತ್ತಿಕೊಂಡು ರಮ್ಮಿಸಿ ಬಾಯೊಳು ತುತ್ತು ನೀಡಲು ಉಣಲರಿಯ
ಕತ್ತಲೆಯೊಳು ಹೆಂಗಳ ಪಿಡಿದು ಚಿತ್ತಮೋಹಿಸಬಲ್ಲನೆ
ಹೆತ್ತಮಕ್ಕಳಿಲ್ಲವೇ ನಿಮಗೆ ವ್ಯರ್ಥ ಚಾರನೆನ್ನುವಿರಮ್ಮ
ಕರ್ತೃ ಶ್ರೀ ಪ್ರಸನ್ವೆಂಕಟರಾಯಗೆ ಭಕ್ತವತ್ಸಲ ತಾನಲ್ಲೆಂದು ೩
ಬಿಗಿಯದಿರು ಬಿಗಿಯದಿರು
ಬಿಗಿಯದಿರು ಬಿಗಿಯದಿರು ಎಲೆ ಮಾನವ ಪ
ಧಿಗಿಧಿಗಿ ಧಿಗಿಯೆನುತ ನಿನಗೇಕೆ ಗರ್ವ ಅ.ಪ
ವಿರಕ್ತಿಯಲಿ ಹನುಮನೆ ವಿವೇಕದಲಿ ವಸಿಷ್ಠನೆ
ಶೂರತನದಲಿ ಶಂತನುತನಯನೇನೊ
ಸ್ವರದಲಿ ತುಂಬುರನೆ ಗೀತದಲಿ ನಾರದನೆ
ಪರಾಶರಮುನಿಯೆ ವ್ರತತಿ ಪಟ್ಟದಲ್ಲಿ ೧
ಚೆಲುವಿನಲಿ ರಾಮನೆ ಸತ್ಯದಿ ಹರಿಶ್ಚಂದ್ರನೆ
ಛಲದಲ್ಲಿ ಋಷಿ ವಿಶ್ವಾಮಿತ್ರನೇನೊ
ಬಲದಲ್ಲಿ ವಾಲಿಯೆ ಹಲಧರನೆ ಹಿರಣ್ಯಕನೆ
ಬಿಲುವಿದ್ಯದಲಿ ಪರಶುರಾಮನೆ ನೀನು ೨
ತ್ಯಾಗದಲಿ ಕರ್ಣನೆ ಭೋಗದಲಿ ಶತಮುಖನೆ
ಯೋಗದಲಿ ಶುಕಸನಕಜನಕನೇನೊ
ಭಾಗ್ಯದಲಿ ಬಲಿಚಕ್ರವರ್ತಿಯೊ ದಶಶಿರನೊ
ದೀರ್ಘದಲಿ ಮೇರುವೆ ಮಂದರವೆ ನೀನು ೩
ಭಕ್ತಿಯಲಿ ಭರತನೆ ಭಾವದಲಿ ಲಕ್ಷ್ಮಣನೆ
ಯುಕ್ತಿಯಲಿ ನೀನಿಂದ್ರಸೂತನೇನೊ
ಶಕ್ತಿಯಲಿ ಕಾಲನೆ ಭುಕ್ತಿಯಲಗಸ್ತ್ಯನೆ
ಮುಕ್ತಿ ಪಡೆವಲ್ಲಿ ಖಟ್ಟಾಂಗರಾಯನೇನೊ ೪
ಶಾಪದಲಿ ಬ್ರಹ್ಮನೆ ತಾಪದಲಿ ಸೂರ್ಯನೆ
ಕೋಪದಲಿ ಮಹೇಶನೇನೋ ನೀನು
ತಪದಲ್ಲಿ ಹನುಮನೆ ವ್ರತದಿ ರುಕ್ಮಾಂಗದನೆ
ಕೃಪೆಯಲ್ಲಿ ಶ್ರೀಕೃಷ್ಣದೇವನೆ ನೀನು ೫
ಬಿನ್ನಹಕೆ ಬಾಯಿಲ್ಲವಯ್ಯಾ
ಬಿನ್ನಹಕೆ ಬಾಯಿಲ್ಲವಯ್ಯಾ ಪ
ಅನ್ನಂತ ಅಪರಾಧ ಎನ್ನಲ್ಲಿ ಇರಲಾಗಿ ಅ.ಪ
ಶಿಶುಮೋಹ ಸತಿಮೋಹ ಜನನಿಜನಕರ ಮೋಹ
ರಸಿಕ ಭ್ರಾಂತಿಯ ಮೋಹ ರಾಜಮನ್ನಣೆ ಮೋಹ
ಪಶುಮೋಹ ಭೂಮೋಹ ಬಂಧುವರ್ಗದ ಮೋಹ
ಹಸರುಳ್ಳ ಆಭರಣಗಳ ಮೋಹದಿಂದ ೧
ಅನ್ನಮದ ಅರ್ಥಮದ ಅಖಿಳ ವೈಭವದ ಮದ
ಮುನ್ನ ಪ್ರಾಯದ ಮದವು ರೂಪಮದವು
ತನ್ನ ಸತ್ವದ ಮದ ಧಾತ್ರಿ ವಶವಾದ ಮದ
ಇನ್ನು ತನಗೆದುರಿಲ್ಲವೆಂಬ ಮದದಿಂದ ೨
ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ
ಅಷ್ಟು ದೊರಕಿದರು ಮತ್ತಷ್ಟರಾಸೆ
ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ
ನಷ್ಟಜೀವನದಾಸೆ ಪುರಂದರವಿಠಲ ೩
ಬೇಗ ಬಾರೊ ಬೇಗ ಬಾರೊ
ಬೇಗ ಬಾರೊ ಬೇಗ ಬಾರೊ ನೀಲಮೇಘ ವರ್ಣ ಪ
ಬೇಗ ಬಾರೊ ಬೇಗ ಬಾರೊ ವೇಲಾಪುರದ ಚೆನ್ನ ಅ.ಪ
ಇಂದಿರಾರಮಣ ಗೋವಿಂದ ಬೇಗ ಬಾರೊ
ನಂದನ ಕಂದ ಮುಕುಂದ ಬೇಗ ಬಾರೊ ೧
ಋದ್ಧ ಸಮೃದ್ಧ ಅನಿರುದ್ಧ ಬೇಗ ಬಾರೊ
ಹದ್ದನೇರಿದ ಪ್ರಸಿದ್ಧ ಬೇಗ ಬಾರೊ ೨
ರಂಗ ಉತ್ತುಂಗ ನರಸಿಂಹ ಬೇಗ ಬಾರೊ
ಕಂಗಳಿಗೆಸೆವ ಶುಭಾಂಗ ಬೇಗ ಬಾರೊ ೩
ಧೀರ ಉದಾರ ಗಂಭೀರ ಬೇಗ ಬಾರೊ
ಹಾರಾಲಂಕಾರ ರಘುವೀರ ಬೇಗ ಬಾರೊ ೪
ಅಯ್ಯ ವಿಜಯ್ಯ ಸಾಹಯ್ಯ ಬೇಗ ಬಾರೊ ಉ
ದಯಾದ್ರಿವಾಸ ಹಯವದನ ಬೇಗ ಬಾರೊ ೫
ಬೇವು ಬೆಲ್ಲದೊಳಿಡಲೇನು ಫಲ
ಬೇವು ಬೆಲ್ಲದೊಳಿಡಲೇನು ಫಲ ಪ
ಹಾವಿಗೆ ಹಾಲೆರೆದೇನು ಫಲ ಅ.ಪ
ಕುಟಿಲವ ಬಿಡದಿಹ ಮನುಜರು ಮಂತ್ರವ
ಪಠಣೆಯ ಮಾಡಿದರೇನು ಫಲ
ಸಟೆಯನ್ನಾಡುವ ಮನುಜರು ಸಂತತ
ನಟನೆಯ ಮಾಡಿದರೇನು ಫಲ ೧
ಕಪಟತನದಲಿ ಕಾಡುತ ಜನರನು
ಜಪವನು ಮಾಡಿದರೇನು ಫಲ
ಕುಪಿತತನವನು ಬಿಡದೆ ನಿರಂತರ
ಜಪವನು ಮಾಡಿದರೇನು ಫಲ ೨
ಮಾತಾಪಿತರನು ಬಳಲಿಸಿದಾತನು
ಯಾತ್ರೆಯ ಮಾಡಿದರೇನು ಫಲ
ಘಾತಕತನವನು ಬಿಡದೆ ನಿರಂತರ
ಗೀತೆಯನೋದಿದರೇನು ಫಲ ೩
ಪತಿಗಳ ನಿಂದಿಪ ಸತಿಯರು ಬಹುವಿಧ
ವ್ರತಗಳ ಮಾಡಿದರೇನು ಫಲ
ಅತಿಥಿಗಳೆಡೆಯಲಿ ಭೇದವ ಮಾಡುತ
ಗತಿಯನು ಬಯಸಿದರೇನು ಫಲ ೪
ಹೀನಗುಣಂಗಳು ಹಿಂಗದೆ ಗಂಗೆಯ
ಸ್ನಾನವ ಮಾಡಿದರೇನು ಫಲ
ಶ್ರೀನಿಧಿ ಪುರಂದರವಿಠಲನ ನೆನೆಯದೆ
ಮೌನವ ಮಾಡಿದರೇನು ಫಲ ೫
ಬಂದ ಕೃಷ್ಣ ಚಂದದಿಂದ
ಬಂದ ಕೃಷ್ಣ ಚಂದದಿಂದ ಬಂದ ನೋಡೆ ಗೋಪ
ವೃಂದದಿಂದಾನಂದಿಸುತ್ತ ಬಂದ ನೋಡೆ ಪ
ಗೋವ ಮೇವನೀವ ದೇವ ಬಂದ ನೋಡೆ
ದೇವ ತಾ ವಾದ್ಯಗಳಿಂದ ಬಂದ ನೋಡೆ ೧
ಪಾಪ ಪೋಪ ಗೋಪ ರೂಪ ಬಂದ ನೋಡೆ
ತಾಪಲೋಪಾಲಾಪಾಟೋಪ ಬಂದ ನೋಡೆ ೨
ಭಾಸುರಸುಖಸೂಸುತ ಬಂದ ನೋಡೆ
ವಾಸುದೇವವಿಠಲ ತಾ ಬಂದ ನೋಡೆ ೩
ಬಂದು ನಿಲ್ಲೊ ಕಣ್ಣ ಮುಂದೆ
ಬಂದು ನಿಲ್ಲೊ ಕಣ್ಣ ಮುಂದೆ ಪ
ಬಂದು ನಿಲ್ಲೋ ನಿನ್ನ ಪಾದಕ್ಕೆ ವಂದಿಪೆ
ಇಂದಿರೆಯರಸ ಗೋವಿಂದ ಮುಕುಂದ ನೀ ಅ.ಪ
ಅರಳಿದ ಕೆಂದಾವರೆಯ ಧಿಕ್ಕರಿಸುವ
ಚರಣಾರವಿಂದವ ನಿರುತ ತೋರು ನೀನು ೧
ನೀಲಾಲಕ ಭ್ರಮರಕುಂತಲಮಂಡಿತ
ಮೇಲಾದ ರಾಕೇಂದುಮುಖವ ತೋರಿಸುತಲಿ ೨
ಪದುಮನೇತ್ರನೆ ನಿನ್ನ ಸದನವೆನುತ ಎನ್ನ
ಹೃದಯದೊಳಗೆ ನಿಂತು ನಾ ಮುದದಿ ಭಜಿಸುವಂತೆ ೩
ಕರಿಯ ಮೊರೆಯ ಕೇಳಿ ಕರುಣದಿಂ ಬಂದಂತೆ
ಕರೆದಾಗ ನಿನ್ನ ದಿವ್ಯಚರಣವ ತೋರಿಸುತ ೪
ಅಜಭವಾದಿಗಳಿಗೆ ನಿಜಪದವನಿತ್ತಂತೆ
ಭಜಿಪ ಭಕ್ತರಿಗೊಲಿವ ವಿಜಯವಿಠಲರೇಯ ೫
ಬಂದೆವಯ್ಯ ಗೋವಿಂದಶೆಟ್ಟಿ
ಬಂದೆವಯ್ಯ ಗೋವಿಂದಶೆಟ್ಟಿ ಪ
ಇಂದು ನಿಮ್ಮ ಹರಿವಾಣಪ್ರಸಾದವುಂಟೆನಲಾಗಿ ಅ.ಪ
ಅಪ್ಪಾಲು ಅತಿರಸ ತುಪ್ಪ ಕಜ್ಜಾಯವು
ಒಪ್ಪುವ ಯಾಲಕ್ಕಿ ಶುಂಠಿ ಮೆಣಸು
ಅಪ್ಪರೂಪವಾದ ಕಜ್ಜಾಯ ರಾಶಿಗಳ
ಛಪ್ಪನ್ನ ದೇಶಕೆ ಮಾರುವ ಶೆಟ್ಟಿ ೧
ಒಡೆದ ಮಡಕೆಯನ್ನು ಇಡದೆ ನಾಮವ ಮಾಡಿ
ಕೊಡುವೆ ನೀ ಕಾಸಿಗೆ ಒಂದೊಂದನು
ಒಡಲು ತುಂಬಿ ಇಕ್ಕ ಅನ್ನವ ಮಾರಿಸಿ
ಒಡವೆಯ ಗಳಿಸುವ ಕಡುಲೋಭಿಶೆಟ್ಟಿ ೨
ಶೇಷಗಿರಿಯ ಮೇಲೆ ಇಪ್ಪ ತಿಮ್ಮ ಶೆಟ್ಟಿ
ದೇಶಕೆ ಪ್ರಸಾದವ ನಡೆಸುವ ಶೆಟ್ಟಿ
ಆಶೆಯಿಂದ ಹಣಕಾಸು ಗಳಿಸುವ ಆದಿ
ಕೇಶವ ನಾರಾಯಣನೆಂಬ ಶೆಟ್ಟಿ ೩
ಬೃಂದಾವನಿ ಜನನಿ ||
ಬೃಂದಾವನಿ ಜನನಿ ವಂದಿಸುವೆ ಸತತ ಜಲಂಧರನ ರಾಣಿ ಕಲ್ಯಾಣಿ |
ಕಲ್ಯಾಣಿ ತುಳಸಿನಿಜ ಮಂದಿರೆ ಎನಗೆ ದಯವಾಗೆ ||
ಜಲಜಾಕ್ಷನಮಲಕಜ್ಜಲಬಿಂದು ಪೀಯಾಶಕಲಶದಲಿ ಬೀಳೆ ಜನಿಸಿದಿ |
ಜನಿಸಿ ಹರಿಯಿಂದ ಶ್ರೀ ತುಳಸಿ ನೀನೆಂದು ಕರೆಸಿದಿ ||
ಶ್ರೀತರುಣಿ ವಲ್ಲಭನ ಪ್ರೀತಿವಿಷಯಳೆ ನಿನ್ನ ನಾ ತುತಿಸಿ ಕೈಯ ಮುಗಿವೆನು |
ಮುಗಿವೆ ಎನ್ನಯ ಮಹಾಪಾತಕವ ಕಳೆದು ಪೊರೆಯಮ್ಮ ||
ತುಳಸಿ ನಿನ್ನಡಿಗೆ ನಾ ತಲೆಬಾಗಿ ಬಿನ್ನೈಪೆ ಕಲುಷಕರ್ಮಗಳ ಎಣಿಸದೆ |
ಎಣಿಸದೆ ಸಂಸಾರಜಲಧಿಯಿಂದೆಮ್ಮ ಕಡೆಹಾಯ್ಸು ||
ನೋಡಿದವ ದುರಿತ ಈಡ್ಯಾಡಿದವ ನಿನ್ನ ಕೊಂಡಾಡಿದವ ನಿತ್ಯ ಹರಿಪಾದ |
ಹರಿಪಾದ ಕಮಲಗಳ ಕೂಡಿದವ ಸತ್ಯ ಎಂದೆಂದು ||
ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿವಂದಿಸಿದ ಜನರು ಸುರರಿಂದ |
ಸುರರಿಂದ ನರರಿಂದ ವಂದ್ಯರಾಗುವರು ಜಗದೊಳು ||
ಕಲುಷವರ್ಜಿತೆ ನಿನ್ನ ದಳಗಳಿಂದಲಿ ಲಕ್ಷ್ಮೀನಿಲಯನಂಘ್ರಿಗಳ ಪೂಜಿಪ |
ಪೂಜಿಪರಿಗೆ ಪರಮಮಂಗಳದ ಪದವಿಟ್ಟು ಸಲಹುವಿ ||
ಶ್ರೀತುಳಸೀದೀವಿ ಮನ್ಮಾತ ಲಾಲಿಸು ಜಗನ್ನಾಥವಿಠ್ಠಲನ ಚರಣಾಬ್ಜ |
ಚರಣಾಬ್ಜ ಎನ್ನ ಹೃತ್ಪದ್ಮದಲ್ಲಿ ನೀ ತೋರೆ ಕೃಪೆಂದ ||
ಶ್ರೀ ತುಲಸಿ ಸ್ತುತಿ || ಶ್ರೀ ಜಗನ್ನಾಥ ದಾಸರು