ದಾಸರಪದ (ಋ)
ಋಣವೆಂಬ ಸೂತಕವು
ಋಣವೆಂಬ ಸೂತಕವು ಬಹು ಬಾಧೆಪಡಿಸುತಿದೆ ||ಪ||
ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೊ ||ಆ||
ಕೊಟ್ಟವರು ಬಂದೆನ್ನ ನಿಷ್ಠುರಂಗಳನಾಡಿ | ಕೆಟ್ಟ ಬೈಗಳ ಬೈದು ಮನದಣಿಯಲು ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ| ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೊ ||೧||
ಅವನ ಒಡವೆಯ ತಂದು ದಾನಧರ್ಮವ ಮಾಡೆ| ಅವನಿಗಲ್ಲದೆ ಪುಣ್ಯ ಇವಗಾವುದು|| ಅವನ ಒದವೆಗಳಿಂದ ತೀರ್ಥಯಾತ್ರೆಯ ಮಾಳ್ಪ||೨||
ಇವನ ಜೀವನ ಮಾಡಿ ಮನದಣಿಯಬಹುದು| ಕಾಳಗದಿ ಪೊಕ್ಕು ಕಡಿದಾಡಿ ಜಯಿಸಲುಬಹುದು | ಪೇಳಲಳವಲ್ಲ ಋಣದವಗೊಂದು ಸೊಲ್ಲ ||೩||
ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರ | ಮೃತ್ಯುಸೂತಕವು ಹನ್ನೊಂದು ದಿನಕೆ || ಮತ್ತೆ ಋಣಸೂತಕವು ಜನ್ಮಜನ್ಮಾಂತರದಕೆ | ಎತ್ತ ಹೋದರು ಬಿಡದೆ ಬೆನ್ಹತ್ತಿ ಬಹುದು ||೪||
ಬಂಧುಬಳಗದ ಮುಂದೆ ಬಹು ಮಾನವು ಹೋಗಿ| ಅಂದವಳಿದೆನೊ ಈ ವಿಧ ಋಣದೊಳು || ಇಂದಿರಾರಮಣ ಶ್ರೀಪುರಂದರವಿಠಲನೆ| ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೆ ||೫||