ದಾಸರಪದ (ಉ)
ಉಮಾ ಕಾತ್ಯಾಯನೀ ಗೌರಿ
ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ | ಹಿಮವಂತ ಗಿರಿಯ ಕುಮಾರಿ | ಪ |
ರಮೆಯರಸನ ಪದಕಮಲ ಮಧುಪೆ ನಿತ್ಯ| ಅಮರವಂದಿತೆ ಗಜಗಾಮಿನಿ ಭವಾನಿ ||ಅ.ಪ||
ಪನ್ನಗಧರನ ರಾಣಿ ಪರಮಪಾವನಿ | ಪುಣ್ಯಫಲ ಪ್ರದಾಯಿನಿ ಪನ್ನಗವೇಣಿ ಶರ್ವಾಣಿ|| ಕೋಕಿಲವಾಣಿ |
ಉನ್ನತಗುಣಗಣ ಶ್ರೇಣಿ | ಎನ್ನ ಮನದ ಅಭಿಮಾನಿ ದೇವತೆಯೆ | ಸ್ವರ್ಣಗಿರಿ ಸಂಪನ್ನೆ ಭಾಗ್ಯನಿಧಿ || ನಿನ್ನ ಮಹಿಮೆಯನು ಬಿನ್ನಾಣದಲಿ ನಾ | ಬನ್ನಿಸಳಲವೆ ಪ್ರಸನ್ನ ವದನಳೆ ||೧||
ಮುತ್ತಿನ ಪದಕ ಹಾರ ಮೋಹನ ಸರ ಉತ್ತಮಾಂಗದಲಂಕಾರ || ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ | ರತ್ನಕಂಕಣದುಂಗುರ || ತೆತ್ತೀಸಕೋಟಿ ದೇವತೆಗಳ್ ಪೊಗಳುತ | ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ || ಸುತ್ತಲು ಆಡುವ ನರ್ತನ ಸಂದಣಿ | ಎತ್ತ ನೋಡಿದರತ್ತ ತಥೈ ವಾದ್ಯ ||೨||
ಪೊಳೆವ ವಸನ ಕಂಚುಕ ತಿಲಕ | ಥಳಪಿ ಮೂಗುತಿ ನಾಸಿಕ || ಕಳಿತ ಮಲ್ಲಿಗೆ ಗಂಧಿಕ ಮುಡಿಗೆ ಸೂಸುಕ | ಸಲೆ ಭುಜ ಕೀರ್ತಿಪಾಟಿಕ | ಇಳೆಯೊಳು ಮಧುರಾ ಪುರಲೊಳು ವಾಸಳೆ | ಅಳಿಗಿರಿ ವಿಜಯವಿಠಲನ ಕೊಂಡಾಡುವ | ಸುಲಭ ಜನರಿಗೆಲ್ಲ ಒಲಿದು ಮತಿಯನೀವ || ಗಿಳಿಕರ ಶೋಭಿತೆ ಪರಮ ಮಂಗಳ ಹೇ ||೩||
ಉದರಪೂರ್ತಿಯ ಕೊಡದಿರು ಉದಧಿಶಯನ
ಉದರಪೂರ್ತಿಯ ಕೊಡದಿರು ಉದಧಿಶಯನ ||ಪ||
ಮುದದಿ ನಿನ್ನನು ನೆನೆದು ಮಲಗುವೆನೊ ಸುಖದಿ ||ಅ.ಪ||
ಮುದದಿ ನಿನ್ನ ಚರಣವನು ಸ್ಮರಿಸುವುದು | ಪರಿಹಾರವು ಬಹು ಗರ್ವವು ಹೆಚ್ಚುವುದು ಎನಗೆ | ಅರವಿಂದನಾಭ ಹರಿ ವರವಿದೆ ನಿನ್ನ ಕೇಳ್ವೆ | ಪರಿಹಾಸ್ಯ ನುಡಿಯಲ್ಲ ಪರಮ ಪಾವನಗೆ ||೧||
ತನುಮನವು ನಿನ್ನ ವಿಷಯಕ್ಕೆರಗಲಿ | ಅನುಮಾನವಿದ್ದ ಪರಿಯಲ್ಲಿ ತೊಲಗಿ | ವನಜಸಂಭವನ್ನೆಯ್ಯ ವೈಕುಂಠಪತಿ ನಿನಗೆ | ಅನವರತ ದೊರೆ ಎಂಬೊ | ಘನತೆ ತಪ್ಪದೆ ಇರಲಿ ||೨||
ಗಜಮದದಿ ಕಂಗೆಟ್ಟ ಪರಿಯೆನ್ನ ಮಾಡದೇ | ಅಜಮಿಳಗೆ ಒಲಿದಂತೆ ಎನಗೆ ವೊಲಿದೂ |
ಸುಜನ ರಕ್ಷಕನೆಂಬ ಬಿರುದು ಬೇಕಾದರೆ | ನಿಜವಾಗಿ ದಯಮಾಡೋ ವಿಜಯವಿಠಲನೆ ||೩||
ಉಕ್ಕುವ ತುಪ್ಪಕೆ ಕೈಯಿಕ್ಕುವೆ ನಾನು
ಉಕ್ಕುವ ತುಪ್ಪಕೆ ಕೈಯಿಕ್ಕುವೆ ನಾನು ||ಪ||
ಚಕ್ರಧರ ಪರಮಾತ್ಮನೊಬ್ಬ ನಲ್ಲದಿಲ್ಲವೆಂದು ||ಅ||
ಪೋರೆಯೊಪರದೈವವೆಂದು ಕರೋ ಮೊರೆಯಿಡಲು ಕಂಡು | ನರದ ಬೃಂದಾರಕರು ಅಂದು ಪೊರೆದರೆ ಬಂದು | ಕರದೊಲೊಪ್ಪುವ ಮುತ್ತಿಗೆ ಕನ್ನಡಿಯ ನೋಡಲೇಕೆ | ಭರದಿ ಗಜೇಂದ್ರನ್ನ ಕಾಯ್ವ ಹರಿಯೆ ಪರದೈವವೆಂದು ||೧||
ಮತಾಂತರದಲ್ಲಿ ಭಗವದ್ಗೀತೆಯನದ್ವೈತವೆಂದು | ವಾತಗುದ್ದಿ ಕೈಗಳೆರೆಡು ನೋಯಿಸಲೇಕೆ | ಏತತ್ಸರ್ವಾಣಿ ಭೂತಾನ್ಯೆಂಬ ಶೃತ್ಯರ್ಥವ ತಿಳಿದು | ಜ್ಯೋತಿರ್ಮಯ ಕಿರೀಟಿ ಅಚ್ಚ್ಯುತಾಂತರ್ಯಾಮಿಯೆಂದು | ಭಾನು ಕೋಟಿ ತೇಜೋತ್ತಮ ವರದ ಶ್ರೀಹರಿಯೆಂಬ | ಜ್ಞಾನವೆ ಕೈವಲ್ಯದ ಸೋಪಾನವೆಂದು ಸಭೆಯಲ್ಲಿ ||೩||
ತಪ್ಪಾದ ವಿಚಾರದಿಂದ ತತ್ತರವ ಪಡಲೇಕೆ | ತಪ್ಪು ಶಾಸ್ತ್ರ ವೋದಿ ದೇಹ ದಂಡಿಸಲೇಕೆ | ಕಲ್ಪಕಲ್ಪಾಂತರದಲ್ಲಿ ವಟಪತ್ರಶಯನನಾಗಿ | ಮುಪ್ಪು ಮೊದಲಿಲ್ಲದ ಮುಕುಂದನಲ್ಲದಿಲ್ಲವೆಂದು ||೪||
ಶಕ್ತಿ ಶೂನ್ಯನಿವನೆಂದು ಸಂಶಯವ ಪಡಲೇಕೆ | ಕೃತ್ಯದಿಂದ ನೋಡೆ ಶ್ರೀಕೃಷ್ಣನೊಬ್ಬನೆ | ಹತ್ತಾರು ಸಾಸಿರ ನೂರು ಗೋಪಸ್ತ್ರೀಯರನು ಆಳಿ | ನಿತ್ಯ ಬ್ರಹ್ಮಚಾರಿಯೆನಿಪ ನಿಷ್ಕಳಂಕನೊಬ್ಬನೆಂದು ||೫||
ಉದಯದಲೆದ್ದು ಶ್ರೀ ಗುರುವೆನ್ನಿರೊ
ಉದಯದಲೆದ್ದು ಶ್ರೀ ಗುರುವೆನ್ನಿರೊ |
ಉದಧಿನಿವಾಸ ಸದ್ಗುರುವೆನ್ನಿರೊ ||ಪ||
ಕರುಣಾಕರನೆನ್ನಿ ಗುರುಮುರಹರನೆನ್ನಿ |
ಕರಿವರ ಹರಿ ಸರ್ವೋತ್ತಮನೆನ್ನಿ ||೧||
ಸುರಮುನಿವರನೆನ್ನಿ ಗುರುಗಿರಿಧರನೆನ್ನಿ |
ನರಕೀಟಕನ ಪಾಲಿಪನೆನ್ನಿರೊ ||೨||
ಶರಣರಕ್ಷಕನೆ ವರದಾಯಕನೆನ್ನಿ |
ತ್ರೈಲೋಕ್ಯನಾಥ ತಾರಕನೆನ್ನಿರೊ ||೩||
ಮುಕ್ತಿದಾಯಕನೆನ್ನಿ |
ಮಹಿಪತಿ ಗುರು ಭಾವನಾಶನೆನ್ನಿ ||೫||
ಉಸರಬಹುದೆನಗೆ ಕೃಷ್ಣ ಬಾಗಿಲಲಿ
ಉಸರಬಹುದೆನಗೆ ಕೃಷ್ಣ ಬಾಗಿಲಲಿ | ನಸು ನಗುತ ನಿಂತ ಬಗೆಯು ||ಪ||
ತಿಳಿದು ಪೂಜೆಯು ಮಾಡುವ ಭಕುತರನು | ಬಳಿಗೆ ಕರೆವುದು ತೀವ್ರವೊ |
ಖಳಕುಲದ ಜನರು ಬರಲು ಹೋಗೆಂದು | ಕಳುಹದ ಬಗೆಯ ಏನೊ ಕೃಷ್ಣ |೧|
ಸುಳಿದ ಜನಗಳ ಕೂಡ ಸುಂಕವನು | ಸೆಳೆಕೊಂಬ ಬಗೆಯು ಎನೋ |
ಕೆಳದಿಯರ ಬಂದವರನಾ ಮೋಹಿಸಿ | ಕೊಳನೂದುತಲಿ ನಿಂದಿಯೊ ಕೃಷ್ಣ ||೨||
ಬಲಿಯ ಕಾಯಿದ ಬಗೆಯಲಿ ದಾಸರನ | ಚಲಿಸದಲೆ ಕಾವ ಬಗಿಯೊ |
ನೆಲೆ ವಾಸುದೇವವಿಠಲ ಭಕುತನ್ನ | ಸಲಿಗೆ ಬಿನ್ನಪ ಸಲಿಪುದೊ ||೩||
ಉಣಲೊಲ್ಲೆಯೇತಕೋ ಕಂದ
ಉಣಲೊಲ್ಲೆಯೇತಕೋ ಕಂದ | ಆವ ಗೋವಳತಿಯರ | ಕಣ್ಣು ದೃಷ್ಟಿ ತಾಗಿತಯ್ಯ ||ಪ||
ಅನುದಿನ ನಮ್ಮೆಲ್ಲರ ಅಗಲಬಾರದೆಂದು | ಮನಸೋತು ಗೋಪಿಯರು ಮೆಚ್ಚಿ ಮದ್ದಿಕ್ಕಿದರೆ ||ಆ||
ಅಸುರ ಪೂತನಿಯಿತ್ತ ವಿಷದ ಮೊಲೆಗಳನು0ಡು | ಬಸಿರೊಳಗೆ ಬಲಿತು ಕಲ್ಮಷ ನೆಲೆಸಿತೆ || ಪೋಸ ಜವ್ವನದ ನಾರಿಯರು ಮುದ್ದಿಸಲವರ ಅಧ| ರಸುಧೆ ನಿನಗೆ ಹಸಿವೆ ಮಾಣಿಸಿತೆ ಕಂದ ||೧||
ಹೊದ್ದಿ ಗೊಲ್ಲರ ಮನೆಯಲಿದ್ದಷ್ಟು ಬೆಣ್ಣೆಯನು| ಕದ್ದು ಮೆದ್ದುದಕ್ಕೆ ಹೊಟ್ಟೆ ತುಂಬಿತೆ|| ಅಬ್ಡಿಯೊಳಗಿದ್ದಮೃತ ಅಸುರರಿಗೆ ವ0ಚಿಸಿ| ಮೆದ್ದಿಸಲು ಸುರರಿಗೆ ಹಿತವಾಯಿತೇ ಕಂದ ||೨||
ತುರುಗಾಯ್ವ ಗೊಲ್ಲರು ಕಲಸಿ ಅನ್ನವ ಕೊಡಲು | ಹರುಷದಿಂದುಂಬೋವತಿ ಪ್ರಿಯವಾಯಿತೆ || ಪರಮಭಕ್ತರು ನಿನ್ನ ಪೂಜಿಸುತ ಅರ್ಪಿಸಿದ | ಪರಿಪರಿಯ ನೈವೇದ್ಯ ಹಿತವಾಯಿತೇ ಕಂದ ||೩||
ಸಣ್ಣಕ್ಕಿಯೋಗರವು ಸೊಗಸಾದ ಕೆನೆ ಮೊಸರು| ಬಣ್ಣಿಸುತ ನಾನುಣಿಸೆ ಒಲ್ಲದಾಯ್ತೆ | ಚಿಣ್ಣ ನಿನ್ನನು ತಮ್ಮ ತೊಡೆಯ ಮೇಲೆತ್ತಿಕೊಂಡಾ | ಹೆಣ್ಣುಗಳು ಉಣಿಸಿದರೆ ಹೊಟ್ಟೆ ತುಂಬುವುದೆ ||೪||
ವರ ಮಹಾಋಷಿಗಳು ಯಾಚಿಸುತ ತಂದಿತ್ತ | ಪರಿಪರಿಯ ನೈವೇದ್ಯಪ್ರಿಯವಾಯಿತೆ | ವರ ಪುರಂದರವಿಠಲರಾಯನೇ ನೀ ಪೇಳೋ | ನಿರತ ಸಂತುಷ್ಟನೆಂಬುದು ನಿಜವಾಯಿತೇ ಕಂದ ||೫||
ಉದರವೈರಾಗ್ಯವಿದು
ಉದರವೈರಾಗ್ಯವಿದು| ನಮ್ಮ| ಪದುಮನಾಭನಲ್ಲಿ ಲೇಶ ಭಕುತಿಯಲ್ಲ ||ಪ||
ಉದಯಕಾಲದಲೆದ್ದು ಗಡಗಡ ನಡುಗುತ | ನದಿಯಲ್ಲಿ ಮಿಂದೆನೆಂದು ಹಿಗ್ಗುತಲಿ || ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು| ಬದಿಯಲ್ಲಿದ್ದವರಿಗಾಶ್ವರ್ಯವು ತೋರುವು|ದುದರ ||೧||
ಕಂಚುಗಾರನ ಬಿಡಾರದಂದದಿ | ಕಂಚು ಹಿತ್ತಾಳೆ ಪ್ರತಿಮೆಗಳ ನೆರಹಿ | ಮಿಂಚಬೇಕೆಂದು ಬಲು ಜ್ಯೋತಿಗಳನು ಹಚ್ಚಿ | ವಂಚನೆಯಿಂದಲಿ ಪೂಜೆಯ ಮಾಡುವು| ದುದರ ||೨||
ಕರದಲಿ ಜಪಮಣಿ ಬಾಯಲಿ ಮಂತ್ರವು | ಅರಿವ ಮುಸುಕು ಮೋರೆಗೆ ಹಾಕಿ || ಪರಸತಿಯರ ಗುಣ ಮನದಲಿಸ್ಮರಿಸುತ | ಪರಮ ವೈರಾಗ್ಯಶಾಲಿಯೆಂದೆನಿಸುವುದು|| ದುದರ ||೩||
ಬೂಟಕತನದಲಿ ಬಹಳ ಭಕುತಿ ಮಾಡಿ| ದಿಟನೀತ ಸರಿಯಾರಿಲ್ಲೆನಿಸಿ|| ನಾಟಕ ಸ್ತ್ರೀಯಂತೆ ಬಯಲ ಡಂಭವ ತೋರಿ| ಊಟದ ಮಾರ್ಗದ ಜ್ಞಾನವಿದಲ್ಲದೆ|| ಉದರ ||೪||
ನಾನು ಎಂಬುದು ಬಿಟ್ಟು ಜ್ಞಾನಿಗಳೊಡನಾಡಿ| ಏನಾದರು ಹರಿಪ್ರೇರಣೆಯೆಂದು| ಧ್ಯಾನಿಸಿ ಮೌನದಿಂ ಪುರಂದರವಿಥಲನ ಕಾಣದೆ ಮಾಡಿದ ಕಾರ್ಯಗಳೆಲ್ಲವು|| ಉದರ ||೫||
ಉಬ್ಬದಿರು ಉಬ್ಬದಿರು
ಉಬ್ಬದಿರು ಉಬ್ಬದಿರು ಎಲೆ ಮಾನವ ||ಪ||
ಹೆಬ್ಬುಲಿಯಂತೆ ಯಮ ಬೋಬ್ಬಿಡುತ ಕಾದಿರುವ ||ಆ||
ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ | ಭೋಗಭಾಗ್ಯಗಳೆಂದು ಬಳಲಲೇಕೊ |
ನಾಗಪೆಡೆ ನೆರಳಲ್ಲಿ ನಡುಗೊ ಕಪ್ಪೆಯ ರೀತಿ | ಕೂಗಿ ಚೀರಿದರೆ ನಿನ್ನಾಗ ಕೇಳುವರೆ ||೧||
ಮಾಳಿಗೆಮನೆಯೆಂದು ಮತ್ತೆ ಸತಿಸುತರೆಂದು | ಜಾಳಿಗೆ ಧನ ಧಾನ್ಯ ಪಶುಗಳೆಂದು ||
ವೇಳೆತಪ್ಪದೆ ತಿಂಬ ಕೂಳು ತನಗುಂಟೆಂದು | ಗಾಳಿಗಿಕ್ಕಿದ ದೀಪ ಬಾಳು ಬದುಕೆಲ್ಲ ||೨||
ಅಸ್ಥಿರದ ಭವದೊಳಗೆ ಅತಿಶಯಗಳೆನಿಸದಲೆ | ವಸ್ತು ಇದರಲಿ ಕೇಳು ವೈರಾಗ್ಯವ ||
ವಿಸ್ತಾರಮಹಿಮ ಶ್ರೀಪುರಂದರವಿಠಲನ ಸ್ವಸ್ಥಚಿತ್ತದಿ ನೆನೆದು ಮುಕ್ತಿ ಪಡೆ ಮನುಜ ||೩||
ಉದಯ ಕಾಲವದಗಿತೀಗಲೂ ನಿನ್ನನ್ನಂತೆ ರವಿ
ಉದಯ ಕಾಲವದಗಿತೀಗಲೂ ನಿನ್ನನ್ನಂತೆ ರವಿ ||ಪ||
ಪದುಮನಾಭಾನ ಸ್ಮರಿಸುವ ಮೋ | ದದಿಯಾನ್ಹೀಕ ಬುಧರು ಮಾಳ್ಪ ||ಅ||
ಅಪರಾತ್ರಿಯಲ್ಲಿ ಎದ್ದು | ಚಪಳಚಿತ್ತರಾಗದಲೆ ಸು| ರಪನ ದೆಸೆಯ ನೋಡಿ ನಮಿಸಿ | ಸುಫಲಗಳನು ಪಡೆಯುವರಿಗೆ ||೧||
ಕಣ್ಣುತೆರೆದು ಕೈಗಳುಜ್ಜಿ | ಕನ್ನಡಿಯನ್ನು ನೋಡಿ ಶೌಚ | ವನ್ನು ತೀರಿಸಿ ಸ್ನಾನ ಸಂಧ್ಯೆಗ | ಳನ್ನು ಮಾಳ್ವ ಸದ್ವಿಜರಿಗೆ ||೨||
ಬ್ರಹ್ಮಯಜ್ಞ ಜಪವು ಮುಖ್ಯ | ಕರ್ಮಗಳಿಂ ಸವಿತೃನಾಮಕ | ಧರ್ಮ ಮೂರುತಿ ಗುರುರಾಮವಿಠಲನ | ಒಮ್ಮನದಲಿ ಧಾನಿಸುವರಿಗೆ ||೩||
ಉಡಿಯ ತುಂಬಿದರು ಮೋದದಿ
ಉಡಿಯ ತುಂಬಿದರು ಮೋದದಿ | ಮಡದಿಯರು ಜನಕನ ಸುಕುಮಾರಿಗೆ ||ಪ||
ಸಡಗರದಲಿ ಹುರುಗಡಲೆ ಕುಬುಸ ಕ | ನ್ನಡಿ ಕದಳಿ ಖರ್ಜೂರ ದ್ರಾಕ್ಷಿಗಳನೂ-ಜನಕನ ಸುಕುಮಾರಿಗೆ ||ಅ||
ಸರಸಿಜಾಕ್ಷಿಯರು ಕೊಬ್ಬರಿ ಬಟ್ಲುಗಳು ಚಂದ |
ದರಸಿನ ಕುಂಕುಮ ಹಣಿಗೆಗಳನು-ಜನಕನ ಸುಕುಮಾರಿಗೆ ||೧||
ಮುತ್ತು ಮಾಣಿಕ ನವರತ್ನಗಳನು ಬಹು |
ಕಿತ್ತಳೆ ದಾಡಿಮ ಮುಖ್ಯಫಲಗಳ-ಜನಕನ ಸುಕುಮಾರಿಗೆ ||೨||
ಪರಿಪರಿ ವಸ್ತುಗಳನು ಮಾನಿನಿಯರು |
ಗುರುರಾಮವಿಠಲನರಿಸಿಯಾದ-ಜನಕನ ಸುಕುಮಾರಿಗೆ ||೩||
ಉಪಕೃತಿ ಯೇನ್ನದಲ್ಲ ನರಹರಿ
ಉಪಕೃತಿ ಯೇನ್ನದಲ್ಲ ನರಹರಿ | ಕೃಪೆ ಕಾರಣವಿದಕೆಲ್ಲ ||ಪ||
ಅಪರಾಧಗಳನು ಮನ್ನಿಸಿ ಪೊರೆಯುವ | ವಿಫುಲ ಕೃಪಾನಿಧಿ ಹರಿಯಲ್ಲದೆಲೆ ||ಅ||
ಲೆಕ್ಕವಿಲ್ಲದೆ ಗದ್ದಿಗಿಕ್ಕಿದ ಜಲದಂತೆ |
ಪುಕ್ಕಟೆ ಜಾರುತ ದಕ್ಕದ ಧನದಿಂದ ||೨||
ಬುದ್ಧಿಲಿ ಬಹುಜನ ಗೆದ್ದನು ಮದದಿ |
ಬಿದ್ದೋಗು ಕಾಲಕ ಸದ್ದಿಲ್ಲ ವಿದ್ಯಾದಿ ||೩||
ಉಬ್ಬುವ ಕೊಟ್ಟುವ ಹಬ್ಬುವ ಸುಖದಿಂದ |
ಜಬ್ಬರ ಮಾಡುತಾ ರುಬ್ಬುವ ಕಾಲನು ||೪||
ತಂದೆ ಮಹಿಪತಿ ನಂದನು ಸಾರಿದಾ |
ದ್ವಂದ್ವಗಳೆದು ಗೋವಿಂದನ ನೆನೆಯದೆ ||೫||
ಉಮಾರಮಣ ಶಂಭೋಪಾಲಯ
ಉಮಾರಮಣ ಶಂಭೋ – ಪಾಲಯ | ಉಮಾರಮಣ ಶಂಭೋ ||ಪ||
ರಮಾರಮಣ ಪದ | ಕಮಲ ಮಧುಪನೆ | ಯಮ ನಿಯಮ ಶಮ | ದಯಾದಿ ಗುಣ ಕೊಡು ||ಆ||
ಕಮಲ ಭವ ಭವ ಶಂಕರಾ | ವಿಮಲ ರೂಪಳು ಗಂಗಾಧರಾ |
ಅಮರ ಸನ್ನುತ ಹರ ಹರಾ | ನಮೊ ನಿನ್ನ ಪದ ಪುಷ್ಕರಾ ||೧||
ದೂರ್ವಾಸ ಮಹಾ ಮುನಿ ರುದ್ರನೆ | ಪೂರ್ವ ದಿವಿಜ ಪ್ರಿಯ ಉಗ್ರನೇ |
ಮೌರ್ವಿ ಪಿನಾಕಿಧರ ಶೂರನೇ | ಶರ್ವಾನೇ ತುತಿಸಲಾಪನೇ ||೨||
ಗುರು ಗೋವಿಂದ ವಿಠಲಾ | ಪೊರೆವನೆಂಬಂಧ ನಿಶ್ಚಲಾ |
ವರಮತಿಯನೀಯೋ ತ್ರೈಶೂಲ | ಧರ ಹರಿಸೋ ಮಾಯ ಪಟಲಾ ||೩||
ಉದ್ಧರಿಸು ಅನಿರುದ್ಧ ನೀಯನ್ನ
ಉದ್ಧರಿಸು ಅನಿರುದ್ಧ ನೀಯನ್ನ | ಮಧ್ವಾಂತರ್ಯಾಮಿ ಮಾಧವ ಕೃಷ್ಣಾ ||ಪ||
ಪಾಂಡುತನಯ ಪರಿಪಾಲನ ಹರಿ | ವೆತಂಡ ವರದ ಶ್ರೀಕುಂಡಲಿಶಯನ ||೧||
ಅಂಡಜಗಮನ ಪ್ರಚಂಡ ಮಹಿಮಾ | ಭವ ಖಂಡನ ಮುನಿಸುತ ಮಂಡನಭೀಮ ||೨||
ನೀಲವರ್ಣ ನವನೀತ ಚೋರ ಗೋ | ಪಾಲ ಮುರಾರಿ ದಯಾಲು ರಮೇಶ ||೩||
ಕಂಬುಕಂಠ ಕನಕಾಂಬರಧರ ಶಶಿ | ಬಿಂಬ ವಿಜಿತ ಮುಖ ಅಂಬರುಹಾಕ್ಷ ||೫||
ಪಾಪರಹಿತ ನಿರ್ಲೇವ ನಿರಂಜನ | ಶ್ರೀಪತಿ ಘನ ಹೆನ್ನೆಪುರನಿಲಯ ||೬||
ಉದರ ಮಲವನ್ನು ತಾನರಿಯದೆ
ಉದರ ಮಲವನ್ನು ತಾನರಿಯದೆ | ಮರಳಿ ಮರಳಿ ಸರೋವರದಿ ಮುಳುಗುವುದಕ್ಕಿಂತ | ಉದಯಾಸ್ತಮಯವಾಗಿ ನೀರೋಳಗಿದ್ದು | ಮುದಿಕಪ್ಪೆಗಳು ಮಾಡಿದ ತಂತ್ರಗಳೇನಯ್ಯ ಆಚಲಾನಂದವಿಠಲ |
ಉದ್ಧಾರಮಾಡೋ ಉದಧಿ ಶಯನ
ಉದ್ಧಾರಮಾಡೋ ಉದಧಿ ಶಯನ | ಶ್ರದ್ಧಾ ಭಕ್ತಿ ಜ್ಞಾನ ಇತ್ತು ಸದಾ ||ಪ||
ಅನ್ಯ ಮಾರ್ಗವ ಕಾಣೆ ನಿನ್ನ ಸ್ಮರಣೆಯ ಹೊರತು | ಮನ್ನಿಸಯ್ಯ ಎನ್ನ ಅಪರಾಧವಾ ||
ಪನ್ನಂಗಶಯನನೇ ಪಾವನ್ನ ಚರಿತ | ಎನ್ನ ಬಿನ್ನಪವ ಪೂರೈಸಿ ಬೇಗ ||೧||
ಕ್ಲೇಶ ಸಾಸಿರವಿರುವ ಸಾರವಿಲ್ಲದ ಭವದಿ | ಈಸಲಾರೆ ದೇವ ಶೇಷಷಾಯೀ |
ಕೂಸಿನಂದದಿ ಎನಗೆ ಜ್ಞಾನಸುಧೆಯನು ಕೊಟ್ಟು | ಹೇಸಿ ಭವದೊಳು ವೇಗ ಮೋಸ ಮಾಡದೆ ದೇವ ||೨||
ಕರುವಿನ ಮೊರೆ ಕೇಳಿ ತುರು ತಾನು ಬಂದೊದಗಿ | ತ್ವರಿತದಲಿ ಸುಧೆ ನೀಡಿ ಪಾಲಿಸುವ ತೆರದಿ |
ಕರಿರಾಜಗೊಲಿದಂದೆ ಮರೆಯದೆಲೆ ಬಂದೆನ್ನ | ಗುರುಶಾಮಸುಂದರನೆ ಕರುಣದಲಿ ನೀನಾಗಿ ||೩||
ಉಪಕಾರ ನೀ ಸ್ಮರಿಸೋ
ಉಪಕಾರ ನೀ ಸ್ಮರಿಸೋ ||ಪ||
ಉಪವೀತ ಬಂದಾಗ ಉಪದೇಶ ಕೊಟ್ಟವರ ||ಆ.ಪ||
ತಪವ ಮಾಡಲೇಕೆ ಉಪವಾಸವಿರಲೇಕೆ | ಶಪಥ ಮಾಡುತ್ತ ತಿರುಗಲೇಕೆ | ಶ್ರೀಪತಿ ಸರ್ವರ ಹಿರಿದೈವನಿಹನೆಂದು | ಎಲ್ಲರ ಬಿಡದಲೆಂದು |ತ್ರಿಪಥಗಾಮಿನಿ ಪಿತ ಗುಪುತವಾಗಿ ನಮ್ಮ | ಸುಪಥದಲ್ಲಿ ನಡೆಸಿ ಕೊಡುವನು ಮುಕ್ತಿಯ ||೧||
ಹರಿಯು ಕೊಟ್ಟ ಭಾಗ್ಯ ಏನೇ ಇರಲಿ | ಸರಿ ಎಂದು ನಂಬಿ ಭಜಿಸು ಅವನ |
ಪರಿ ಪರಿ ಪರಿಕಿಸಿ ಪರಗತಿ ಮಾರ್ಗಕೆ | ನಿರುತ ದಾರಿ ತೋರಿ ಕರಪಿಡಿವ ||೨||
ಮಕ್ಕಳ ಹೆಂಡಿರ ಪೋಷಿಸು ಬಿಡದಲೆ | ನಕ್ಕು ನಲಿ ನೀ ಹರಿ ಸೇವೆ ಎಂದು |
ಸೊಕ್ಕು ಮಾಡಲು ಬೇಡ ಬಂದು ಜನರಲ್ಲಿ ಚೊಕ್ಕ ಗುರುಶಾಮಸುಂದರ ವಲಿವೊನೋ ||೩||
ಊಟಕ್ಕೆ ಬಂದೆವು ನಾವು
ಊಟಕ್ಕೆ ಬಂದೆವು ನಾವು | ನಿಮ್ಮ | ಆಟಪಾಟವ ಬಿಟ್ಟು ಅಡುಗೆ ಮಾಡಮ್ಮ ||ಪ||
ಕತ್ತಲಿಟ್ಟಾವವಮ್ಮ ಕಣ್ಣು| ಬಾಯಿ| ಬತ್ತಿ ಬರುತಲಿದೆ ಕೈಕಾಲು ಝುಮ್ಮ ||
ಹೊತ್ತು ಹೋಗಿಸಬೇಡವಮ್ಮ | ಒಂದು | ತುತ್ತಾದರು ಇತ್ತು ಸಲಹು ನಮ್ಮಮ್ಮ ||೧||
ಒಡಲೊಳಗೇ ಉಸಿರಿಲ್ಲ | ಒಂದು | ಕ್ಷಣವಾದರೆ ಜೀವ ನಿಲ್ಲುವುದಿಲ್ಲ ||
ಮಡಿದರೇ ದೋಷ ತಟ್ಟುವುದು || ಒಂದು || ಹಿಡಿ ಅಕ್ಕಿಯಿಂದಲೆ ಕೀರ್ತಿ ಬಾಹೋದು ||೨||
ಹೊನ್ನು ರಾಸಿಯ ತಂದು ಸುರಿಯೆ | ಕೋಟಿ | ಕನ್ನಿಕೆಯರ ತಂದು ಧಾರೆಯನೆರೆಯ ||
ಅನ್ನದಾನಕ್ಕಿನ್ನು ಸರಿಯೆ | ಪ್ರ| ಸನ್ನ ಪುರಂದರವಿಠಲ ಧೊರೆಯೆ ||೩||
ಊರ ದೇವರ ಮಾಡಬೇಕಣ್ಣ
ಊರ ದೇವರ ಮಾಡಬೇಕಣ್ಣ | ತನ್ನೊಳಗೆ ತಾನೆ | ಊರ ದೇವರ ಮಾಡಬೇಕಣ್ಣ ||ಪ||
ಊರ ದೇವರ ಮಾಡಿರೆಂದು ಸಾರುತಿವೆ ಶ್ರುತಿ ಸ್ಮೃತಿಗಳು | ದ್ವಾರಗಳೊಂಭತ್ತು ಮುಚ್ಚಿ ನಿಲ್ಲಿಸಿ ಧ್ಯಾನ ಭ್ರೂಮಧ್ಯದಿ ||ಆ|| ಎಷ್ಟು ಯುಗಗಳು ತೀರಿಹೋಯಿತಣ್ಣ | ದೇವರ ಮಾಡದೆ| ಕಷ್ಟದಿಂದ ನೊಂದೆ ಕಾಣಣ್ಣ || ಅಸ್ಟದಳದ ಕಂಭ ನಿಲ್ಲಿಸಿ | ನಷ್ಟ ಬರುವ ಕಾಲದಲ್ಲಿ | ಕೆಟ್ಟ ದೈವಕ್ಕಾಗಿ ನೀನು | ದುಷ್ಟ ಕೋಣನ ಶಿರವ ತರಿದು ||೧||
ನಾನೆ ಎಂಬೋ ಮೇಕೆ ಹೋತಣ್ಣ | ಅದಕ್ಕೆ ತಕ್ಕ | ಜ್ಞಾನವೆಂಬ ಪೋತ ರಾಜಣ್ಣ || ತಾನೆ ಬೆಳಗೋ ಜ್ಯೋತಿ ನಿಲ್ಲಿಸಿ ||೨||
ಕರ್ತವೆಂಬೋ ಕ್ಲೇಶ ಕುರಿಯಣ್ಣ | ಅದನ್ನು ತಂದು | ಕಟ್ಟಿ ತಲೆಯನೆ ಕುತ್ತಬೇಕಣ್ಣ || ಅಸ್ಟವಿಧದ ಕುರಿಗಳನ್ನು | ಕಟ್ಟಿ ತಲೆಯನೆ ಚೆಂಡನಾಡಿ | ಹುಟ್ಟಿ ತಿರುಗೋ ಕೋಳಿಯನ್ನು | ಕುಟ್ಟಿ ಚೂರಿ ಹಾಕುತಲಿ ||೩||
ನಾಳೆ ನೋಡುವೆನೆನ್ನಬೇಡಣ್ಣ | ಕೇಳಣ್ಣ ನಿನ್ನ | ಬಾಳುಯೆಂತೋ ನೀನೆ ನೋಡಣ್ಣ || ನಾಳೆ ನಾಡದು ಎಂದು ಹೀಗೆ | ಬಾಳುವ ಕಾಲದಿ ಯಮನು | ಕೋಳಿಪಿಳ್ಳೆಯಾಡುವಾಗ | ಹಾಳಿ ಹದ್ದಿನಂತೆ ಒಯ್ಯುವ ||೪||
ಹೆಂಡಿರು ಮಕ್ಕಳು ಸುಳ್ಳಣ್ಣ | ಕೇಳಣ್ಣ ನಿನ್ನ | ಮಂಡೆ ತುಂಬ ಬಳಗ ಕಾಣಣ್ಣ || ತುಂಡನಾದ ಯಮನು ಬಂದು | ಮಂಡೆ ಮೇಲೆ ಹೊಯ್ಯುವಾಗ | ಹೆಂಡಿರು ಮಕ್ಕಳು ನಿನ್ನ| ಕಂಡು ಕಂಡು ಬಿಡಿಸೋದಿಲ್ಲ ||೫||
ಮತ್ತೆ ಹೆಣ್ಣಿನ ನೋದುವೆಯಲ್ಲೋ | ನೀ ಗಳಿಸಿದಂಥ | ಬುತ್ತಿಯನ್ನ ಉಂಬುವೆಯಲ್ಲೋ || ಮೃತ್ಯುವಿನ ಬಾಯಿಗೆ ನೀ | ತುತ್ತು ಆಗಿಹೊಗಬೇಡ | ತೊತ್ತಾಗಿ ಗುರುವಿಗೆ ನಿತ್ಯ| ಉತ್ತಮ ಸೇವೆಯನ್ನು ಮಾಡು ||೬||
ಮುಂದೆ ಇಂಥ ಜನ್ಮಕಾಣಣ್ಣ | ಬಾರದೋ ನಿನಗೆ | ಮಂದಮತಿಯು ಆಗಬೇಡಣ್ಣ | ಹಿಂದಿನ ಕಷ್ಟಕ್ಕಿಂತ | ಮುಂದಿನ ಹೆಮ್ಮೆಯ ಮರೆತು | ತಂದೆ ಪುರಂದರವಿಠಲನ್ನ | ಹೊಂದಿ ನೀನು ಮುಕ್ತನಾಗೊ ||೭||
ಊರಿಗೆ ಬಂದರೆ ದಾಸಯ್ಯ
ಊರಿಗೆ ಬಂದರೆ ದಾಸಯ್ಯ | ನಮ್ಮ| ಕೇರಿಗೆ ಬಾ ಕಂಡ್ಯ ದಾಸಯ್ಯ ||ಪ||
ಕೇರಿಗೆ ಬಂದರೆ ದಾಸಯ್ಯ| ಗೊಲ್ಲ | ಕೇರಿಗೆ ಬಾ ಕಂಡ್ಯ ದಾಸಯ್ಯ ||ಆ||
ಕೊರಳೋಳು ವನಮಾಲೆ ಧರಿಸಿದನೆ | ಕಿರಿ| ಬೆರಳಲಿ ಬೆಟ್ಟವನೆತ್ತಿದನೆ |
ಇರುಳು ಹಗಲು ನಿನ್ನ ಕಾಣದೆ ಇರಲಾರೆ | ಮರುಳು ಮಾಡಿದಂಥ ದಾಸಯ್ಯ ||೧||
ಕಪ್ಪುವರ್ಣದ ದಾಸಯ್ಯ | ಕಂ| ದರ್ಪನ ಪಿತನೆಂಬೊ ದಾಸಯ್ಯ ||
ಅಪ್ಪಿಕೊಂಡು ನಮ್ಮಮನಸಿಗೆಬಂದರೆ | ಅಪ್ಪವ ಕೊಡುವೆನು ದಾಸಯ್ಯ ||೨||
ಮುಂದೇನು ದಾರಿ ದಾಸಯ್ಯ | ಚೆಲ್ವ | ಪೊಂಗಳಲೂದುವ ದಾಸಯ್ಯ | ಹಾಂಗೆ ಪೋಗದಿರು ದಾಸಯ್ಯ |
ಹೊ| ನ್ನುಂಗುರ ಕೊಡುವೆನು ದಾಸಯ್ಯ | ಹಾಂಗೆ ಪೋಗದಿರು ದಾಸಯ್ಯ ||೩||
ಸಣ್ಣ ನಾಮದ ದಾಸಯ್ಯ | ನಮ್ಮ ಸದನಕೆ ಬಾ ಕಂಡ್ಯ ದಾಸಯ್ಯ ||
ಸದನಕೆ ಬಂದರೆ ದಾಸಯ್ಯ | ಮಣಿ | ಸರವನು ಕೊಡುವೆನು ದಾಸಯ್ಯ ||೪||
ಸಿಟ್ಟು ಮಾಡದಿರು ದಾಸಯ್ಯ ಸಿರಿ | ಪುರಂದರವಿಠಲ ದಾಸಯ್ಯ ||
ರಟ್ಟು ಮಾಡದಿರು ದಾಸಯ್ಯ ತುಂಬಿಟ್ಟು ಕೊಡುವೆನು ದಾಸಯ್ಯ ||೫||
ಋಣವೆಂಬ ಸೂತಕವು
ಋಣವೆಂಬ ಸೂತಕವು ಬಹು ಬಾಧೆಪಡಿಸುತಿದೆ ||ಪ||
ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೊ ||ಆ||
ಕೊಟ್ಟವರು ಬಂದೆನ್ನ ನಿಷ್ಠುರಂಗಳನಾಡಿ | ಕೆಟ್ಟ ಬೈಗಳ ಬೈದು ಮನದಣಿಯಲು ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ| ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೊ ||೧||
ಅವನ ಒಡವೆಯ ತಂದು ದಾನಧರ್ಮವ ಮಾಡೆ| ಅವನಿಗಲ್ಲದೆ ಪುಣ್ಯ ಇವಗಾವುದು|| ಅವನ ಒದವೆಗಳಿಂದ ತೀರ್ಥಯಾತ್ರೆಯ ಮಾಳ್ಪ||೨||
ಇವನ ಜೀವನ ಮಾಡಿ ಮನದಣಿಯಬಹುದು| ಕಾಳಗದಿ ಪೊಕ್ಕು ಕಡಿದಾಡಿ ಜಯಿಸಲುಬಹುದು | ಪೇಳಲಳವಲ್ಲ ಋಣದವಗೊಂದು ಸೊಲ್ಲ ||೩||
ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರ | ಮೃತ್ಯುಸೂತಕವು ಹನ್ನೊಂದು ದಿನಕೆ || ಮತ್ತೆ ಋಣಸೂತಕವು ಜನ್ಮಜನ್ಮಾಂತರದಕೆ | ಎತ್ತ ಹೋದರು ಬಿಡದೆ ಬೆನ್ಹತ್ತಿ ಬಹುದು ||೪||
ಬಂಧುಬಳಗದ ಮುಂದೆ ಬಹು ಮಾನವು ಹೋಗಿ| ಅಂದವಳಿದೆನೊ ಈ ವಿಧ ಋಣದೊಳು || ಇಂದಿರಾರಮಣ ಶ್ರೀಪುರಂದರವಿಠಲನೆ| ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೆ ||೫||
ಉತ್ತಮರ ಸಂಗ ಎನಗಿತ್ತು ಸಲಹೊ
ಉತ್ತಮರ ಸಂಗ ಎನಗಿತ್ತು ಸಲಹೊ ||ಪ||
ಚಿತ್ತಜನಕ ಸರ್ವೋತ್ತಮ ಮುಕುಂದ ||ಅ.ಪ||
ತಿರುತಿರುಗಿ ಪುಟ್ಟಲಾರೆ ಪರರ ಬಾಧಿಸಲಾರೆ
ಪರಿಪರಿಯ ಪಾಪಗಳ ಮಾಡಲಾರೆ
ಮರಣ ಜನನಗಳೆರಡು ಪರಿಹರವ ಮಾಡಯ್ಯ
ಕರುಣಾಸಮುದ್ರ ಮುರವೈರಿ ಶ್ರೀಕೃಷ್ಣ ||೧||
ಏನ ಪೇಳಲಿ ದೇವ ನಾ ಮಾಡಿದ ಕರ್ಮ
ನಾನಾ ವಿಚಿತ್ರವೈ ಶ್ರೀನಿವಾಸ
ಹೀನಜನರೊಳಗಾಟ ಶ್ವಾನಾದಿಗಳ ಕೂಟ
ಜ್ಞಾನವಂತನ ಮಾಡೊ ಜಾನಕೀರಮಣ ||೨||
ನಿನ್ನ ನಂಬಿದ ಮೇಲೆ ಇನ್ನು ಭಯವ್ಯಾತಕೆ
ಪನ್ನಗಾಧಿಶಯನ ಮನ್ನಿಸಯ್ಯ
ಮುನ್ನಭಕುತರನೆಲ್ಲ ಚೆನ್ನಾಗಿ ಪಾಲಿಸಿದ
ಎನ್ನೊಡೆಯ ರಂಗವಿಠಲ ಎನ್ನದೊರೆಯೆ ||೩||
ಉದಯ ವೈರಾಗ್ಯವಿದು
ಉದಯ ವೈರಾಗ್ಯವಿದು ನಮ್ಮ
ಪದುಮನಾಭನಲಿ ಲೇಶ ಭಕುತಿಯಿಲ್ಲ ||ಪ||
ಉದಯಕಾಲದಲೆದ್ದು ಗಡಗಡ ನಡುಗುತ
ನದಿಯಲಿ ಮಿಂದೆನೆಂದು ಹಿಗ್ಗುತಲಿ
ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು
ಬದಿಯಲಿದ್ದವರಿಗಾಶ್ಚರ್ಯ ತೋರುವುದು ||೧||
ಕಂಚುಗಾರನ ಬಿಡಾರದಂದದಿ
ಕಂಚು ಹಿತ್ತಾಳೆ ಪ್ರತಿಮೆಗಳ ನೆಗಹಿ
ಮಿಂಚಬೇಕೆಂದು ಬಲು ಜ್ಯೋತಿಗಳನು ಹಚ್ಚಿ
ವಂಚನೆಯಿಂದಲಿ ಪೂಜೆ ಮಾಡುವುದು ||೨||
ಕರದಲಿ ಜಪಮಣಿ ಬಾಯಲಿ ಮಂತ್ರವು
ಅರಿವೆ ಮುಸುಕು ಮೋರೆಗೆ ಹಾಕಿ
ಪರಸತಿಯರ ಗುಣ ಮನದಲಿ ಸ್ಮರಿಸುತ
ಪರಮ ವೈರಾಗ್ಯಶಾಲಿಯೆಂದೆನಿಸುವುದು ||೩||
ಬೂಟಕತನದಲಿ ಬಹಳ ಭಕುತಿ ಮಾಡಿ
ದಿಟನೀತ ಸರಿಯಾರಿಲ್ಲೆನಿಸಿ
ನಾಟಕ ಸ್ತ್ರೀಯಂತೆ ಬಯಲಡಂಭವ ತೋರಿ
ಊಟದ ಮಾರ್ಗದ ಜ್ಞಾನವಿಲ್ಲದೆ ||೪||
ನಾನು ಎಂಬುದ ಬಿಟ್ಟು ಜ್ಞಾನಿಗಳೊಡನಾಡಿ
ಏನಾದರೂ ಹರಿಪ್ರೇರಣೆಯೆಂದು
ಧ್ಯಾನಿಸಿ ಮೌನಿಸಿ ಪುರಂದರವಿಠಲನ
ಕಾಣದೆ ಮಾಡಿದ ಕಾರ್ಯಗಳೆಲ್ಲವು ||೫||