ದಾಸರಪದ (ಇ)
ಇರಬೇಕು ಸಂಸಾರದಿ ಮನುಜ ರಾಗ: ನಾದನಾಮಕ್ರಿಯೆ, ತಾಳ: ಆದಿ
ಇರಬೇಕು ಸಂಸಾರದಿ ಮನುಜ ಇರದಂತಿರಬೇಕು ||ಪ||
ಇರದಂತಿರಬೇಕು ಅಥವಾ ಇರಬೇಕು ಇಲ್ಲದಿರಬೇಕು ಶ್ರೀ ಹರಿದಾಸರು ಸಂಸಾರದೊಳಗೆ ||ಅ ಪ||
ಕುಲಸತಿಯಾದರೆ ಕೂಡಿರಬೇಕು
ಸುಲಭದಿಂದಲಿ ಸ್ವರ್ಗ ಸೂರಾಡಬೇಕು
ಕಲಹಗಂಟಿ ಸತಿ ಕರ್ಕಶೆಯಾದರೆ
ಹಲವು ಪರಿಯಿಂದ ಹೊರಗಾಗಬೇಕು |೧|
ಮಕ್ಕಳು ತಾವು ಮತಿವಂತರಾದರೆ
ಅಕ್ಕರೆಯಿಂದಲಿ ಕೂಡಿರಬೇಕು
ಚಿಕ್ಕತನದಿ ಬುದ್ಧಿ ಭೋರುಂಡನಾದರೆ
ಗಕ್ಕನೆ ಅಲ್ಲಿಂದ ಹೊರಗಾಗಬೇಕು |೨|
ದುಷ್ಟರ ಕಂಡರೆ ದೂರವಿರಬೇಕು
ಶಿಷ್ಟರ ಕಂಡರೆ ಕೈ ಮುಗಿಯಬೇಕು
ದಿಟ್ಟ ಶ್ರೀ ಪುರಂದರವಿಠಲ ರಾಯನ
ಗಟ್ಟಿಯಾಗಿ ನಿರುತ ನೆರೆ ನಂಬಬೇಕು |೩|
ಈತ ಲಿಂಗದೇವ ಶಿವನು
ಈತ ಲಿಂಗದೇವ ಶಿವನು | ಆತ ರಂಗಧಾಮ ವಿಷ್ಣು ||ಪ||
ಮಾತಕೇಳೋ ಮಂಕುಮನುಜ | ಮನದ ಅಹಂಕಾರ ಬಿಟ್ಟು ||ಅ ಪ||
ವೇದಕ್ಕೆ ಸಿಕ್ಕಿದನೀತ | ವೇದನಾಲ್ಕು ತಂದನಾತ
ಮೈಗೆಬೂದಿ ಧರಿಸಿದನೀತ | ಗಿರಿಯನ್ನು ಪೊತ್ತನಾತ ||೧||
ವ್ಯಾಧನಾಗಿ ಒಲಿದನೀತ | ಮಾಧವಾ ಮಧುಸೂದನನಾತ
ಮದನನ್ನ ಉರುಹಿದನೀತ | ಮದನನ್ನೇ ಪಡೆದನಾತ ||೨||
ಗಂಗೆಯನ್ನು ಪೊತ್ತವನೀತ | ಗಂಗೆಯನ್ನು ಪಡೆದನಾತ
ತುಂಗ ಹೆಳವನಕಟ್ಟೆ ಲಿಂಗ | ಅಂತರಂಗ ರಂಗನಾಥ ||೩||
ಇಟ್ಟಿಗೆ ಮೇಲೆ ನಿಂತ ನಮ್ಮ
ಇಟ್ಟಿಗೆ ಮೇಲೆ ನಿಂತ ನಮ್ಮ ವಿಠ್ಠಲ ತಾನು
ಪುಟ್ಟಪಾದ ಊರಿನಿಂತ ದಿಟ್ಟ ತಾನು ||ಪ||
ಪುಟ್ಟ ಪಾದ ಊರಿ ನಿಂತ ಗಟ್ಟಿಯಾಗಿ ನಿಂತಾನಮ್ಮ
ಟೊಂಕದ ಮೇಲೆ ಕೈಯಕಟ್ಟಿ ಭಕ್ತರು ಬರುವುದ ನೋಡುವನಮ್ಮ ||ಅ ಪ||
ಪಂಢರಪುರದಲ್ಲಿರುವನಂತೆ ಪಾಂಡುರಂಗ ಎಂಬುವನಂತೆ|
ಚಂದ್ರಭಾಗ ಪಿತ ಇವನಂತೇ
ಚಂದ್ರಭಾಗ ಪತಿ ಇವನಂತೇ ಅರಸಿರುಕ್ಮಿಣಿ ಪತಿ ಇವನಂತೇ ||೧||
ಕನಕದಾಸೆ ಇವಗಿಲ್ಲವಮ್ಮ ಹಣದ ಆಸೆ ಬೇಕಿಲ್ಲವಮ್ಮ||
ನಾದಬ್ರಹ್ಮ ಎಂಬುವ ನಮ್ಮ
ನಾದಬ್ರಹ್ಮ ಎಂಬುವ ನಮ್ಮ ಭಕುತರ ವಚನಕೆ ಕಾದಿಹನಮ್ಮ ||೨||
ಕರಿಯಕಂಬಳಿ ಹೊದ್ದಿಹನಮ್ಮ ಹಣೆಗೆ ನಾಮ ಹಚ್ಚಿಹನಮ್ಮ||
ತುಳಸಿಮಾಲೆ ಹಾಕ್ಯನಮ್ಮ
ತುಳಸಿಮಾಲೆ ಹಾಕ್ಯನಮ್ಮ ಪುರಂದರವಿಠ್ಠಲನೊಲಿದನಮ್ಮ ||೩||