ಮೌನದ ಧ್ವನಿ
ಅನೇಕ ವೇಳೆ ಮಾತಿಗಿಂತ ಮೌನವೇ ಹೆಚ್ಚು ಸೂಚಿಸುತ್ತದೆ. ಹೃದಯ ತುಂಬಿಬಂದಾಗ ಮಾತು ಸೋಲುತ್ತದೆ, ಆಳ ಮತ್ತು ಉದಾತ್ತವಾದ ಭಾವನೆಗಳನ್ನು ತಿಳಿಸಲು ಮಾತು ಅಷ್ಟೇನೂ ಪರಿಣಾಮಕಾರಿಯಲ್ಲ. ಹೃದಯದಿಂದ ಹೃದಯಕ್ಕೆ ಮೌನದಿಂದಲೇ ಸಂಪರ್ಕಿಸುವುದು ನಮ್ಮೆಲ್ಲರ ಅನುಭವವೇ. ದುಂಬಿಯು ಹೂವಿನಲ್ಲಿರುವ ಮಕರಂದವು ಸಿಗುವವರೆಗೂ ಗುಂಯಿಗುಡತಲಿದ್ದು ಅದು ಸಿಕ್ಕ ಕೂಡಲೇ ನಿಶ್ಶಬ್ದವಾಗುತ್ತದಲ್ಲವೇ? ನಾವು ಮೌನದ ಮಹಾಧ್ವನಿಯನ್ನು - ಅನಂತ ಜ್ಞಾನದ ಪ್ರತಿಧ್ವನಿಯನ್ನು - ಸಂಪರ್ಕಿಸಿದ ಒಡನೆಯೇ ಜೀವನದ ಅತಿ ದೊಡ್ಡ ಸಮಸ್ಯೆಗಳೂ ಒಮ್ಮೆಗೇ ಪರಿಹಾರವಾಗುವುವು. ಇದೇ ಕಾರಣದಿಂದ ಭಾರತದ ಶ್ರೇಷ್ಠ ದಾರ್ಶನಿಕರು ಮೌನ ಮತ್ತು ಏಕಾಂತವಾಸದ ಮೇಲ್ಮೆಯನ್ನು ಉಪದೇಶಿಸುತ್ತಾರೆ.
ಪುರಾತನ ಸಂಸ್ಕೃತ ಗ್ರಂಥವೊಂದರಲ್ಲಿ ಮೌನಧ್ವನಿಯ ಸತ್ತ್ವವನ್ನು ವಿವರಿಸುವ ಒಂದು ಕಥೆಯಿದೆ.
ಯುವಕನೂ, ಸ್ಫುರದ್ರೂಪಿಯೂ ಆದ ಒಬ್ಬ ಗುರುವು ಒಂದು ಆಶ್ರಮದಲ್ಲಿ ವಾಸಿಸುತ್ತಿದ್ದನು. ಅವನಿಗೆ ಕೇವಲ ಹದಿನಾರು ವರ್ಷಗಳಾಗಿದ್ದರೂ ಆಗಲೇ ಆತ್ಮಜ್ಞಾನಿಯಾಗಿದ್ದನು. ಒಮ್ಮೆ ಅವನು ಮರದ ನೆರಳಿನಲ್ಲಿ ದೀರ್ಘಾಲೋಚನೆಯಿಂದ ಕುಳಿತಿದ್ದನು. ಅನೇಕ ತಾಪತ್ರಯಗಳಿದ್ದ ಒಬ್ಬ ಮುದುಕನು ಅಲ್ಲಿಗೆ ಬಂದನು. ಈ ವೃದ್ಧನು ಶುಷ್ಕ ಪಂಡಿತ - ಸುಮ್ಮನೆ ವಾಗ್ವಾದ ಮಾಡುವುದರಲ್ಲಿ ಅವನಿಗೆ ಆಸಕ್ತಿ. ವಿವಾದಾಸ್ಪದ ತತ್ತ್ವಗಳನ್ನುಳ್ಳ ಕೆಲವು ಸಂಸ್ಕೃತ ಶ್ಲೋಕಗಳನ್ನು ರಚಿಸಿ ಯುವಕನನ್ನು ಸಂಬೋಧಿಸಿದನು ಮತ್ತು ಕ್ಲಿಷ್ಟವಾದ ಪ್ರಶ್ನೆಗಳನ್ನು ಕೇಳಿ ಅವನನ್ನು ಗೊಂದಲಗೊಳಿಸಲು ನೋಡಿದನು. ತರುಣ ಗುರುವು ಮೌನವಾಗಿದ್ದನು. ಆದರೆ ಅವನಲ್ಲಿ ಮೌನಧ್ವನಿಯ ಶಕ್ತಿಯು ಎಷ್ಟಿತ್ತೆಂದರೆ, ಏನೂ ಮಾತಾಡದೆಯೇ ಅವನ ಯೋಚನೆಗಳು ಮುದುಕನಿಗೆ ತಲಪಿದುವು. ಮಾತುಗಾರ ಪಂಡಿತನು ಯುವಕನ ಹೊಳೆಯುವ ಹಸನ್ಮುಖವನ್ನು ನೋಡುತ್ತಿದ್ದಂತೆಯೇ, ತಾನೂ ಶಾಂತನಾದನು. ಕ್ರಮೇಣ ಅವನಿಗೆ ಸತ್ಯದ ಅರಿವಾಯಿತು, ಜ್ಞಾನದ ಬಗೆಗೆ ತನಗಿದ್ದ ಒಣ ಜಂಭವೂ ಮಾಯವಾಯಿತು. ಸ್ನಾಯುಗಳ ಮತ್ತು ನರಮಂಡಲದ ಬಿಗಿತವು ಹೋಯಿತು, ಹಣೆಯ ಸುಕ್ಕುಗಳು ಕಡಮೆಯಾದುವು, ಕಣ್ಣುಗಳಲ್ಲಿ ಒಂದು ಬಗೆಯ ಹೊಳಪು ಬಂದಿತು, ಮುಖ ಸಂತೋಷದಿಂದ ಅರಳಿತು, ಅವನ ಸಮಸ್ಯೆಗಳು ಮರೆಯಾದುವು. ಅವನೂ ಕೊನೆಗೆ ಮೌನಧ್ವನಿಯ ಬೆಳಕನ್ನು ಕಂಡನು.
ನಮ್ಮ ಧರ್ಮಗ್ರಂಥಗಳ ಪ್ರಕಾರ ಸತ್ತ್ವಶೀಲ ಮೌನದ ಧ್ವನಿಯ ನಿರೂಪಕರಲ್ಲಿ ಪ್ರಮುಖನಾದ ದಕ್ಷಿಣಾಮೂರ್ತಿಯು ಈ ಬಗೆಯಿಂದಲೇ ತನ್ನ ಶಿಷ್ಯರಿಗೆ ಆತ್ಮಜ್ಞಾನದ ಅನುಭವವನ್ನು ಮಾಡಿಕೊಟ್ಟನು.
ಆಧುನಿಕ ಕಾಲದಲ್ಲೂ ಅನೇಕ ಸಾಧು ಸಂತರು ಮೌನದ ಧ್ವನಿಯನ್ನು ಕುರಿತಾದ ತಮ್ಮ ಚಿಂತನೆಗಳನ್ನು ಮತ್ತು ತಮಗೆ ಗೋಚರವಾದ ಸತ್ಯಗಳನ್ನು ನಮ್ಮಲ್ಲಿ ಹಂಚಿಕೊಂಡಿದ್ದಾರೆ. ಅಂಥವರಲ್ಲಿ ಮುಖ್ಯರಾದವರು ಶ್ರೀ ರಮಣ ಮಹರ್ಷಿಗಳು. ಅವರ ಉಪದೇಶ ಸಾರದಲ್ಲಿ ಮೌನದ ಶಕ್ತಿಯ ಉಲ್ಲೇಖಗಳನ್ನು ಕಾಣಬಹುದು.
ರಮಣ ಮಹರ್ಷಿಗಳು ವಿವರಿಸಿರುವ ಮೌನದ ಶಕ್ತಿಯನ್ನು ಅವರ ಜೀವನದಲ್ಲೂ, ಅವರ ಉಪದೇಶಗಳಲ್ಲೂ ಮತ್ತು ಅವರ ಉಪದೇಶಿಸಿದ ರೀತಿಯಲ್ಲೂ ಕಾಣಬಹುದು. ಅವರ ಉಪದೇಶಗಳ ಮೌನ ಧ್ವನಿಯು ಅಧ್ಯಾತ್ಮಿಕ ಸತ್ತ್ವದಿಂದ ಭರಿತವಾಗಿ ಗ್ರಾಹಕರ ಮನವನ್ನು ನೇರವಾಗಿ ಮುಟ್ಟುತ್ತಿತ್ತು. ಮಹರ್ಷಿಗಳು ನಿರಾಯಾಸದಿಂದ ಹೊರಸೂಸಿದ ಮೌನ ಸತ್ತ್ವವು ಸಮೀಪಸ್ಥರೆಲ್ಲರನ್ನೂ ಶಾಂತರನ್ನಾಗಿ ಮಾಡುತ್ತಿತ್ತು. ಅವರೆಲ್ಲರಿಗೂ ಒಂದು ಬಗೆಯ ಸಮಾಧಾನ ಮತ್ತು ಆನಂದದ ಅನುಭವವಾಗುತ್ತಿತ್ತು. ಸೊಮರ್ಸೆಟ್ ಮಾಮ್ ಎಂಬ ಇಂಗ್ಲಿಷ್ ಕಾದಂಬರಿಕಾರನು ರಮಣ ಮಹರ್ಷಿಗಳನ್ನು ಸಂಧಿಸಿದಾಗ ಅವನಿಗೆ ಇದೇ ಅನುಭವವಾಯಿತು. Razor’s Edge ಎಂಬ ತನ್ನ ಕೃತಿಯಲ್ಲಿ, ಆತನು ರಮಣ ಮಹರ್ಷಿಗಳನ್ನು ಒಂದು ಪಾತ್ರವಾಗಿ ಚಿತ್ರಿಸಿದ್ದಾನೆ. ಮಹರ್ಷಿಗಳ ಮೌನೋಪದೇಶದ ಉಗಮವಾದದ್ದು ಭಾರತೀಯ ಸನಾತನ ಸಂಪ್ರದಾಯದಿಂದ.
ರಮಣ ಮಹರ್ಷಿಗಳು ಮೌನದ ಪ್ರಭಾವ ಹೇಗೆ ವರ್ತಿಸುತ್ತದೆಂದು ವಿವರಿಸಿದ್ದಾರೆ. ಭಾಷೆಯು ಒಬ್ಬರ ಆಲೋಚನೆಗಳನ್ನು ಇನ್ನೊಬ್ಬರಿಗೆ ತಿಳಿಸುವ ಮಾಧ್ಯಮ. ಅದು ಪ್ರಾರಂಭವಾಗುವುದು ಯೋಚನೆಗಳು ಉದ್ಭವಿಸಿದನಂತರ ಮತ್ತು ಮೊದಲನೆಯ ಯೋಚನೆ ‘ನಾನು’ ಅನಂತರ ಬೇರೆ ಯೋಚನೆಗಳು. ಈ ‘ನಾನು’ ಎಂಬ ಯೋಚನೆಯೇ ಎಲ್ಲ ಸಂಭಾಷಣೆಗೆ ಮೂಲ. ಈ ಅಹಂಕಾರ ಮೂಲವಾದ ಯೋಚನೆಗಳು ಯಾರಲ್ಲಿ ಇರುವುದಿಲ್ಲವೋ, ಅಂಥವರು ಮತ್ತೊಬ್ಬರನ್ನು ಸಾರ್ವತ್ರಿಕ ಭಾಷೆಯಾದ ಮೌನದ ಮೂಲಕ ಅರ್ಥಮಾಡಿಕೊಳ್ಳಬಲ್ಲರು. ಮೌನವೇ ನಿರಂತರವಾಗಿ ಹರಿಯುವ ಭಾಷೆ - ಅದಕ್ಕೆ ಮಾತೇ ತಡೆ. ದೀರ್ಘ ಸಂಭಾಷಣೆಯಿಂದ ಯಾವುದು ಸಾಧ್ಯವಿಲ್ಲವೋ ಅದನ್ನು ಮೌನವು ಕ್ಷಣಮಾತ್ರದಲ್ಲಿ ಸಾಧಿಸಬಲ್ಲದು.
ರಮಣ ಮಹರ್ಷಿಗಳ ಸಂದೇಶವು ಅಧ್ಯಾತ್ಮಿಕ ಹಾಗೂ ಉದಾತ್ತ ಭಾವನೆಗಳನ್ನು ಕುರಿತದ್ದಾದರೂ, ಅದು ನಮ್ಮೆಲ್ಲರಿಗೂ ಎಲ್ಲ ಸಂವಾದಗಳಲ್ಲೂ ಅನ್ವಯಿಸುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಇದನ್ನು ಬಳಸಿದರೆ, ಸಾಮಾಜಿಕ ಮತ್ತು ಕೌಟುಂಬಿಕ ಕಲಹಗಳನ್ನು ತಪ್ಪಿಸಬಹುದು. ಇಷ್ಟ ಬಂದಾಗ ನಮ್ಮ ನಾಲಗೆಯನ್ನು ನಿಯಂತ್ರಿಸಿ, ಮೌನದ ಆಸರೆಯನ್ನು ಹೊಕ್ಕಬಲ್ಲವರಾದರೆ, ಜೀವನವೇ ಸ್ವರ್ಗವಾಗುವುದು. ನಮ್ಮ ನಾಲಗೆಯ ಮೇಲೆ ಹತೋಟಿ ಇಲ್ಲದಿರುವುದಿಂದಲೇ ಅಲ್ಲವೆ ನಾವು ಅನೇಕ ಮಂದಿ ಸ್ನೇಹಿತರನ್ನು ಕಳೆದುಕೊಂಡಿರುವುದು ಮತ್ತು ಇತರರನ್ನು ವೈರಿಗಳಾಗಿಸಿರುವುದು? ಬಹಳ ಮಾತನಾಡುವುದು, ಅನವಶ್ಯಕವಾಗಿ ಮಾತನಾಡುವುದು ಮತ್ತು ಅನುಚಿತವಾಗಿ ಮಾತನಾಡುವುದು, ಇವುಗಳಿಂದ ನಮಗೇ ನಷ್ಟ. ಅತಿಯಾಗಿ ಮಾತನಾಡುವುದರಿಂದ ನಮ್ಮ ನರವ್ಯೂಹಕ್ಕೆ ಹೆಚ್ಚು ಉದ್ವೇಗ ಮತ್ತು ಉದ್ರೇಕ. ಅದರಿಂದ ರಕ್ತದಲ್ಲಿನ ಪೌಷ್ಟಿಕಾಂಶಗಳ ವ್ಯಯವಾಗಿ ನರಗಳು ದುರ್ಬಲವಾಗುತ್ತವೆ ಮತ್ತು ಸಿಡುಕುತನ ಹೆಚ್ಚುತ್ತದೆ. ಬಹಳ ಹೆಚ್ಚು ಮಾತನಾಡುವುದರಿಂದ ನಮ್ಮ ಏಕಾಗ್ರಚಿತ್ತತೆಯೂ ನಾಶವಾಗುತ್ತದೆ.
ದಿನವೂ ಸ್ವಲ್ಪ ಹೊತ್ತು ಮೌನವನ್ನು ಆಚರಿಸುವುದರಿಂದ ನಮ್ಮ ಶಬ್ದಾಂಗಕ್ಕೆ ಅಗತ್ಯವಾದ ವಿರಾಮ ಸಿಗುತ್ತದೆ, ದೇಹಕ್ಕೆ ಪುನರ್ಯೌವನವಾಗುತ್ತದೆ ಮತ್ತು ಮೆದುಳು ಹರಿತಗೊಳ್ಳುತ್ತದೆ. ಮನಸ್ಸು ತಿಳಿಯಾಗಿ ಶಾಂತಿಯಿಂದಿದ್ದಾಗ ಮೌನದ ಬಲದಿಂದಲೇ ಎಷ್ಟೇ ಆಳವಾದ ಸಮಸ್ಯೆಗಳೂ ಬಗೆಹರಿಯುತ್ತವೆ. ಮಹಾತ್ಮ ಗಾಂಧಿಯವರು ತಮ್ಮ ವೈಯುಕ್ತಿಕ ಮತ್ತು ರಾಜಕೀಯ ಸಂದರ್ಭಗಳನ್ನು ನಿಯಂತ್ರಿಸಲು ಮೌನವನ್ನೇ ಒಂದು ಸಾಧನವಾಗಿ ಉಪಯೋಗಿಸಿದರು. ಇದೇ ಕಾರಣದಿಂದಲೇ ನಮ್ಮ ಧರ್ಮಗ್ರಂಥಗಳು ನಮ್ಮ ಮನೋಧಾರ್ಡ್ಯದ ಮತ್ತು ಅಧ್ಯಾತ್ಮಿಕ ಶಕ್ತಿಯ ಪುನಃಪ್ರಾಪ್ತಿಗಾಗಿ ಆಗಾಗ ಮೌನವ್ರತವನ್ನು ಆಚರಿಸಬೇಕೆಂದು ವಿಧಿಸುತ್ತವೆ.
ನಾವು ಎಕೆ ಹೆಚ್ಚು ಮಾತಾಡಲಿಚ್ಛಿಸುತ್ತೇವೆ? ಅನೇಕ ವೇಳೆ ನಮಗೆ ಮಾತಾಡುವುದಕ್ಕೆ ಇಷ್ಟವಿರಲಿ, ಇಲ್ಲದಿರಲಿ ಮಾತನಾಡುವುದಕ್ಕೆ ಕಾರಣ ಭಯ ಅಥವಾ ಅಭದ್ರತೆ. ನಮಗೆ ಆತ್ಮವಿಶ್ವಾಸದ ಕೊರತೆ, ನಮ್ಮ ಪೊಳ್ಳುತನ ಇತರರಿಗೆ ಕಾಣಬಹುದೆಂಬ ಹೆದರಿಕೆ ಇವುಗಳನ್ನು ಶುಷ್ಕ ಪದಗಳ ಪರದೆಯಿಂದ ಮುಚ್ಚಲೆತ್ನಿಸುತ್ತೇವೆ. ಹಾಗೆ ಮಾಡುವುದು ಮಾನವ ಶಕ್ತಿಸಂಪತ್ತಿನ ಅಪವ್ಯಯ. ಈ ಅಪವ್ಯಯವನ್ನು ನಿಲ್ಲಿಸಿದರೆ ಅಪಾರ್ಥಗಳು, ದ್ವೇಷ, ಸೋಮಾರಿತನ, ಕಾಡು ಹರಟೆ ಇವೆಲ್ಲವೂ ಕಡಿಮೆಯಾಗಿ ನಮ್ಮ ಜೀವನ ಸಮರಸವಾಗುವುದು. ಈ ಮಹಾಶಕ್ತಿಯನ್ನು ಅಹಂಕಾರದ ಮಾತುಗಳಲ್ಲಿ ವ್ಯಯ ಮಾಡದೆ, ಸಮಾಜದ ಒಳಿತಿಗೆ ವಿನಿಯೋಗಿಸಿದರೆ ಮಾನವನ ಕ್ರಿಯಾ ಸಾಮರ್ಥ್ಯವೂ ವೃದ್ಧಿಸುವುದು. ಅಲ್ಲದೆ ವ್ಯರ್ಥಾಲಾಪವನ್ನು ನಿಯಂತ್ರಿಸುವುದರಿಂದ ನಮ್ಮ ಅಧ್ಯಾತ್ಮಿಕ ಶಕ್ತಿಯೂ ಹೆಚ್ಚುವುದು, ನಮ್ಮ ಆರೋಗ್ಯ ಮತ್ತು ವಿವೇಕ ಉತ್ತಮಗೊಳ್ಳುವುವು.
ಮೌನವನ್ನು ಸರಿಯಾಗಿ ಅಭ್ಯಾಸಮಾಡಿದರೆ, ನಿರ್ಧ್ವನಿಯ ಅಂತರಾಳದಲ್ಲಿನ ಸತ್ಯದ ಧ್ವನಿಯನ್ನು ಸ್ಪಷ್ಟವಾಗಿ ಕೇಳಬಹುದು. ಇತರರೊಂದಿಗೆ ಸಂಭಾಷಿಸುವಾಗ ನಮ್ಮ ಅಭಿಪ್ರಾಯವನ್ನು ಕೊಡಲು ಆತುರರಾಗಿರಕೂಡದು, ಅಂಥ ಅಭಿಪ್ರಾಯವನ್ನು ಕೇಳಿದಾಗ ಮಾತ್ರವೇ ಕೊಡಬೇಕು. ತಮ್ಮ ಯೋಚನೆಗಳನ್ನೂ, ದೃಷ್ಟಿಕೋನವನ್ನೂ ಇತರರ ಮೇಲೆ ಹೇರಲು ಕೆಲವರು ಅನವಶ್ಯಕವಾಗಿ ವಿವಾದ ಮಾಡುವುದುಂಟು. ತಮ್ಮಲ್ಲಿರುವುದಕ್ಕಿಂತ ಹೆಚ್ಚು ವ್ಯಯ ಮಾಡುವ ಇಂಥವರಿಗೆ ಸಿಗುವ ಫಲ ನೀರಸ. ಒಳಗೆ ಟೊಳ್ಳಾಗಿರುವುದರಿಂದಲೇ, ತಮಟೆಯು ದೊಡ್ಡದಾದ ಶಬ್ದ ಮಾಡುವುದು.
ನಾವು ಏಕೆ ಹೆಚ್ಚು ಮಾತನಾಡುತ್ತೇವೆ ಎಂಬುದನ್ನು ಕುರಿತೂ ಚಿಂತಿಸಬೇಕು - ಮೆಚ್ಚಿಗೆ ಪಡೆಯುವುದಕ್ಕೋ, ಹರಟೆಗೋ, ಸ್ನೇಹದಿಂದಲೋ, ಪ್ರೀತಿಯಿಂದಲೋ ಅಥವಾ ದ್ವೇಷ ಮತ್ತು ವಿಮರ್ಶೆಯಿಂದಲೋ? ಸಾಮಾನ್ಯವಾಗಿ ಜನರು ಒಬ್ಬ ವ್ಯಕ್ತಿ ಅಥವಾ ವಸ್ತುವನ್ನು ಮೆಚ್ಚುವಾಗ ಒಂದು ಪದವನ್ನು ಉಪಯೋಗಿಸಿದರೆ, ವಿಮರ್ಶೆ, ಹರಟೆ ಮತ್ತು ಪರನಿಂದೆ ಮಾಡುವಾಗ ಹತ್ತು ಪದಗಳನ್ನು ಉಪಯೋಗಿಸುತ್ತಾರೆ. ಪರಿಣಾಮ ಅವರ ಮನಸ್ಸು ಮಲಿನವಾಗುವುದೇ ಹೊರತು, ನಿಂದಿಸಿಕೊಂಡವರ ಮನವಲ್ಲ - ಅವರಿಗೆ ತಮ್ಮನ್ನು ಯಾರೋ ನಿಂದಿಸಿದ್ದಾರೆ ಎಂಬ ಪರಿವೆಯೂ ಇರುವುದಿಲ್ಲ. ಸಂಭಾಷಣೆ ಒಂದು ದೊಡ್ಡ ಕಲೆ. ಪ್ರತಿಯೊಂದು ಪದದಲ್ಲೂ ಒಂದು ಸತ್ತ್ವವಿದೆ - ಅವುಗಳನ್ನು ಯೋಚಿಸಿ ಉಪಯೋಗಿಸಬೇಕು, ಸೂಕ್ತವಾಗಿ ಉಪಯೋಗಿಸಬೇಕು. ಅನಾವಶ್ಯಕವಾಗಿ ಅಥವಾ ಅನನ್ವಯವಾಗಿ ಉಪಯೋಗಿಸಿದರೆ ಎಲ್ಲ ಶಕ್ತಿಗಳಂತೆ ವಾಕ್ಶಕ್ತಿಯೂ ನಮಗೇ ಹಾನಿಯುಂಟು ಮಾಡುತ್ತದೆ.
ಮೌನವೇ ಬಂಗಾರ ನಾಲಗೆ ಸುಮ್ಮನಿದ್ದಾಗಲೇ ಹೃದಯುವು ಮಾತನಾಡುವುದು ನಿಮ್ಮ ನಾಲಗೆ ಮಾತನಾಡದಿರಲಿ, ಆದರೆ ನಡತೆಯಿಂದ ನಿಮ್ಮ ಸಂದೇಶ ಬರಲಿ ಈ ಮೇಲಿನ ತತ್ತ್ವಗಳನ್ನು ಮನದಲ್ಲಿಟ್ಟರೆ ಮೌನದ ಧ್ವನಿಯ ಶಕ್ತಿಯನ್ನು ಕೈಗೂಡಿಸಿಕೊಳ್ಲಲು ಸಾಧ್ಯವಾಗುವುದು.