ಈದಿನ,ಈಕ್ಷಣ ನಾವೇನು ಮಾಡಬಹುದು
(ಒಂದು ಚಿಂತನಾತ್ಮಕ ಬರಹ)
ಶ್ರೀ ಪುರಂದರ ದಾಸರು ರಚಿಸಿ, ಹಾಡಿದ ಒಂದು ಚಿಕ್ಕ ಕೀರ್ತನೆ ಹೀಗಿದೆ:
ಇಂದಿನ ದಿನ ಶುಭದಿನವು,ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ,ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ, ಇಂದಿನ ಲಗ್ನ ಶುಭಲಗ್ನ
ದಾಸರು ಹೇಳಿದ ಹಾಗೆ ಈ ದಿನವೇ ಬಹು ಮುಖ್ಯವಾದದ್ದು.ನೆನ್ನೆಯದು ಮುಗಿದು ಹೋದ ಅಧ್ಯಾಯ,ನಾಳೆಯದು ನಾಳೆಗೇ ಇರಲಿ.ಧೈರ್ಯದಿಂದ ಎದುರಿಸೋಣ.ಮುಗಿದುಹೋದ ನೆನ್ನೆಯದನ್ನು ಚಿಂತಿಸಿ ಫಲವಿಲ್ಲ.ಬರಲಿರುವ ನಾಳೆಯ ದಿವಸಗಳಲ್ಲಿ ನಮ್ಮ ಜೀವನ ಸುಖದಿಂದ, ಸಂತೋಷಕರವಾಗಿ ಇರಬೇಕಾದರೆ,ಇವತ್ತಿನ ಈ ಕ್ಷಣಗಳು ಅಂದರೆ ಇಂದು ದಿವಸದ 24ಘಂಟೆಗಳು ಅತಿ ಅಮೂಲ್ಯವಾದದ್ದು.ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿಯುತ ಆದ್ಯ ಕರ್ತವ್ಯವೂ ಆಗಿದೆ.
ಇದಕ್ಕೊಸ್ಕರ ನಾವೆಲ್ಲ ಮಾಡಬಹುದಾದದ್ದು ? ಎಲ್ಲರೂ ಚಿಂತಿಸಬೇಕಾದ ವಿಚಾರ.ಇವತ್ತಿನ ಕಾರ್ಯಸೂಚಿ ಹೀಗಿದ್ದರೆ ಹೇಗೆ ಎಂದು ನಾವು ವಿಮರ್ಶಿಸೋಣ.ಒಂದು ಅನಿಸಿಕೆ.
1.ದಿವಸದ 24ಘಂಟೆಗಳಲ್ಲಿ ಕನಿಷ್ಠ 10 ರಿಂದ 12 ಘಂಟೆಗಳಷ್ಟು ವೇಳೆಯನ್ನು ನಮಗೆ ಇಷ್ಟವಾದ ಮತ್ತು ಕೆಲವುಸಲ ಇಷ್ಟವಲ್ಲದಿದ್ದರೂ ಸಹ ಮಾಡಬೇಕಾದ ಕೆಲಸ ಕಾರ್ಯಗಳನ್ನು ಆಸಕ್ತಿಯಿಂದ, ಮುತುವರ್ಜಿಯಿಂದ, ಜವಾಬ್ದಾರಿಯಿಂದ ನಿಭಾಯಿಸುವುದು.ಎಷ್ಟೋ ಸಲ ನಾವುಗಳು ಹಗಲುಗನಸು ಕಾಣುತ್ತಾ,ಇಂದಿನ ಅಮೂಲ್ಯವಾದ ಸಮಯ ವ್ಯರ್ಥಮಾಡುತ್ತ,ಸೋಮಾರಿತನದಿಂದ ಗಮನವಿಟ್ಟು ಮುಖ್ಯವಾದ ಮತ್ತು ಇಂದಿನ ದಿನವೇ ಮಾಡಬೇಕಾದ ಕೆಲಸಗಳನ್ನು ಮುಂದೂಡುವುದು ಸಹಜ.
2.ಯಾವ ಕೆಲಸವನ್ನೂ ಅರ್ಧಕ್ಕೆ ನಿಲ್ಲಿಸದೆ, ಅದನ್ನು ಸಂಪೂರ್ಣವಾಗಿ ಜವಾಬ್ದಾರಿಯುತವಾಗಿ,ಚೊಕ್ಕವಾಗಿ ಮಾಡುವುದು.
3.ನಮ್ಮನ್ನು ನಾವು ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗಿ, ಅದರಿಂದಾಗಿ ಬೇರೆಯವರು ಅಂದರೆ ನಮ್ಮ ಜೊತೆಯಲ್ಲಿರುವ ಯಾರಿಗೂ ನಮ್ಮಿಂದ ಯಾವ ತೊಂದರೆಯೂ ಉಂಟಾಗದಂತೆ ಎಚ್ಚರಿಕೆ ವಹಿಸುವುದು.
4.ಈ ದಿವಸ ಯಾವ ವಿಚಾರಕ್ಕೂ ಆಕ್ಷೇಪಿಸದೆ, ಯಾರಮೇಲೂ ದರ್ಪವನ್ನು ಪ್ರದರ್ಶಿಸದೆ ಇರುವುದಕ್ಕೆ ಪ್ರಯತ್ನಿಸುವುದು.
5.ಈ ದಿವಸ ಎಲ್ಲರ ಅಭಿಪ್ರಾಯಕ್ಕೆ ಬೆಲೆಕೊಟ್ಟು, ನಮ್ಮ ಗುರಿ,ಆದರ್ಶಗಳನ್ನು ಗಮನದಲ್ಲಿಟ್ಟು ಯಾವ ಪ್ರಶಂಸೆಗಳಿಗೂ ಆಸೆಪಡದೆ ಇರುವುದು.
6.ಈ ದಿವಸ ಸಹಾಯ ಯಾಚಿಸಿದವರಿಗೆ ಹಾಗೂ ತೊಂದರೆತಾಪತ್ರಯಗಳಲ್ಲಿ ಇರುವವರಿಗೆ ಕಿಂಚಿತ್ತಾದರೂ ಹೃದಯಪೂರ್ವಕವಾಗಿ ಸಹಾಯಮಾಡುವುದು.
7.ಈ ದಿವಸ ಕೆಲಸವನ್ನು ಯೋಗ, ಧ್ಯಾನ, ಪ್ರಾರ್ಥನೆಗೆ ಮುಡಿಪಾಗಿಟ್ಟು ಕಟ್ಟುನಿಟ್ಟಾಗಿ ಪಾಲಿಸುವುದು.
8.ಈ ದಿವಸ ಸ್ವಲ್ಪಸಮಯವನ್ನು ಮನಸ್ಸಿಗೆ ಆಹ್ಲಾದ ಕೊಡುವ ವಿಚಾರಗಳಾದ ಸಂಗೀತ ಆಲಿಸುವುದು, ಭಗವನ್ನಾಮ ಸಂಕೀರ್ತನೆಗೆ,ಓದಿಗೆ, ಬರೆಯಲಿಕ್ಕೆ ಬಳಸುವುದು.
9.ಈ ದಿವಸ ಕಾರ್ಯಕ್ರಮದ ಪಟ್ಟಿಯನ್ನು ಮೊದಲಿಗೇ ನಿರ್ಧರಿಸಿ,ಪಟ್ಟಿಮಾಡಿ ಆದಷ್ಟೂ ಅದನ್ನು ಸಂಪೂರ್ಣವಾಗಿ ಮುಗಿಸುವುದು ಅಂದರೆ ಕೆಲಸಗಳನ್ನು ಬಾಕಿ ಇಲ್ಲದೆ ಮಾಡುವುದು.
10.ಈ ದಿವಸ 30 ನಿಮಿಷಕ್ಕೆ ಕಡಿಮೆಯಿಲ್ಲದೆ ಒಂದು ಘಂಟೆಯಾದರೂ ಮೌನವನ್ನು ಆಚರಿಸುವುದು.
11.ಸೋಮಾರಿತನದಿಂದ ಹಾಗೂ ಆಲಸ್ಯದಿಂದ ಮುಖ್ಯವಾದ ಕೆಲಸಗಳನ್ನು ಮುಂದೂಡುವುದು ಮಾನವನ ಸಹಜ ಸ್ವಭಾವ. ಇಂತಹ ವಿಚಾರಗಳಲ್ಲಿ ಜಾಗರೂಕತೆಯಿಂದ ಇರುವುದು.
12.ಈ ದಿವಸ ಯಾವ ಕೆಲಸ,ಕಾರ್ಯಗಳಿಂದ ನಮ್ಮ ಮನಸ್ಸಿಗೆ ಸುಖ, ಸಂತೋಷ, ಹೆಚ್ಚುಹೆಚ್ಚು ಆನಂದ ಸಿಗುವುದೋ ಅದನ್ನು ಕಾರ್ಯರೂಪಕ್ಕೆ ತಂದು ಜಗತ್ತಿನ ಹಾಗೂ ಬಹುಜನಹಿತಕ್ಕಾಗಿ ಶ್ರಮಿಸುತ್ತಾ ಎಲ್ಲವನ್ನೂ ಭಗವಂತನಿಗೆ ಅರ್ಪಣೆಮಾಡುವುದು.
ಈ ಸಂಧರ್ಭದಲ್ಲಿ ನಾವು ನೆನೆಪಿನಲ್ಲಿಟ್ಟುಕೊಳ್ಳಬೇಕಾದ್ದು ಶ್ರೀ ಸ್ವಾಮಿ ವಿವೇಕಾನಂದರ ದಿವ್ಯವಾಣಿ - "ಆತ್ಮನೋ ಮೋಕ್ಷಾರ್ತಂ ಜಗತ್ ಹಿತಾಯ ಚ" - ಅಂದರೆ ಪ್ರತಿಯೊಬ್ಬರೂ ಆತ್ಮಸಾಕ್ಷಾತ್ಕಾರದ ಗುರಿಯ ಜೊತೆಗೆ ಜಗತ್ತಿನ ಸುಖ, ಸಂತೋಷ ಮತ್ತು ಹಿತಕ್ಕಾಗಿಯೂ ಶ್ರಮಿಸಬೇಕು.
ಈ ದಿವಸ, ಈ ಶುಭದಿನ. ಈ ಕ್ಷಣ ವ್ಯರ್ಥವಾಗದ ಹಾಗೆ ಪ್ರತಿದಿವಸವೂ ನಾವೆಲ್ಲಾ ಶ್ರದ್ಧೆಯಿಂದ ಪ್ರಯತ್ನಿಸೋಣವೇ?ಏನಂತೀರಾ?
"ಹರಿಃ ಓಂ ತತ್ಸತ್ ಶ್ರೀ ರಾಮಕೃಷ್ಣಾರ್ಪಣಮಸ್ತು"