ಭಗವನ್ನಾಮ ಸಂಕೀರ್ತನೆಯ ಮಹತ್ವ
ಪರಮಾತ್ಮನ ಸಾಕ್ಷಾತ್ಕಾರಕ್ಕೆ ಕಲಿಯುಗದಲ್ಲಿ ಅತಿ ಸುಲಭಸಾಧ್ಯವಾದ ಮಾರ್ಗ ಯಾವುದೆಂದರೆ ಅದು ಭಗವನ್ನಾಮ ಸಂಕೀರ್ತನೆ.ಇದು ಅತಿಶಯೋಕ್ತಿಯಲ್ಲ.ಪ್ರಾಚೀನ ಋಷಿಕವಿಗಳು ಈ ಕಾರಣಕ್ಕಾಗಿಯೇ ಭಗವಂತನ ವಿವಿಧ ಲೀಲಾವಿನೋದಗಳನ್ನು ಸಂಕೀರ್ತನಾ ರೂಪದಲ್ಲಿ ಸೃಜಿಸಿ ಜನಸಾಮಾನ್ಯಕ್ಕೆ ನೀಡಿ ಔತನ್ಯದ ಮಾರ್ಗ ರೂಪಿಸಿಕೊಟ್ಟಿದ್ದಾರೆ.
ಈ ಭಗವನ್ನಾಮ ಸಂಕೀರ್ತನೆಗಳಲ್ಲಿ ಸಗುಣದೇವತಾಸ್ತುತಿಗಳೂ ಹಾಗೂ ಅದ್ವೈತಸಿದ್ಧಾಂತದ ತಿರುಳನ್ನೇ ಎತ್ತಿಹಿಡಿಯುವ ಕೀರ್ತನೆಗಳು,ಶ್ಲೋಕಗಳು ಬಹಳವಾಗಿ ಇವೆ.ಶೃತಿ,ತಾಳ,ಲಯ ಬದ್ಧವಾಗಿ ಹಾಗೂ ಅತಿ ಮುಖ್ಯವಾಗಿ ಭಕ್ತಿ,ಪ್ರೇಮ ಭಾವಗಳಲ್ಲಿ ರಮ್ಯವಾಗಿ ವಿವಿಧರಾಗಗಳಲ್ಲಿ ಹಾಡಿ,ತಾವೂ ರಸಾನುಭವ ಮಾಡಿಕೊಂಡು ಭಕ್ತವೃಂದದವರನ್ನೂ,ಶ್ರೋತ್ರುಗಳನ್ನೂ ತಲ್ಲೀನರಾಗಲಿಕ್ಕೆ ಹಾಗೂ ಹಾಡಲಿಕ್ಕೆ ಪ್ರೇರೇಪಿಸುವ ಮಹನೀಯರನ್ನು ಅಂದಿನಂತೆ ಇಂದೂ ಸಹ ನಾವು ಕಾಣುತ್ತಿದ್ದೇವೆ.
ಭಗವನ್ನಾಮ ಸಂಕೀರ್ತನೆಯ ಮಹತ್ವವನ್ನು ಹೆಚ್ಚು ಹೆಚ್ಚು ತಿಳಿಯಬೇಕಾದರೆ ಅನೇಕ ಮಹಾತ್ಮರ ವಾಣಿಯ ಕಡೆಗೆ ಸೂಕ್ಷ್ಮವಾಗಿ ನಮ್ಮ ಗಮನ ಹರಿಸಬೇಕು.
ಶ್ರೀ ಸದಾಶಿವ ಬ್ರಹ್ಮೇಂದ್ರರು: ’ಎಲೈ ಚಪಲ ಮನಸ್ಸೇ ಈ ಸಂಸಾರ ಸಾಗರವನ್ನು ದಾಟಬೇಕಾದರೆ ಯಜ್ಞ,ಯಾಗಗಳು,ತೀರ್ಥಯಾತ್ರೆ,ಸನ್ಯಾಸ,ಸಜ್ಜನರ ಸಂಗ ಮುಂತಾದ ಸಾಧನೆಗಳು ಅನೇಕವಾಗಿ ಇದ್ದರೂ ಸುಲಭಸಾಧನೆ ’ಶಿವನಾಮಸ್ಮರಣೆ’ ಅದನ್ನೇ ಮಾಡಿ”
ಚಕ್ರವರ್ತಿ ಶ್ರೀರಾಜಗೋಪಾಲಾಚಾರಿ : “ಶ್ರೀ ಶಂಕರಾಚಾರ್ಯರ ಭಜಗೋವಿಂದಂ ಸ್ತೋತ್ರ ಸಂಸ್ಕೃತದಲ್ಲಿನ ಒಂದು ಅತ್ಯುನ್ನತ ಧಾರ್ಮಿಕ ಜನಪ್ರಿಯ ಸ್ತೋತ್ರ.ಒಬ್ಬ ಮನುಷ್ಯನ ಮಾನಸಿಕ ಹಾಗೂ ಧಾರ್ಮಿಕ ಬೆಳವಣಿಗೆಗೆ ವೇದಾಂತದ ತಿರುಳನ್ನು ಬಹಳ ರಸವತ್ತಾಗಿ ಸುಂದರ ಸಂಕೀರ್ತನೆ ರೂಪದಲ್ಲಿ ಇದನ್ನು ಹಾಡಬಹುದು”
ಶ್ರೀಕೃಷ್ಣಪರಮಾತ್ಮ ’ಭಗವದ್ಗೀತೆಯಲ್ಲಿ’ : “ನಾನು ಎಲ್ಲದಕ್ಕೂ ಕಾರಣನು, ನನ್ನಿಂದಲೇ ಎಲ್ಲವೂ ನಡೆಯುತ್ತಿದೆ.ಹಾಗೆಂದು ತಿಳಿದ ಶ್ರದ್ಧಾವಂತರಾದ ಭಕ್ತರು ನನ್ನನ್ನೇ ಸ್ಮರಿಸುತ್ತಾರೆ ಮತ್ತು ತಮ್ಮ ಚಿತ್ತಗಳನ್ನು,ತಮ್ಮ ಪ್ರಾಣಗಳನ್ನು ನನಗೇ ಅರ್ಪಿಸಿ,ಅನವರತವೂ ಪರಸ್ಪರ ನನ್ನ ಕಥೆಗಳನ್ನೇ ಹೇಳಿಕೊಳ್ಳತ್ತಾ ಹಾಡುತ್ತಿರುತ್ತಾರೆ”
ವಿಷ್ಣು ಪುರಾಣದಲ್ಲಿ : “ಕೃತಯುಗದಲ್ಲಿ ವಿಷ್ಣುವನ್ನು ಧ್ಯಾನಿಸುತ್ತಲೂ, ತ್ರೇತಾಯುಗದಲ್ಲಿ ಯಜ್ಞಗಳಿಂದ ಆರಾಧಿಸುತ್ತಲೂ, ದ್ವಾಪರಯುಗದಲ್ಲಿ ಅರ್ಚಿಸಿ ಪೂಜಿಸುತ್ತಲೂ, ಒಬ್ಬನು ಯಾವ ಫಲವನ್ನು ಮೋಕ್ಷಪರ್ಯಂತ ಹೊಂದಬಹುದೋ, ಹೊಂದುವನೋ ಅದೆಲ್ಲವನ್ನು ಕಲಿಯುಗದಲ್ಲಿ ಕೇಶವನನ್ನು ಸಂಕೀರ್ತನೆ ಮಾಡಿದ ಮಾತ್ರದಿಂದಲೇ ಹೊಂದುವನು”. - ”ಹರಿನಾಮ ಸಂಕೀರ್ತನೆಯೇ ಸಾಕು ಎಲ್ಲರ ಪಾಪಸಂಚಯವನ್ನು ಉಪಶಮನಗೊಳಿಸಲು,ಈ ಕಲಿಯುಗದಲಿ ಇದು ಬಿಟ್ಟರೆ ಬೇರೆ ಗತಿಯೇ ಇಲ್ಲ”
ಆನಂದ ರಾಮಾಯಣದಲ್ಲಿ: ಶ್ರೀರಾಮ ಭಜನೆಯನ್ನು ಒಂದು ಅಕ್ಷರದಿಂದ ಮೂವತ್ತಾರು ಅಕ್ಷರಗಳವರೆಗೂ ಬೀಜಾಕ್ಷರದಿಂದ ಕೂಡಿದ ಮಂತ್ರದಿಂದ ಉದ್ಧಾರಮಾಡಿ ನಾಲ್ಕು ವರ್ಣದವರೂ ಶೃತಿ, ತಾಳ,ಲಯ ಬದ್ಧವಾಗಿ ಭಜನೆಯ ರೂಪದಲ್ಲಿ ಭಗವಂತನನ್ನು ಸೇವಿಸಬಹುದು ಹಾಗೂ ಆರಾಧಿಸಬಹುದು.”
ಶ್ರೀ ರಾಮಕೃಷ್ಣಪರಮಹಂಸರು ; “ಪ್ರಾಪಂಚಕರಿಗೆ ಸಾಯುವ ಸಮಯದಲ್ಲಿ ಸಂಸಾರದ ಯೋಚನೆಯೇ ಬರುತ್ತದೆ.ಭಗವದ್ಭಾವನೆ ಮನಸ್ಸಿನಲ್ಲಿ ಏಳದು.ಇದಕ್ಕೆ ಸುಲಭಮಾರ್ಗ ಬದುಕಿರುವಾಗ ನಾಮ ಸಂಕೀರ್ತನೆಯ ಅಭ್ಯಾಸವನ್ನು ಇಟ್ಟುಕೊಂಡಿರುವುದು.ಇದರಿಂದ ಸಾಯುವ ಸಮಯದಲ್ಲಿ ಅಭ್ಯಾಸಬಲದಿಂದ ಭಗವನ್ನಾಮ ಬಾಯಿಂದ ಹೊರಡುತ್ತದೆ.ಭಗವಂತನ ಪಾದಪದ್ಮಗಳಲ್ಲಿ ಭಕ್ತಿಯೇ ಸಾರವಾದದ್ದು.ಭಗವನ್ನಾಮೋಚ್ಚಾರಣೆ ಮಾಡಿದರೆ ಎಲ್ಲರೂ ಶುದ್ಧರಾಗಿಬಿಡುತ್ತಾರೆ.
ಕಲಿಯುಗದಲ್ಲಿ ನಾಮ ಮಹಾತ್ಮ್ಯ ಇರುವುದರಿಂದ ಭಗವಂತನ ನಾಮಸ್ಮರಣೆ, ನಾಮೋಚ್ಛಾರಣೆ ಸರ್ವದಾ ಮಾಡುತ್ತಿರಬೇಕು. ಆತನ ನಾಮೋಚ್ಛಾರಣೆ ಮಾಡುತ್ತಾ ಕೈತಾಳ ಹಾಕಿದರೆ ಪಾಪವೆಂಬ ಹಕ್ಕಿ ಹಾರಿಹೋಗಿಬಿಡುತ್ತದೆ.
ಸತತವಾಗಿ ಭಗವಂತನ ನಾಮಗುಣಕೀರ್ತನೆ ಮತ್ತು ಪ್ರಾರ್ಥನೆ ಮಾಡುತ್ತಿರಬೇಕು.ಹಳೇ ಚೊಂಬನ್ನು ಎಲ್ಲೋ ಒಂದು ದಿನ ಬೆಳಗಿ ಬಿಟ್ಟರೆ ಏನಾದಹಾಗಾಯಿತು? ದಿನವೂ ಬೆಳಗುತ್ತಿರಬೇಕು.ವಿವೇಕ ವೈರಾಗ್ಯಗಳು ಒದಗೂಡಿರಬೇಕು.ಈ ಸಂಸಾರ ಅನಿತ್ಯ ಎಂಬ ಜ್ಞಾನವನ್ನು ಮನಸ್ಸಿಗೆ ಒತ್ತಬಲ್ಲ ಶಕ್ತಿ ಭಗವನ್ನಾಮ ಸಂಕೀರ್ತನೆಯಲ್ಲಿ ಇದೆ ಎಂಬ ಶ್ರದ್ಧೆ,ನಂಬಿಕೆ ಬರಬೇಕು”
ಕಡೆಯದಾಗಿ ನಾವೆಲ್ಲರೂ ಅರಿತುಕೊಳ್ಳಬೇಕಾದ್ದು ಏನೆಂದರೆ:
- ಕಲಿಯುಗದಲ್ಲಿ ಮುಕ್ಕಾಲುಪಾಲು ಗಾಳಿ,ನೀರು,ನೈಸರ್ಗಿಕ ಫಲ,ಪುಷ್ಪಗಳು, ಮಲಿನವಾಗಿದೆ, ಕಲಬೆರಕೆ ಹಾಗೂ ವಿಷಪೂರಿತ.
- ಇದರಿಂದ ಮಾನವನ ಆರೋಗ್ಯ ದುರ್ಬಲವಾಗಿ,ಅಸಂಖ್ಯಾತ ರೋಗಗಳಿಂದ ,ಚಂಚಲವಾದ ಮನಸ್ಸಿನಿಂದ ಬಳಳುತ್ತಿದ್ದಾನೆ.
- ಅವನು ಯಶಸ್ವಿಯಾಗಿ ಧ್ಯಾನ,ಯೋಗ,ತಪಸ್ಸು,ಯಜ್ಞ ಮಾಡಲಾರ.ವೈಧಿಕ ವಿಧಿಗಳನ್ನು ಬಲ್ಲ ಸೃಜನಶೀಲ ವ್ಯಕ್ತಿಗಳ ಅಭಾವದಿಂದ ಸರಿಯಾದ ಯಜ್ಞವನ್ನು ಮಾಡಲು ಅಸಾಧ್ಯ.
- ಕಲಿಯುಗದಲ್ಲಿ ಮಾನವನು ವಿಷಯಾಸಕ್ತದಿಂದ ಚಿತ್ತೈಕಾಗ್ರತೆ ಇಲ್ಲದೆ ಮನಸ್ಸು ಕೆಟ್ಟು ಅರ್ಚನೆಯನ್ನೂ ಸಹ ಮಾಡಲಾರ.
- ಅವನಿಗಿರುವ ಏಕೈಕ ಸುಲಭಮಾರ್ಗ ಭಗವನ್ನಾಮ ಸ್ಮರಿಸುವುದು.
- ದೇವರ್ಷಿಗಳಾದ ನಾರದರು ಹೇಳುತ್ತಾರೆ “ಭಗವನ್ನಾಮವು ಒಂದೇ ನನ್ನ ಪ್ರಾಣ ಆಧ್ಯಾತ್ಮಿಕ ಅಂಧಕಾರದ ಕಲಿಯುಗದಲ್ಲಿ ಭಗವನ್ನಾಮಹೊರತು ಬೇರೆಯಾವುದೇ ಆಶ್ರಯವಿಲ್ಲ”
“ಹರಿಃ ಓಂ ತತ್ಸತ್ ಶ್ರೀರಾಮಕೃಷ್ಣಾರ್ಪಣಮಸ್ತು”