ಕೆಸರಿನ ಕಮಲಗಳು
ಹೀಗೊಂದು ಕಥೆ..... ಒಂದು ದೊಡ್ಡ ಪರ್ವತದ ತಪ್ಪಲಿನ ಸುತ್ತಲೂ ಅನೇಕ ಹಳ್ಳಿಗಳು, ಊರುಗಳು, ಹಾಗೂ ಪಟ್ಟಣಗಳು ಇದ್ದವು. ಜೌಗು ಪ್ರದೇಶಗಳಾದ್ದರಿಂದ ಎಲ್ಲೆಲ್ಲೂ ಗಲೀಜು, ಕೊಚ್ಚೆ ಇದ್ದಿತು. ಅಲ್ಲಿ ಅದೇ ಬದುಕು ಎಂದುಕೊಳ್ಳುತ್ತಾ ಜೀವನ ನಡೆಸುತ್ತಿರುವ ಅನೇಕಾನೇಕ ಕ್ರಿಮಿಕೀಟಗಳು, ಪ್ರಾಣಿಪಕ್ಷಿಗಳ ಜೊತೆ ಮನುಷ್ಯರೂ ವಾಸವಾಗಿದ್ದರು. ದುಸ್ತರವಾದ ಬದುಕನ್ನು ಸಹಿಸಲಾಗದ ಅನೇಕರಿಗೆ, ಕೆಲ ಬುದ್ಧಿವಂತರು ಮಾರ್ಗದರ್ಶನ ನೀಡುತ್ತಾ ದೂರದಲ್ಲಿ ಕಾಣುವ ಪರ್ವತದ ಶಿಖರದಲ್ಲಿರುವ ಒಬ್ಬನು ನಮ್ಮನ್ನೆಲ್ಲಾ ನಿಯಂತ್ರಿಸುತ್ತಿದ್ದಾನೆ, ಅವನ ಬಳಿ ಹೋದರೆ ನಮ್ಮ ಕಷ್ಟಗಳೆಲ್ಲಾ ಪರಿಹಾರವಾಗಿ ಕೊನೆಯಿಲ್ಲದ ಆನಂದವು ನಮ್ಮದಾಗುವುದು ಎನ್ನುತ್ತಾರೆ.
ಎಲ್ಲರೂ ಪರ್ವತದ ಶಿಖರವನ್ನು ನೋಡಲಾರಂಭಿಸುತ್ತಾರೆ. ಆ ದಿಕ್ಕಿನಲ್ಲಿ ಹೋಗೋಣವೆಂದರೆ ಕಾಲುಗಳನ್ನು ಕೀಳಲಾಗದ ಕೊಚ್ಚೆ, ಜೊತೆಗೆ ಕಾಲುಗಳಿಗೆ ಸಿಕ್ಕಿಕೊಳ್ಳುವ ಜೊಂಡು, ಬಳ್ಳಿಗಳು. ಆ ಕಷ್ಟದಲ್ಲಿಯೂ ಹೇಗೋ ಸಾಗಿ ಬೆಟ್ಟದ ಹತ್ತಿರ ಹೋದ ಕೆಲವರು, ಹೇಗಿರಬಹುದು ಆ ಶಿಖರದಲ್ಲಿರುವವನು ಎಂದು ಹತ್ತಿರದಿಂದ ನೋಡುವ ಪ್ರಯತ್ನ ಮಾಡುತ್ತಾರೆ. ಎತ್ತರದ ಶಿಖರದಲ್ಲಿ ಏನೋ ಒಂದು ನೆರಳು ಬೆಳಕಿನಾಟದಂತೆ, ಯಾವುದೂ ಸ್ಪಷ್ಟವಾಗಿ ತಿಳಿಯುತ್ತಿರಲಿಲ್ಲ. ಯಾರೋ ಇದ್ದ ಹಾಗೆ ಅನ್ನಿಸುತ್ತಿತ್ತು. ಒಂದು ದಿಕ್ಕಿನಿಂದ ನೋಡಿದ ಯಾರೋ ಒಬ್ಬ ಹೇಳುತ್ತಾನೆ, "ನನಗೆ ಕಾಣಿಸುತ್ತಿದೆ, ಅಲ್ಲಿರುವವನು ರಾಜನಂತೆ ಕಂಗೊಳಿಸುತ್ತಿದ್ದಾನೆ, ಚಿನ್ನಾಭರಣಗಳು, ವಜ್ರ ವೈಢೂರ್ಯಗಳನ್ನೆಲ್ಲಾ ತೊಟ್ಟಿದ್ದಾನೆ" ಎಂದು. ಹೌದು ಹೌದು ಅದೇ ರೀತಿ ಅವನಿರುವುದು ಎಂದು ಅವನನ್ನು ಅನುಮೋದಿಸಿ ಹಿಂಬಾಲಕರಾದವರು ಕೆಲವರು. ಅದೇ ರೀತಿ ಇನ್ನೊಂದು ದಿಕ್ಕಿನಿಂದ ನೋಡಿದ ಇನ್ನೊಬ್ಬನು ಹೇಳುತ್ತಾನೆ, "ನನಗೆ ಸ್ಪಷ್ಟವಾಗಿ ಕಾಣಿಸುತ್ತಿದೆ ಅವನೊಬ್ಬ ಯೋಗಿಯಂತಿದ್ದಾನೆ, ನಿರಾಭರಣನಾಗಿದ್ದಾನೆ ಮತ್ತು ಧ್ಯಾನ ಮುದ್ರೆಯಲ್ಲಿದ್ದಾನೆ" ಎಂದು. ಮತ್ತೊಬ್ಬನಿಗೆ ಅಲ್ಲಿರುವುದು ದೇವಿಯಂತೆ ತೋರುತ್ತದೆ, ಮಗದೊಬ್ಬನಿಗೆ ಸಿಂಹದ ತಲೆಯ ಮನುಷ್ಯನಂತೆ, ಇನ್ನೊಬ್ಬನಿಗೆ ಆನೆಯ ತಲೆಯವನಂತೆ, ಕೋತಿಯ ತಲೆಯವನಂತೆ.... ಹೀಗೆ ಅನೇಕಾನೇಕ ರೀತಿಗಳಲ್ಲಿ ಕಾಣಿಸುತ್ತದೆ ಹಾಗೂ ಎಲ್ಲರಿಗೂ ಅವರ ಅನುಮೋದಕರು, ಹಿಂಬಾಲಕರು ಜೊತೆಗೂಡುತ್ತಾರೆ.
ಬೆಟ್ಟವನ್ನೇರಿ ತಾವೇ ನೋಡೋಣವೆಂದರೆ, ಸಾಗಿ ಹೋಗಲು ಜಾರುವ ಕಷ್ಟ ಸಾಧ್ಯವಾದ ದಾರಿ. ಯಾವ ಕಡೆಯಿಂದ ಹೊರಡುವುದು ಎಂದುಕೊಂಡಾಗ ತಮ್ಮ ದಾರಿಯೇ ಸರಿಯೆಂದು ಬೇರೆ ಬೇರೆ ದಿಕ್ಕುಗಳಿಂದ ನೋಡಿದವರು ಅವರವರ ದಿಕ್ಕುಗಳನ್ನು ತೋರುತ್ತಾರೆ. ಮತ್ತು ಅಲ್ಲಿಗೆ ತಲುಪಲು ಬೇಕಾದ ತಯಾರಿಯನ್ನು ಮಾಡಿಕೊಳ್ಳುವ ವಿಧಿ ವಿಧಾನಗಳನ್ನು ರೂಪಿಸುತ್ತಾರೆ. ಇದನ್ನೆಲ್ಲಾ ಒಪ್ಪುವ ಅವರ ಹಿಂಬಾಲಕರು, ತಮ್ಮ ನಾಯಕರು ಮತ್ತವರು ರೂಪಿಸಿದ ವಿಧಾನಗಳೇ ಸರಿಯೆಂದೂ ಉಳಿದವರದು ತಪ್ಪೆಂದೂ, ಅವರೆಲ್ಲ ನರಕದ ಹಾದಿಯಲ್ಲಿ ಕೊನೆಗೊಳ್ಳುತ್ತಾರೆಂದೂ ಆರೋಪ, ಪ್ರತ್ಯಾರೋಪ ಮಾಡುತ್ತಾ ಜಗಳ ಕಾಯುತ್ತಿರುತ್ತಾರೆ. ಎಲ್ಲೋ ಒಬ್ಬೊಬ್ಬರು ವಿಧಿ, ವಿಧಾನಗಳನ್ನು ಪಾಲಿಸುತ್ತಾ ಹತ್ತಿ ನೋಡಿಯೇ ಬಿಡೋಣವೆಂದು ಹೋದವರು ತಮ್ಮ ಅನುಭವಗಳನ್ನು ತಿಳಿಸಿ ಹೇಳಲಾಗಲಿಲ್ಲ.
ಹೀಗೆಯೇ ಕಳೆಯುತ್ತಾ ಶತಮಾನಗಳೇ ಉರುಳಿವೆ. ಇಂದಿಗೂ ತಲೆಮಾರುಗಳು ಕಳೆದ ಮೇಲೂ ಜಗಳ, ಆರೋಪ, ಪ್ರತ್ಯಾರೋಪಗಳು, ತಮ್ಮ ಹಾದಿಯೇ ಸರಿಯೆಂಬ ಸಾಧನೆ, ತಮ್ಮ ನಂಬಿಕೆಗಳೆಡೆಗೆ ಬೇರೆಯವರನ್ನು ಸೆಳೆಯುವ ತಂತ್ರ, ಕುತಂತ್ರಗಳೆಲ್ಲಾ ಹಾಗೆಯೇ ಮುಂದುವರೆದಿವೆ. ಹೊರಗಿನ ರಾಡಿ, ಕೊಚ್ಚೆಗಳೆಲ್ಲವನ್ನೂ ಒಳಗೂ ಸೇರಿಸಿಕೊಂಡು ಆರೋಗ್ಯ ಹೀನರಾಗಿ ಬವಣೆಯಿಂದಲೇ ಬದುಕುತ್ತಿದ್ದಾರೆ. ತಮ್ಮದೆಂದೂ, ಸರಿಯೆಂದೂ ಪ್ರತಿಪಾದಿಸುತ್ತಿರುವ ಹಾದಿ ಮತ್ತು ಗುರಿಯನ್ನು ತಾವು ಕಾಣುವುದಿರಲಿ ಅವರ ವಂಶಜರಾರೂ ಕಂಡೇ ಇಲ್ಲ.
ಇದೆಲ್ಲ ನಮ್ಮ ಕಥೆಯೇ ಎಂದುಕೊಂಡಾಗ, ಗುರಿ ಎಂದರೆ ನಂಬಿಕೊಂಡ ದೇವರ ನಾಮ ಮತ್ತು ರೂಪ, ಅದನ್ನು ತಲುಪುವ ಹಾದಿ ಎಂದರೆ ಅದಕ್ಕೆ ಸಂಬಂಧ ಪಟ್ಟ ಮಂತ್ರ, ಸ್ತೋತ್ರಗಳು, ಪೂಜಾ ವಿಧಾನಗಳು, ಯಜ್ಞ ಯಾಗಾದಿಗಳು, ದೇವಾಲಯಗಳು ಇತ್ಯಾದಿ. ಕೊಚ್ಚೆ, ಗಲೀಜುಗಳು ಅಂದರೆ ಇಚ್ಛಾ ದ್ವೇಷಗಳು, ಅರಿ ಷಡ್ವರ್ಗಗಳು, ಇಂದ್ರಿಯಾದಿ ವಿಷಯಗಳು ಇತ್ಯಾದಿ. ಕಾಲುಗಳಿಗೆ ಸಿಕ್ಕಿಕೊಳ್ಳುವ ಜೊಂಡು ಬಳ್ಳಿಗಳೇ ಸಾಂಸಾರಿಕ ಹಾಗೂ ಸಾಮಾಜಿಕ ಕಟ್ಟುಪಾಡುಗಳು, ಮೋಹ ಮಮತೆಗಳು ಇತ್ಯಾದಿ.
ಇಷ್ಟು ಜನಗಳ ಮಧ್ಯೆ ಎಲ್ಲೋ ಕೆಲವರು ಮಾತ್ರ ಅದೇ ಕೊಚ್ಚೆ, ಗಲೀಜಿನಲ್ಲಿ ಹುಟ್ಟಿ ಬೆಳೆದರೂ ಅದನ್ನು ಸ್ವಲ್ಪವೂ ಲೇಪಿಸಿಕೊಳ್ಳದೇ ಎಲ್ಲರಲ್ಲೂ ಸಮಭಾವವನ್ನು ತಾಳಿ ಪ್ರೀತಿಸುತ್ತಾ, ತಮಗಿಂತ ಹೆಚ್ಚಿನ ಬವಣೆ ಪಡುವವರಿಗೆ, ನಿರ್ಗತಿಕರಿಗೆ, ಕಿರಿಯರಿಗೆ ಆಸರೆಯಾಗತ್ತಾ, ಪರ್ವತದ ಮೇಲಿರುವವನನ್ನು ಹೃದಯದಲ್ಲಿ ಸ್ಥಾಪಿಸಿಕೊಂಡು ಧ್ಯಾನಿಸುತ್ತಾ, ಹಾದಿ ಗುರಿಗಳ ಬಗೆಗೆ ತಲೆ ಕೆಡಿಸಿಕೊಳ್ಳದೇ ನಿರ್ಮಲವಾಗಿ ನಗುತ್ತಿರುವವರನ್ನೇ ಪದ್ಮ ಪುಷ್ಪಗಳು ಅಥವಾ ಕೆಸರಿನ ಕಮಲಗಳು ಅನ್ನುತ್ತಾರೇನೋ. ಈ ಕಮಲಗಳು ಅರಳಿ ನಗುವಾಗ ಅವರ ಮೇಲಿನ ಪ್ರೀತಿಯಿಂದ ದೇವರೇ ಇವರ ಬಳಿ ಬಂದು ಈ ಕಮಲಗಳಿಂದಲೇ ತನ್ನನ್ನು ಅಲಂಕರಿಸಿಕೊಳ್ಳುವುದು ಮಾತ್ರವಲ್ಲದೇ, ತನ್ನಲ್ಲಿಯೇ ಸೇರಿಸಿಕೊಳ್ಳುವುದರಿಂದಲೇ .....
ಕಮಲಾಸ ಶ್ರೀ ಮುಖ ಕಮಲ ಕಮಲ ಹಿತ|
ಕಮಲಪ್ರಿಯಾ ಕಮಲೇಕ್ಷಣಾ||
ಕಮಲಾಸನ ಹಿತ ಗರುಡಗಮನ ಶ್ರೀ| ಕಮಲನಾಭ ನೀ
ಪದಕಮಲಮೇ ಶರಣಂ||(ಶ್ರೀಮನ್)"
ಎಂದು ಹಾಡುತ್ತಾ ಶರಣಾಗುತ್ತಾರೇನೊ ಅಲ್ಲವೇ?