ಜೀವನ-ಧ್ಯೇಯ
"ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಲಿ ಬೇಡಿ, ಹುಚ್ಚಪ್ಪಗಳಿರಾ" ಎಂದು ದಾಸಶ್ರೇಷ್ಠರಾದ ಪುರಂದರದಾಸರು ಮನುಷ್ಯಜನ್ಮದ ಶ್ರೇಷ್ಠತೆಯನ್ನು ಎತ್ತಿಹಿಡಿದಿದ್ದಾರೆ. ಬದುಕಿನ ಬಗೆಗಿರುವ ಮಾನವತೆಯನ್ನೂ, ವ್ಯಕ್ತಿಜೀವನದಲ್ಲಿ ಅಡಗಿರುವ ಜೀವಶಕ್ತಿಗಿರುವ ಅನಂತ ಸಾಧ್ಯತೆಗಳನ್ನೂ ಸೂಚಿಸಿದ್ದಾರೆ. ಅಂಥ ಜೀವನವನ್ನು ನಡೆಸಲು ಬೇಕಾದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ನಡೆನುಡಿಗಳನ್ನು ಮಾನವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು; ಬದುಕಿನ ತೋರಿಕೆಯ ಕ್ಷಣಿಕ ಭೋಗವೈಭವಗಳಿಗೆ ಮರುಳಾಗಿ, ಗುಣಹೀನರಾಗಿ, ವ್ಯರ್ಥಜೀವನ ನಡೆಸಿ ಬದುಕನ್ನು ಹಾಳುಮಾಡಬೇಡಿ ಎಂದು ಸಂತ ಪುರಂದರ ದಾಸರು ಕಳಕಳಿಯಿಂದ ಹೇಳಿದ್ದಾರೆ. ಬದುಕಿನಲ್ಲಿ ಉತ್ತಮ ಮೌಲ್ಯಗಳನ್ನು ಮತ್ತು ಆಧ್ಯಾತ್ಮಿಕತೆಯನ್ನು ರೂಢಿಸಿಕೊಂಡು ಭಗವಂತನ ಕೃಪೆಗೆ ಪಾತ್ರರಾಗಿ, ಮುಕ್ತಿಯನ್ನು ಪಡೆಯುವುದೇ ಬದುಕಿನ ಮೂಲ ಧ್ಯೇಯ.
ಆಚಾರ್ಯ ಶಂಕರಾಚಾರ್ಯರು ವಿವೇಕ ಚೂಡಾಮಣಿಯಲ್ಲಿ ಹೇಳಿರುವಂತೆ ಮನುಷ್ಯ ಜನ್ಮ ಹೊಂದುವುದು ದುರ್ಲಭ. ಅನೇಕ ಸಂತರೂ, ಯೋಗಿಗಳೂ, ಜ್ಞಾನಿಗಳೂ ಇದನ್ನೇ ಸ್ಪಷ್ಟ ಪಡಿಸಿದ್ದಾರೆ. ಈ ಉತ್ತಮ ಮನುಷ್ಯ ಜೀವನದ ಮೌಲ್ಯವನ್ನರಿಯದ ಅಜ್ಞಾನಿಗಳು ಧರ್ಮಕ್ಕೂ, ದೈವಕ್ಕೂ ವಿರೋಧವಾಗಿ ಪ್ರಾಪಂಚಿಕ ವಿಷಯಾನುಭವಗಳಿಗೆ ದಾಸರಾಗಿ, ಸದಾ ಭೋಗಲಾಲಸೆಗಳಲ್ಲಿ ಮತ್ತರಾಗಿ ಜೀವನದ ಮುಖ್ಯಗುರಿಯನ್ನೇ ಮರೆಯುತ್ತಾರೆ. ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಇಂತಹ ಪ್ರಾಪಂಚಿಕ ಮನಸ್ಸು ಹೇಗಿರುತ್ತದೆ ಎಂಬುದನ್ನು ಒಂದು ದೃಷ್ಟಾಂತದ ಮೂಲಕ ಹೇಳಿದ್ದಾರೆ. ರಣಹದ್ದು ಆಕಾಶದಲ್ಲಿ ಬಹಳ ಎತ್ತರದಲ್ಲಿ ಹಾರಾಡುತ್ತಿದ್ದರೂ, ಅದರ ಇಡೀ ದೃಷ್ಟಿ ಭೂಮಿಯಮೇಲೆ ಸತ್ತುಬಿದ್ದಿರುವ ಪ್ರಾಣಿಯ ಮೇಲೆ ಇರುತ್ತದೆ.
ಹಿಂದೂ ಧರ್ಮದಲ್ಲಿ ನಾಲ್ಕು ಪುರುಷಾರ್ಥಗಳಿವೆ - ಧರ್ಮ, ಅರ್ಥ, ಕಾಮ, ಮೋಕ್ಷ. ಇವುಗಳಲ್ಲಿ ಅರ್ಥ ಮತ್ತು ಕಾಮ ಇವು ನಿತ್ಯ ಬದುಕಿಗೆ ಸಂಬಂಧಿಸಿವೆ. ಎಲ್ಲರಿಗೂ ಅವಶ್ಯವಾಗಿರುವುದರಿಂದ ಯಾರೂ ಇವೆರಡನ್ನು ಕೈಬಿಡಲಾಗುವುದಿಲ್ಲ. ಆದರೆ ಇವನ್ನು ಸಾಧನವಾಗಿರಿಸಿಕೊಂಡು, ಮೋಕ್ಷವನ್ನೇ ಗುರಿಯಾಗಿರಿಸಿ ಧರ್ಮ ಮಾರ್ಗವನ್ನನುಸರಿಸಿ, ದಿನನಿತ್ಯದ ಪ್ರಾಪಂಚಿಕ ಕರ್ಮದಲ್ಲಿ ತೊಡಗಿದರೆ ಮನುಷ್ಯ ಜನ್ಮ ಸಫಲತೆಯನ್ನು ಪಡೆಯಬಹುದು.
ಗಹನವಾದ ವೇದಾಂತ ತತ್ವಗಳನ್ನು ಸರಳವಾಗಿ ದೈನಂದಿನ ಜೀವನದಲ್ಲೂ ಜರಗುವ ಘಟನೆಗಳ ಮೂಲಕ ಉದಾಹರಿಸಿ ವಿವರಿಸುವುದರಲ್ಲಿ ಭಗವಾನ್ ಶ್ರೀ ರಾಮಕೃಷ್ಣರು ಅತ್ಯಂತ ಕುಶಲರು. ಪಾಂಡಿತ್ಯದಲ್ಲಿ ವಿದ್ವತ್ತಿದ್ದು, ದೈನಂದಿನ ವ್ಯವಹಾರ ಜ್ಞಾನ ಶೂನ್ಯರಾದ ವಿದ್ವಾಂಸರ ಡಂಭತನ ಹಾಗೂ ಅಜ್ಞಾನದ ಬಗ್ಗೆ ಅವರು ಸ್ವಾರಸ್ಯಕರವಾದ ಘಟನೆಯೊಂದನ್ನು ಹೇಳಿದ್ದಾರೆ. ಒಮ್ಮೆ ಸಕಲ ಶಾಸ್ತ್ರಗಳಲ್ಲಿ ನುರಿತ ಪಂಡಿತರೊಬ್ಬರು ನದಿ ದಾಟಿ ಪಕ್ಕದ ಊರಿಗೆ ಹೋಗಲು ದೋಣಿಯೊಂದರಲ್ಲಿ ಕುಳಿತರು. ಅದರಲ್ಲಿ ಅವರು ಮತ್ತು ಅಂಬಿಗ ಇಬ್ಬರೇ. ದೋಣಿ ಪ್ರಶಾಂತ ವಾತಾವರಣದಲ್ಲಿ ನಿಧಾನವಾಗಿ ಸಾಗುತ್ತಿತ್ತು. ಪಂಡಿತರಿಗೆ ತಮ್ಮ ಪಾಂಡಿತ್ಯವನ್ನು ಸ್ವಲ್ಪ ತೋರಿಸಿಕೊಳ್ಳುವ ಮನಸ್ಸಾಯಿತು. ಅವರು ಅಂಬಿಗನನ್ನು ಕೇಳಿದರು," ಅಯ್ಯಾ, ನಿನಗೆ ಕಾವ್ಯ, ನಾಟಕಗಳ ಪರಿಚಯ ಇದೆಯೇನು?" ಅಂಬಿಗ ಹೇಳಿದ, "ಇಲ್ಲಾ ಸ್ವಾಮಿ, ಅವುಗಳ ಹೆಸರೇ ತಿಳಿದಿಲ್ಲ." ಪಂಡಿತರು ಹೇಳಿದರು, "ಓಹೋ, ಅದು ಗೊತ್ತಿಲ್ಲವೆ? ಹಾಗಾದರೆ ನಿನ್ನ ಜೀವನದ ಕಾಲು ಭಾಗ ನಷ್ಟವಾಯಿತು. ಹೋಗಲಿ, ಜ್ಯೋತಿಷ್ಯ ಶಾಸ್ತ್ರ ಏನಾದರೂ ತಿಳಿದಿರುವೆಯಾ?" "ಸ್ವಲ್ಪವೂ ಇಲ್ಲ", ಅಂಬಿಗ ಹೇಳಿದ. "ಅಯ್ಯಾ, ನಿನ್ನ ಜೀವನದ ಅರ್ಧ ಭಾಗ ನಷ್ಟವಾಯಿತು. ಹೋಗಲಿ ತರ್ಕಶಾಸ್ತ್ರವನ್ನಾದರೂ ಸ್ವಲ್ಪ ಓದಿದ್ದೀಯಾ?" "ಸ್ವಾಮಿ ಇದಕ್ಕೆ ಏನು ಹೇಳಲಿ?", ಎಂದ ಅಂಬಿಗ. "ಹಾಗಾದರೆ ನಿನ್ನ ಜೀವನದ ಮುಕ್ಕಾಲು ಭಾಗ ನಷ್ಟವಾಯಿತು", ಎಂದರು ಪಂಡಿತರು. ಅಂಬಿಗ ಖಿನ್ನನಾಗಿ ಕುಳಿತ.
ಕೊಂಚ ಕಾಲದ ನಂತರ ನದಿಯಲ್ಲಿ ಪ್ರವಾಹ ಜೋರಾಗುತ್ತಾ ಬಂದು ದೋಣಿ ಮುಳುಗುವ ಹಾಗಾಯಿತು. ಅಂಬಿಗ ಕೇಳಿದ, "ಸ್ವಾಮೀ ದೋಣಿ ಮುಳುಗುವ ಹಾಗಿದೆ. ನನಗೇನೋ ಈಜು ಬರುತ್ತದೆ. ನಿಮಗೆ ಈಜಲು ಗೊತ್ತಿದೆಯೇ?". ಪಂಡಿತರು ಗಾಭರಿಯಿಂದ ಕಂಗಾಲಾಗಿ ಹೆಳಿದರು, "ಇಲ್ಲಪ್ಪಾ, ಈಜುವ ವಿದ್ಯೆ ತಿಳಿದಿಲ್ಲ. ಈಗೇನು ಮಾಡಲಿ?" ಅಂಬಿಗ ಹೇಳಿದ, "ಸ್ವಾಮಿ, ಹಾಗಾದರೆ ನಿಮ್ಮ ಇಡೀ ಜೀವನವೇ ಹಾಳಾಯ್ತು." ಜೀವನದಲ್ಲಿ ಐಹಿಕ ಮತ್ತು ಪಾರಮಾರ್ಥಿಕ ಜ್ಞಾನಗಳು ಸಾಮರಸ್ಯದಲ್ಲಿ ಮಿಳಿತವಾಗಿರಬೇಕು. ದಿನನಿತ್ಯ ಕರ್ಮಗಳಲ್ಲಿ ಎರಡನ್ನೂ ಹೊಂದಿಸಿ ನಡೆಯುವುದೇ ಬುದ್ಧಿವಂತರ ಲಕ್ಷಣ.
ಜೀವನದ ಮುಖ್ಯ ಉದ್ದೇಶವನ್ನು ಮರೆತು ಏಕಮುಖವಾಗಿ ಕೇವಲ ಪ್ರಾಪಂಚಿಕ ಭೋಗಗಳಲ್ಲೇ ತಲ್ಲೀನರಾಗಿ ಆತ್ಮೋನ್ನತಿಯ ಮಾರ್ಗವನ್ನು ಕಡೆಗಣಿಸಿದರೆ ನಿಜಕ್ಕೂ ಇಡೀ ಜೀವನವೇ ವ್ಯರ್ಥ. ಐಶ್ವರ್ಯ, ಅಧಿಕಾರ, ಕೀರ್ತಿ, ಗೌರವ, ಸುಖಭೋಗಗಳೇ ಸರ್ವಸ್ವವೆಂದು ಸುಖಿಸುತ್ತಾ, ಸಂತೋಷದ ಪರಮಾವಧಿಯಲ್ಲಿದ್ದಾಗ ಹಠಾತ್ತನೆ ಸಾವು ನೋವುಗಳ ಪೆಟ್ಟು ಬಿದ್ದಾಗ, ದುಃಖ ನಿರಾಶೆಗಳು ಬಂದು ಅಪ್ಪಳಿಸಿದಾಗ, ಅವುಗಳನ್ನು ಎದುರಿಸುವ ಮಾನಸಿಕ ಶಕ್ತಿಯೇ ಇಲ್ಲದೆ, ಬೇರೆ ದಾರಿ ಕಾಣದೆ ಮನುಷ್ಯರು ಕಂಗಾಲಾಗಿ ಕುಸಿಯುತ್ತಾರೆ. ಜೀವನದ ಏರು ಪೇರುಗಳನ್ನು ಎದುರಿಸಲು ಲೌಕಿಕ ಬುದ್ಧಿಶಕ್ತಿಯ ಜೊತೆಗೆ ಆದ್ಯಾತ್ಮಿಕ ಜ್ಞಾನ ಶಕ್ತಿಯೂ ಅವಶ್ಯಕ. ಇದಕ್ಕಿರುವ ಒಂದೇ ಮಾರ್ಗ- ಭಕ್ತಿ, ಧ್ಯಾನ ಮತ್ತು ಜ್ಞಾನ ಮಾರ್ಗಗಳು. ಇವುಗಳ ಮೂಲಕ ಭಗವಂತನಲ್ಲಿ ಶ್ರದ್ಧೆ ಇಟ್ಟು, ಪಾರಮಾರ್ಥಿಕ ಹಾದಿಯಲ್ಲಿ ನಡೆಯುತ್ತಾ, ನಿತ್ಯಜೀವನದಲ್ಲಿ ಸಾಗಿದರೆ ಎಂತಹ ಪ್ರತಿಕೂಲ ಪರಿಸ್ಥಿತಿಯನ್ನೂ ಎದುರಿಸುವ ಶಕ್ತಿ ಲಭಿಸುತ್ತದೆ. ಈ ಆಂತರಿಕ ಜ್ಞಾನ ಇಹದಲ್ಲೂ ಪರದಲ್ಲೂ ಫಲದಾಯಕವಾಗಿರುತ್ತದೆ.
ಮನುಷ್ಯ ಜೀವನ ಈ ಐಹಿಕ ಪ್ರಪಂಚದಲ್ಲಿಯೇ ಸಾಗಬೇಕು. ಈ ಪ್ರಪಂಚದಲ್ಲಿರುವ ಮುಳ್ಳನ್ನೆಲ್ಲಾ ತೆಗೆಯಲು ಸಾಧ್ಯವಿಲ್ಲ. ಆದರೆ ನಡೆಯುವಾಗ ಕಾಲಿಗೆ ಪಾದರಕ್ಷೆಯನ್ನು ಹಾಕಿಕೊಂಡು ನಡೆದರೆ, ಮುಳ್ಳಿನ ಮೇಲೆ ನಡೆದರೂ ಮುಳ್ಳು ಚುಚ್ಚುವುದಿಲ್ಲ. ಅಂತೆಯೇ ಪ್ರಪಂಚದಲ್ಲಿದ್ದೂ ಪ್ರಾಪಂಚಿಕತೆಯಿಂದ ದೂರವಾಗಬೇಕಾದರೆ ಮನಸ್ಸನ್ನು ಸ್ಥಿರವಾಗಿ ಭಗವಂತನಲ್ಲಿರಿಸಿ ನಿತ್ಯ ವ್ಯವಹಾರಗಳಲ್ಲಿ ತೊಡಗಿದರೆ, ಜೀವನದ ಏರುಪೇರುಗಳನ್ನು ಎದುರಿಸಲು ಸಾಧ್ಯ. ಶ್ರೀ ರಾಮಕೃಷ್ಣರು ಮತ್ತೊಂದು ಸುಂದರ ಉದಾಹರಣೆಯನ್ನು ಹೇಳಿದ್ದಾರೆ-- ಹಲಸಿನ ಹಣ್ಣನ್ನು ಬಿಡಿಸುವ ಮೊದಲು ಕೈಗೆ ಎಣ್ಣೆ ಸವರಿಕೊಂಡು ಬಿಡಿಸಿದರೆ ಹಾಲು ಅಂಟುವುದಿಲ್ಲ. ಅದರಂತೆಯೇ ಭಗವಂತನಲ್ಲಿ ಮೊದಲು ಶುದ್ಧ ಭಕ್ತಿ, ಪ್ರೀತಿಭಾವಗಳನ್ನು ಬೆಳೆಸಿಕೊಂಡು, ಪ್ರಪಂಚದ ವ್ಯವಹಾರಗಳಲ್ಲಿ ಎಷ್ಟೇ ತೊಡಗಿದರೂ ಪ್ರಾಪಂಚಿಕತೆ ಮನಸ್ಸಿಗೆ ಅಂಟುವುದಿಲ್ಲ.
ಶ್ರೀ ಕೃಷ್ಣ ಭಗವಾನರು ಭಗವದ್ಗೀತೆಯಲ್ಲಿ ಹೇಳಿರುವಂತೆ -
"ಅನನ್ಯಾಶ್ಚಿಂತಯಂತೋಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ ||"
"ವಿಧಿವಿರಾಮವಿಲ್ಲದೆ ಅನನ್ಯ ಚಿಂತೆಯಿಂದ ನನ್ನನ್ನು ಸೇವಿಸುವ ಜನರ ಯೋಗ ಕ್ಷೇಮವನ್ನು ನಾನೇ ನಿರ್ವಹಿಸುತ್ತೇನೆ." ಮಕ್ಕಳು ಕಂಬ ಸುತ್ತುವ ಆಟ ಆಡುವಾಗ ಕಂಬವನ್ನು ಭದ್ರವಾಗಿ ಒಂದು ಕೈಯಲ್ಲಿ ಹಿಡಿದುಕೊಂಡು ನಂತರ ಕಂಬದ ಸುತ್ತಲೂ ಜೋರಾಗಿ ತಿರುಗುತ್ತಾ ಆನಂದಿಸುತ್ತಾರೆ. ಆದರೆ ಕಂಬದ ಮೇಲಿನ ಕೈ ಮಾತ್ರ ಸ್ವಲ್ಪವೂ ಹಿಡಿತ ತಪ್ಪದಂತೆ ಮನಸ್ಸೆಲ್ಲಾ ಅದರ ಮೇಲೆಯೇ ಕೇಂದ್ರೀಕರಿಸಿರುತ್ತದೆ. ಅದರಂತೆಯೇ ಭಗವಂತನಲ್ಲಿ ಮನಸ್ಸನ್ನು ಕೇಂದ್ರೀಕರಿಸಿ ದಿನ ನಿತ್ಯದ ಜೀವನದಲ್ಲಿ ವ್ಯವಹರಿಸುತ್ತಿದ್ದರೂ, ಮನಸ್ಸು ಇಂದ್ರಿಯ ವಿಷಯಗಳಿಗೆ ಒಳಗಾಗದೆ, ಪ್ರಾಪಂಚಿಕತೆಯಿಂದ ದೂರವಾಗಿ ಭಗವಂತನ ಲೀಲಾಪ್ರಪಂಚದಲ್ಲಿ ನಡೆಯುತ್ತಾ ಜೀವನದ ಗುರಿಯನ್ನು ಸೇರಬಹುದು