ಚಿಂತೆ-ಚಿಂತನೆ
ಚಿಂತೆ ಮತ್ತು ಚಿಂತನೆಗಳ ನಡುವೆ ಸಾಕಷ್ಟು ಅಂತರಗಳಿವೆ. ಎರಡೂ ಸಹ ಯೋಚನೆಯ ಹಾದಿಯೇ ಆದರೂ ಅವೆರಡೂ ಮನಸ್ಸಿನ ಬೇರೆ ಬೇರೆ ಹಂತಗಳನ್ನವಲಂಬಿಸಿವೆ. ಈಗಿನ ಮಕ್ಕಳಿಗೆ ಸುಮಾರಾಗಿ ಚಿಂತನೆ ಎಂದರೇನು ಎಂಬುದಿರಲಿ ಆ ರೀತಿಯ ಒಂದು ಪದವಿದೆ ಅಂತಲೇ ತಿಳಿದಿಲ್ಲ.
ಚಿಂತೆಗಿಂತ ಚಿಂತನೆ ಗಂಭೀರವಾದದ್ದು. ಹಾಗಂತ ಚಿಂತೆ ಮಾಡುವುದು ತಪ್ಪೆಂದಾಗಲೀ ಪಾಪಕಾರ್ಯವೆಂದಾಗಲೀ ಅರ್ಥವಲ್ಲ. ಚಿಂತೆ ಕ್ಷಣಿಕವಾದದ್ದು ಹಾಗೂ ವ್ಯಕ್ತಿ, ವಸ್ತು ಅಥವಾ ವಿಷಯಗಳಿಗೆ ಸಂಬಂಧಪಟ್ಟಿದ್ದು. ಚಿಂತನೆ ಎಂಬುದು ಭವಿಷ್ಯಕ್ಕೆ ದಾರಿಮಾಡಿಕೊಡುವುದು. ಈ ಭವಿಷ್ಯ ಇಡೀ ಸಮುದಾಯಕ್ಕೆ ಅಥವಾ ಸಮಾಜಕ್ಕೆ ಸಂಬಂಧಪಟ್ಟಿದ್ದಾಗಿರುತ್ತದೆ. ಚಿಂತೆಯಿಲ್ಲದ ಮನುಷ್ಯನಿಲ್ಲ. ಆದರೆ ಚಿಂತೆಯೊಂದು ಕಳೆಯುತ್ತಿದ್ದಂತೆ ಮತ್ತೆ ಹಲವಾರು ಚಿಂತೆಗಳು ನಮ್ಮ ಮನವನ್ನಾವರಿಸಲು ಹಾತೊರೆಯುತ್ತಿರುತ್ತವೆ.
ಉದಾಹರಣೆಗೆ ಬೆಳೆದು ನಿಂತ ಒಬ್ಬ ವ್ಯಕ್ತಿಗೆ ಮದುವೆ ಆಗಲಿಲ್ಲವಲ್ಲ ಎಂಬ ಚಿಂತೆ. ಆದಮೇಲೆ ಮಕ್ಕಳಾಗಲಿಲ್ಲವಲ್ಲ ಎಂಬ ಚಿಂತೆ. ಮಕ್ಕಳಾದ ಮೇಲೆ ಅವುಗಳ ಆಟಪಾಠ, ಆರೋಗ್ಯ, ಸ್ನೇಹವರ್ಗದ ಚಿಂತೆ. ಒಂದೇ ಎರಡೇ? ಅದಕ್ಕೆ ಕೊನೆಯೇ ಇಲ್ಲ. ಆದರೆ ಇವೆಲ್ಲದರ ನಡುವೆ ಬರಬಹುದಾದ ಒಂದು ಯೋಚನೆ - ನಾನು ಇಲ್ಲಿಗೆ ಏಕೆ ಬಂದೆ? ಏನು ಮಾಡಬೇಕಿತ್ತು? ಏನು ಮಾಡಿದರೆ ಬೇರೆಯವರಿಗೆ ಒಳಿತಾಗುತ್ತದೆ ಇತ್ಯಾದಿ ಯೋಚನೆಗಳ ಸರಮಾಲೆ ಒಂದು ಬಗೆಯ ಚಿಂತನೆ. ಅದು ಚಿಂತೆಯಾಗುವುದಿಲ್ಲ. ಹಾಗೆ ನೋಡಿದರೆ ಪ್ರತಿಯೊಂದು ಜೀವಿಯೂ ಉಂಡು, ತಿರುಗಿ, ಮಲಗಿ, ಪ್ರೇಮಕಾಮಗಳಿಗೆ ಬಲಿಯಾಗುತ್ತದೆ. ಇದು ಸರ್ವೇ ಸಾಮಾನ್ಯ, ಸಾಧಾರಣ. ಅದನ್ನು ಮೀರಿ ಅಸಾಮಾನ್ಯ, ಅಸಾಧಾರಣ ಯೋಚನೆ ಮಾಡುವುದೇ ಚಿಂತನೆ. ಮೇಲಿನ ಪ್ರಶ್ನೆ ಒಂದು ಸಣ್ಣ ಉದಾಹರಣೆ ಅಷ್ಟೆ, ಪ್ರಶ್ನೆ ಅದೇ ಆಗಬೇಕಿಂದಿಲ್ಲ.
ಚಿಂತೆ ಮನುಷ್ಯನನ್ನು ಕ್ಷೀಣಗೊಳಿಸುತ್ತದೆ. ಆ ದೌರ್ಬಲ್ಯ ಅನೇಕ ಆರೊಗ್ಯಕ್ಕೆ ಸಂಬಂಧಪಟ್ಟಂತಹ ಖಾಯಿಲೆಗಳನ್ನು ತರಬಹುದು. ಇದಕ್ಕೆ ಹಿಂದಿನ ಹಿರಿಯರ ಪ್ರೌಢಬುದ್ಧಿ ಹಾಗೂ ಇಂದಿನ ವೈಜ್ನಾನಿಕ ಬುದ್ಧಿಯೇ ಸಾಕ್ಷಿ. ಇದರ ಜೊತೆಗೆ ಆ ವ್ಯಕ್ತಿಯ ಕೌಟುಂಬಿಕವರ್ಗದವರೂ ಆ ಚಿಂತೆಯ ಫಲವನ್ನನುಭವಿಸಬೇಕಾಗಬಹುದು. ಚಿಂತೆಯಲ್ಲಿರುವ ಬಿಂದು ತೆಗೆದರೆ ಚಿತೆಯಾಗುತ್ತದೆ. ಚಿತೆ ಸತ್ತ ಮನುಷ್ಯನನ್ನು ಸುಟ್ಟರೆ ಚಿಂತೆ ಜೀವಂತ ಮನುಷ್ಯನನ್ನು ಸುಡುತ್ತದೆ. ಚಿಂತನೆ ಮನುಷ್ಯನ ಉತ್ಸಾಹವನ್ನೂ ಆರೋಗ್ಯವನ್ನೂ ವರ್ಧಿಸುವುದು. ಚಿಂತನೆಯಿಂದ ವಿಚಾರವಿನಿಮಯಗಳಿಂದ ಹಲವಾರು ವ್ಯಕ್ತಿಗಳ ಬುದ್ಧಿ, ಮನಸ್ಸು ಒಟ್ಟಿಗೆ, ಏಕಕಾಲದಲ್ಲಿ ವಿಕಾಸವಾಗುವುದು ಮತ್ತು ಸಮಾಜದ ಹಾಗೂ ಮುಂದಿನ ಪೀಳಿಗೆಯ ಹಿತದೃಷ್ಟಿಗೆ ಪ್ರಚೋದಕವಾಗುವುದು. ಒಂದು ಸಮಾಜದ ಅಥವಾ ಸಮುದಾಯದ ಬಲ, ಉತ್ಸಾಹ, ಅರೋಗ್ಯಗಳು ಆ ಸಮಾಜದ ಅಥವಾ ಸಮುದಾಯದಲ್ಲಿರುವ ಹಿತಚಿಂತಕರ ಮನೋಬುದ್ಧಿಗಳನ್ನವಲಂಬಿಸಿರುತ್ತವೆ.
ಚಿಂತನೆ ಮಾಡುವುದು ಯಾವ ಒಬ್ಬ ವ್ಯಕ್ತಿಯ ಸ್ವತ್ತಲ್ಲ. ಚಿಂತನೆ ಮನುಷ್ಯನ ದೈಹಿಕ ವಯಸನ್ನೂ ಅವಲಂಬಿಸಿಲ್ಲ. ಅಷ್ಟೇ ಅಲ್ಲ, ಅದು ಲಿಂಗಾತೀತ, ವರ್ಣಾತೀತ ಮತ್ತು ಜಾತ್ಯಾತೀತ. ಅದು ಕೇವಲ ಬೌದ್ಧಿಕ ವಯಸ್ಸು ಮತ್ತು ಉತ್ತೇಜಕ ವಾತಾವರಣವನ್ನು ಮಾತ್ರ ಅವಲಂಬಿಸುರುತ್ತದೆ.
ಚಿಂತೆಯಲ್ಲಿ ಹೇಗೆ ಕ್ಷುಲ್ಲಕ ಮತ್ತು ಸಾಧಾರಣ ಎಂಬ ವಿಂಗಡನೆಯುಂಟೋ ಹಾಗೆಯೇ ಚಿಂತನೆಯಲ್ಲಿ ಲೌಕಿಕ ಮತ್ತು ಪಾರಮಾರ್ಥಿಕ ಎಂಬ ವಿಂಗಡನೆಯುಂಟು. ಚಿಂತೆ ಯಾವುದಾದರೂ ಅದು ಹಾನಿಕರ. ಆದರೆ ಚಿಂತನೆ ಹಾಗಲ್ಲ. ಲೌಕಿಕ ಚಿಂತನೆ ಒಂದು ರೀತಿಯ ತೃಪ್ತಿಯ ಭಾವನೆ ತರಿಸುವುದು ಹಗೂ ಒಂದಲ್ಲಾ ಒಂದು ದಿನ ಪಾರಮಾರ್ಥಿಕ ಚಿಂತನೆಯತ್ತ ಮನಸೆಳೆಸುವುದು. ಅದರಲ್ಲಿ ಸಂಶಯವಿಲ್ಲ.
ಚಿಂತೆ ಕ್ಷಣಮಾತ್ರಲ್ಲಿ ಹುಟ್ಟಿ ಸಣ್ಣ ವರ್ತುಲದಲ್ಲಿ ಸುತ್ತುತ್ತಿರುತ್ತದೆ. ಆದರೆ ಚಿಂತನೆ ಕ್ಷಣಮಾತ್ರದಲ್ಲಿ ಮೂಡುತ್ತದೆ ಅಷ್ಟೆ. ಅದರ ಬೆಳವಣಿಗೆಗೆ ಸಾಕಷ್ಟು ಸಮಯ ಬೇಕು. ಸತತವಾಗಿ ಆ ಯೋಚನೆಯ ಬಗ್ಗೆ ಮನಹರಿಯುವುದರಿಂದ ಅದು ಸಾಕಷ್ಟು ಬಲಯುತವಾಗಿ ವಿಕಾಸಗೊಳ್ಳುತ್ತಾ ಹೋಗುತ್ತದೆ. ಇಡೀ ಇತಿಹಾಸದಲ್ಲಿ ಚಿಂತೆಯಿಂದ ಉದ್ಢಾರವಾಗಿರುವವರು ಯಾರೂ ಕಂಡುಬರುವುದಿಲ್ಲ. ಆದರೆ ಚಿಂತನೆಯಿಂದ ಅನೇಕ ಸಾಧನೆಗಳಾಗಿರುವುದು ಅನೇಕ ಬಾರಿ ಕಂಡುಬರುತ್ತದೆ. ಚಿಂತೆ ಜೀವನದ ಜಂಜಾಟಕ್ಕೆ ಕಾರಣವಾದರೆ ಚಿಂತನೆ ಜೀವನದ ಸಾರ್ಥಕಕ್ಕೆ ಎಡೆಯಾಗುತ್ತದೆ. ಚಿಂತನಕಾರರು ದಾರ್ಶನಿಕರಾಗಿರುತ್ತಾರಾದ್ದರಿಂದ ಚಿಂತೆ ಮಾಡುವವರಿಗೆ ವಿಚಿತ್ರವಾಗಿ ಕಂಡುಬಂದರೆ ಆಶ್ಚರ್ಯವೇನಿಲ್ಲ. ಕೇವಲ ಚಿಂತೆ ಮಾಡುವವರಿಗೆ ವಸ್ತುವಿಷಯ ಇಂಥದ್ದೇ ಆಗಬೇಕೆಂಬುದಿಲ್ಲ ಅಥವಾ ಬೇಕೇಬೇಕು ಎಂಬುದೂ ಇಲ್ಲ. ಆದರೆ ಚಿಂತನಕಾರರಿಗೆ ಹಾಗಲ್ಲ. ಅವರು ತಮ್ಮ ವಿಶೇಷ ಮನೋದಾರ್ಢ್ಯಬಲದಿಂದ ಕೇವಲ ಒಂದೇ ವಿಷಯ ಕುರಿತು ಯೋಚನೆ ಮಾಡುತ್ತಾರೆ. ಸುಭಾಷಿತದ ಒಂದು ವಾಕ್ಯ ಹೇಳುವಂತೆ "...ಕರ್ಮಣ್ಯೇಕಂ ಮನಸ್ಯೇಕಂ ವಚಸ್ಯೇಕಂ ಮಹಾತ್ಮನಃ". ಅಂದರೆ ಅವರು ಕಾಯಾ ವಾಚಾ ಮನಸಾ ಒಂದೇ ವಿಷಯ ಕುರಿತು ಯೋಚಿಸುತ್ತಾರೆ.