ದಾಸರಪದ (ಜ)
ಜಾಲಿಯ ಮರದಂತೆ
ಜಾಲಿಯ ಮರದಂತೆ ಧರೆಯೊಳು ದುರ್ಜನರು ಪ
ಮೂಲಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ ಅ.ಪ
ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣು ಇಲ್ಲ
ಕುಸುಮವಾಸನೆಯಿಲ್ಲ ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು ವಿಷದಂತೆ ಇರುತಿಹ ೧
ಊರಹಂದಿಗೆ ಷಡ್ರ ಸ್ನಾನವನಿಕ್ಕಲು
ನಾರುವ ದುರ್ಗಂಧ ಬಿಡಬಲ್ಲುದೆ
ಘೋರಪಾಪಿಗೆ ತತ್ವ ಜ್ಞಾನದ ಪೇಳಲು
ಕ್ರೂರ ಕರ್ಮವ ಬಿಟ್ಟು ಸುಜನಾಗುವನೆ ೨
ತನ್ನಿಂದ ಉಪಕಾರ ತೊಟ್ಟಿಕಾದರು ಇಲ್ಲ
ಬಿನ್ನಾಣದ ಮಾತಿಗೆ ಕೊನೆಯಿಲ್ಲ
ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ
ಇನ್ನಿವರ ಕಾರ್ಯವು ಪುರುಂದರ ವಿಠಲ ೩
ಜ್ಞಾನವಂತರ ಸಂಗವಿರಲು
ಜ್ಞಾನವಂತರ ಸಂಗವಿರಲು ಸ್ನಾನವೇತಕೆ
ನಾನು ಎಂಬುದ ಬಿಟ್ಟ ಮೇಲೆ ನರಕವೇತಕೆ ಪ
ಮೃತ್ತಿಕ ಶೌಚ ಮಾಡದವರ ಆಚಾರವೇತಕೆ
ಚಿತ್ರಶುದ್ದಿಯಿಲ್ಲದವರ ವ್ಯರಾಗ್ಯವೇತಕೆ
ಸತ್ಯವಾದಿಗಳಾದವರ ವ್ರತಗಳ್ಯಾತಕೆ
ಉತ್ತಮ ಗುರುಹಿರಿಯರಿಲ್ಲದ ಸಭೆಯುಯಾತಕೆ ೧
ಪತಿಯ ಆಜ್ಞೆ ಮೀರಿದಂತವಳ ನೀತಿ ಏತಕೆ
ಸತಿಗೊಳಗಾಗಿ ನಡೆಯಲವರ ಸಹವಾಸವೇತಕೆ
ಯತಿಯ ನಿಂದೆ ಮಾಡಿದವರ ಮತಿಯು ಏತಕೆ
ಅತಿವಿರೋಧ ಬೆಳೆಸುವಂಥ ಅಣ್ಣನೇತಕೆ ೨
ಆಗಿಬಾರದವನ ಮನೆಯ ಅನ್ನವೇತಕೆ
ಯೋಗಿಯಾದ ಮೇಲೆ ದ್ರವ್ಯದಾಸೆಯೇತಕೆ
ರೋಗಿಯಾದ ಮೇಲೆ ಹೆಣ್ಣಿನ ಭೋಗವೇತಕೆ
ಭಾಗೀರಥಿಯಲಿ ಮಿಂದ ಮೇಲೆ ದೋಷವೇತಕೆ ೩
ಕಾಣದ ಕುರುಡನಿಗೆ ಕನ್ನಡಿಯೇತಕೆ
ಗಾಣಕ್ಕೆ ಕಟ್ಟಿದ ಎತ್ತಿಗೆ ಗೆಜ್ಜೆಯೇತಕೆ
ತಾನು ಉಣ್ಣದೆ ಪರರಿಗೀಯದ ಧನವಿದ್ಯಾತಕೆ
ರಾಣಯಿಲ್ಲದವನು ಮಾಡುವ ಕರ್ಮವೇತಕೆ ೪
ಮಕ್ಕಳನು ಮಾರಿಕೊಂಬ ತಂದೆಯೇತಕೆ
ರೋಕ್ಕಕಾಗಿ ಬಡಿದಾಡುವ ತಮ್ಮನೇತಕೆ
ಕುಕ್ಕುಲಾತಿಯನ್ನು ಬಿಡದ ಸನ್ಯಾಸವೇತಕೆ
ಠಕ್ಕ ಭಕುತಿಯನ್ನು ಮಾಡುವ ದಾಸನ್ಯಾತಕೆ ೫
ಭಾಗವತರ ದ್ವೇಷಿಗಿನ್ನು ಯೋಗವೇತಕೆ
ರಾಗದ್ವೇಷ ಬಿಡದೆಯಿರುವ ಭೋಗವೇತಕೆ
ನಾಗಶಯನನ ಪೊಗಳದ ನಾಲಿಗ್ಯೇತಕೆ
ನಗುತ ಪರರ ಹಿಂಸಿಸುತಿಪ್ಪ ಒಗತನೇತಕೆ ೬
ಗುರೂಪದೇಶವಿಲ್ಲದಂತ ದಾಸನೇತಕೆ
ಅರಿತುವಿದ್ಯ ಪೇಳದಂತ ಗುರುವು ಏತಕೆ
ಮುರ್ಮವರಿತು ನಡೆಯದಂಥ ಹೆಣ್ಣು ಏತಕೆ
ಮೋಹನ್ನ ವಿಠಲ ನಮ್ಮೊಳಿರಲು ಭಯವು ಏತಕೆ ೭
ಜ್ಞಾನವಿಲ್ಲದ ಕರ್ಮ
ಜ್ಞಾನವಿಲ್ಲದ ಕರ್ಮ ಏನು ಮಾಡಿದರೇನು
ಆನೆ ತಿಂದ ಕಪಿತ್ಹ
ನಾನಾಪರಿಯಲಿ ಕಾಯುವನು ದಂಡಿಸಲ್ಯಾತಕೆ
ಶ್ರೀನಿವಾಸನು ಒಲಿಯನು ಮನುಜ ಪ
ನಿನ್ನ ಉನ್ನತವೆಷ್ಟು ನೀನಾವ ಜಾತಿಯವ
ನೀನಾವ ಬಲದಲಿರುವಿ ನಿನಗೆ
ನಿನ್ನವರಿಗೆ ನೀನರಿತು ನೋಡಿಕೋ
ನಿನಗೆ ಸಥೆಯಾದದಿನ್ನು ಏನು ಕಾಣದೆ ಬರಿದೆ
ನಾನು ಮಾಡಿದೆಮ್ಬೋದೇನು ಈ
ಅನ್ಯಾಯವ ಹೇನು ತನ್ನಮ್ಯಾಲೆ
ಗೋಣೆಯ ಹಾಕಿಕೊಡಂತೆ ನಾನು
ನನ್ನದು ಎಂಬುದನು ಬಿಡದಲೇ ವ್ಯರ್ಥ ೧
ವಹ್ನಿಯಂತೆಂಬಂತೆ ಇನ್ನು ನಿನ್ನಲಿರಲು
ಪುಣ್ಯದಂಕುರು ಫಲಿಸೋದೆ
ಏಣೆಯಿನ್ನಷ್ಟಿರಲು ಇನ್ನು ಜೋಡಿಯ ಮುಂದೆ
ತನ್ನ ಬಲವನು ನಡೆವದೆ ತನಗೆ ಮಾಡಿ
ಸಿನ್ನು ಜೀವಕ್ಕೆ ಫಲತರಿದು
ಮುನ್ನ ತಂದುಕೊಡುವ ಚಿನ್ಮಯವರಿಯದೆ ೨
ಕೇಳುವನು ದಾರು ಹೇಳುವನು ದಾರು
ಅರಿತವನು ದಾರು ತಾಳಿ ಮಿತಿಕೊಡುವರು
ಆಲೋಚಿಸಿ ನೋಡು ಮನದಿ ಪಾಲಸಾಗರ
ಶಾಯಿ ಗೋಪಾಲವಿಠಲನ್ನ ಊಳಿಗ
ಮಾಡಿನ್ನು ಬಾಳುವೆ ಮಾಡದಲೆ ೩
ಜೋ ಜೋ ರಂಗಧಾಮ
ಜೋ ಜೋ ಜೋ ಜೋ ಜೋ ರಂಗಧಾಮ
ಜೋ ಜೋ ಜೋ ಜೋ ಜೋ ರಣಭೀಮ ಪ
ಜೋ ಜೋ ಭಕ್ತರ ಕಷ್ಟ ನಿರ್ಧೂಮ
ಜೋ ಜೋ ದಶರಥರಾಮ ನಿಸ್ಸೀಮ ಅ ಪ
ಭೂಮಿಯ ಚಿನ್ನದ ತೊಟ್ಟಿಲ ಮಾಡಿ
ಸೋಮಸೂರ್ಯರೆಂಬ ಕಲಶವ ಹೂಡಿ
ನೇಮದಿ ವೇದಗಳ ಸರಪಣಿ ಮಾಡಿ
ಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ ೧
ಸರಸಿಜೋದ್ಬವ ಸರಸ್ವತಿ ಭಾರತಿ
ಗರುಡ ಶೇಷರು ದ್ರರಿವರ ಸತಿಯರು
ಸುರರುಕಿನ್ನರರು ಕಿಂಪುರುಷರು ನಾರದರು
ಪರಿಪರಿ ಗೀತದಿ ತುತಿಸಿ ಪಾಡಿದರು ೨
ವಸುದೇವ ಸುತನಾದ ಮುದ್ದು ಮುರಾರಿ
ಅಸುರೆ ಪೂತನಿಯ ಪ್ರಾಣಪಹಾರಿ
ಅಸುಮಸಾಹಸಮಲ್ಲ ದ್ಯತ್ಯರ ವೈರಿ
ಶಿಶುವಾಗಿ ದೇವಕಿಗಾನಂದ ತೋರಿ ೩
ಜಗವನು ಹೊಟ್ಟೆಯೋಳಿಂಬಿಟ್ಟೆ ತ್ರುವ್ವಿ
ಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿ
ನಿಗಮಗೋಚರ ನಿತ್ಯಾನಂದನೆ ತ್ರುವ್ವಿ
ಮಗುವೆಂದು ನಾವ್ ತೂಗಬಲ್ಲೇವೆ ತ್ರುವ್ವಿ ೪
ಶಮನ ಮರ್ದಿಸಿ ವೇದ ತತಿಗಳನು ತಂದೆ
ಸುಮನಸರಿಗಾಗಿ ಮಂದರ ಪೊತ್ತು ನಿಂದೆ
ಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆ
ನಮಿಸಿ ಕರೆದರೆ ಕಂಬದಿಂಮ್ಹೊರಟು ಬಂದೆ ೫
ತರಳನಾಗಿ ಬಲಿಯ ದಾನವ ಬೇಡ್ದೆ
ಪರಶು ಧರಿಸಿ ಕ್ಷತ್ರಿಯರ ಸವರಿದೆ
ದುರುಳ ರಾವಣನ ಶಿರವ ಚೆಂಡಾಡಿದೆ
ಚರಿಸಿ ಮನೆಗಳ ಪಾಲು ಮೊಸರನ್ನ ಕುಡಿದೆ ೬
ಬುದ್ದನಾಗಿ ಪತಿವ್ರತೆರನಾಳಿದೆಯಲ್ಲ
ಮುದ್ದುತುರಗವನೇರಿ ಕಲ್ಕನಾದ್ಯಲ್ಲ
ಪದ್ಮನಾಭ ಸೂರಿ ಭಕ್ತವತ್ಸಲ
ನಿದ್ರೆಯ ಮಾಡಯ್ಯ ಶ್ರೀ ರಂಗವಿಠಲ ೭
ಜೋ ಜೋ ಶ್ರೀಕೃಷ್ಣ ಪರಮಾನಂದ
ಜೋ ಜೋ ಶ್ರೀಕೃಷ್ಣ ಪರಮಾನಂದ
ಜೋ ಜೋ ಗೋಪಿಯ ಕಂದ
ಮುಕುಂದ ಜೋ ಜೋ ಪ
ಪಾಲಗಡಲೋಳು ಪವಡಿಸಿದವನೆ
ಆಲದೆಲೆಯ ಮೇಲೆ ಮಲಗಿದ ಶಿಶುವೆ
ಶ್ರೀಲಂತಾಗಿಯಳ ಚಿತ್ತದೊಲ್ಲಭನೆ
ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ ೧
ಹೊಳೆವಂಥ ರನ್ನದ ತೊಟ್ಟಿಲ ಮೇಲೆ
ಥಳಥಳಿಸುವ ಗುಲಗಂಜಿಯ ಮಾಲೆ
ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ
ನಳಿನನಾಭನೇ ನಿನ್ನ ಪಾಡಿ ತೋಗುವೆನು ಜೋ ಜೋ ೨
ಯಾರ ಕಂದ ನಿನಾರ ನಿಧಾನಿ
ಯಾರ ರತ್ನವೊ ನೀನಾರ ಮಾಣಿಕ್ಯವೋ
ಸೇರಿತು ಎನಗೊಂದು ಚಿಂತಾಮಣಿಯೊಂದು
ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ ೩
ಗುಣನಿಧಿಯ ನಿನ್ನ ನೆತ್ತಿಕೊಂಡಿದ್ದರೆ
ಮನೆಯ ಕೆಲಸವಾರು ಮಾಡುವರಯ್ಯ
ಮನಕೆ ಸುಖ ನಿದ್ರೆಯ ತಂದುಕೋ ಬೇಗ
ಫಣಿಶಯನನೆ ನಿನ್ನ ಪಾಡಿ ತೋಗುವೆನು ಜೋ ಜೋ ೪
ಅಂಡಾಜವಾಹನ ಅನಂತ ಮಹಿಮ
ಪುಂಡರೀಕಾಕ್ಷ ಶ್ರೀ ಪರಮಪಾವನ್ನ
ಹಿಂಡು ದೈವದ ಗಂಡ ಉದ್ದಂಡನೆ
ಪಾಂಡುರಂಗ ಶ್ರೀ ಪುರಂದರ ವಿಠಲ ಜೋ ಜೋ ೫
ಜಗದೋದ್ಧಾರನಾ ಆಡಿಸಿದಳ್ ಯಶೋದಾ
ರಾಗ: ಕಾಪಿ ತಾಳ:ಆದಿ
ಜಗದೋದ್ಧಾರನಾ ಆಡಿಸಿದಳ್ ಯಶೋದಾ ||ಪ||
ಜಗದೋದ್ಧಾರನಾ ಮಗನೆಂದು ತಿಳಿಯುತಾ ||ಅ ಪ||
ಸುಗುಣಾಂತರಂಗನ ಆಡಿಸಿದಳ್ ಯಶೋದಾ
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳ್ ಯಶೋದಾ ||೧||
ಅಣೋರಣೀಯನ ಮಹತೋಮಹೀಯನ
ಅಪ್ರಮೇಯನ ಆಡಿಸಿದಳ್ ಯಶೋದಾ ||೨||
ಪರಮಪುರುಷನ ಪರವಾಸುದೇವನ
ಪುರಂದರವಿಠಲನ ಆಡಿಸಿದಳ್ ಯಶೋದಾ ||೩||
ಜನುಮ ಜನುಮದಲ್ಲಿ
ಜನುಮ ಜನುಮದಲ್ಲಿ ಕೊಡುಕಂಡ್ಯ ಹರಿಯೆ |ಪ|
ಅನಿಮಿತ್ತ ಬಂಧು ಕೃಷ್ಣ ದಯದಿಂದಲೆನಗೆ |ಅ.ಪ.|
ಮೆರೆವ ಊರ್ಧ್ವಪುಂಡ್ರ ಎರಡಾರುನಾಮವು
ಕೊರಳೊಳು ತುಳಸಿಯ ವನಮಾಲೆಯು
ಮೆರೆವ ಶಂಖಚಕ್ರ ಭುಜದೊಳೊಪ್ಪುತ ನಿಮ್ಮ
ಸ್ಮರಿಸುತ್ತ ಹಿಗ್ಗುವ ವೈಷ್ಣವಜನುಮವ |೧|
ಹರಿಯೆ ಸರ್ವೋತ್ತಮ ರಾಣಿ ಲಕುಮಿ ಬೊಮ್ಮ
ಹರ ಇಂದ್ರಾದ್ಯಖಿಳರು ತವ ಸೇವಕರು
ವರ ತಾರತಮ್ಯ ಪಂಚಭೇದ ಸತ್ಯವೆಂದು
ನೆರೆ ಪೇಳುವ ವಾಯುಮತದ ಸುಜ್ಞಾನವ |೨|
ಸಕಲ ವಿಭುದೋತ್ತಮರಲ್ಲಿ ನಮ್ರತೆಯು
ಸುಖತೀರ್ಥರಲಿ ಮುಖ್ಯಗುರುಭಾವನೆಯು
ಮುಕುತಿಪ್ರದಾಯಕ ಸಿರಿಕೃಷ್ಣ ನಿನ್ನಲ್ಲಿ
ಅಕಳಂಕವಾದ ನವವಿಧ ಭಕುತಿಯ |೩|
ಜಯಮಂಗಳಂ
ಜಯಮಂಗಳಂ ನಿತ್ಯ ಶುಭಮಂಗಳಂ |ಪ|
ತೊಳಸದಕ್ಕಿಯ ತಿಂಬ ಕಿಲುಬುತಳಿಗೆಯಲುಂಬ
ಕೊಳಗದಲಿ ಹಣಗಳನು ಅಳೆದುಕೊಂಬ
ಇಲ್ಲ ತನಗೆಂದು ಸುಳ್ಳು ಮಾತಾಡಿದರೆ
ಎಲ್ಲವನು ಕಸುಕೊಂಬ ಕಳ್ಳದೊರೆಗೆ |೧|
ತನ್ನ ನೋಡುವೆನೆಂದು ಮುನ್ನೂರು ಗಾವುದ ಬರೆ
ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ಹೊನ್ನು ಹಣ ಕಸುಕೊಂಡು ತನ್ನ ದರುಶನ ಕೊಡದೆ
ಬೆನ್ನೊಡೆಯ ಹೊಡೆಸುವ ಅನ್ಯಾಯಕಾರಿಗೆ |೨|
ಗಿಡ್ಡಹಾರುವನಾಗಿ ಒಡ್ಡಿ ದಾನವಬೇಡಿ
ದುಡ್ಡು ಕಾಸುಗಳಿಗೆ ಕೈಯ ನೀಡಿ
ಅಡ್ಡಬಿದ್ದ ದಾಸರಿಗೆ ವಿಡ್ಡೂರಗಳ ಕಳೆದು
ದೊಡ್ಡವರ ಮಾಳ್ಪ ಸಿರಿ ವಿಜಯವಿಠಲರೇಯಗೆ |೩|
ಜಯವಾಯುಹನುಮಂತ
ಜಯವಾಯುಹನುಮಂತ ಜಯ ಭೀಮ ಬಲವಂತ |ಪ|
ಜಯಪೂರ್ಣ ಮತಿವಂತ ಜಯ ಸಲಹೊ ಸಂತ | ಅ.ಪ.|
ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆ
ನಂದದಿಂದಲಿ ಮಾಡಿ ಕಪಿಬಲವ ಕೂಡಿ
ಸಿಂಧು ಲಂಘಿಸಿ ಖಳರ ವನ ಭಂಗಿಸಿ ಸೀತೆ
ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ |೧|
ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಅರಿಬಲವ ಕುಟ್ಟೆ
ಉರುಗಬಂಧನದಿಂದ ಕಪಿವರರು ಮೈಮರೆಯೆ
ಗಿರಿಯ ಸಂಜೀವನವ ತಂದು ಬದುಕಿಸಿದೆ | ೨|
ದ್ವಾಪರಾಂತ್ಯದಿ ಪಾಂಡುಭೂಪನಾತ್ಮಜನೆನಿಸಿ
ಶ್ರೀಪಾರ್ಥಸಾರಥಿಯ ಭಜಕ ನೀನಾದೆ
ಪಾಪಿ ಮಾಗಧ ಬಕ ಕೀಚಕ ಹಿಡಿಂಬಕರ
ಕೊಪದಿಂದಲಿ ತರಿದೆ ಮೂಜ್ಜಗದಿ ಮೆರೆದೆ |೩|
ಧುರದಲಿ ದುರ್ಯೋಧನನ ಬಲವನು ತರಿದೆ
ಅರಿತು ದುಶ್ಶಾಸನನ ಒಡಲನು ಬಗೆದೆ
ಉರವ ತಪ್ಪಿಸಿ ಕೌರವನ್ನ ತೊಡೆಗಳ ಮುರಿದೆ
ಹರಿಯ ಕಿಂಕರ ಧುರಂಧರಗಾರು ಸರಿಯೆ |೪|
ಕಲಿಯುಗದಲಿ ಕಳ್ಳರುದಿಸಿ ದುರ್ಮತಗಳನು
ಬಲಿಸಿ ಶ್ರೀ ಹರಿಯ ಗುಣಗಳನು ಮರೆಸಿ
ಕಲಿಯನನುಸರಿಸಲು ಗುರುವಾಗಿ ಅವತರಿಸಿ
ಖಳರ ದುರ್ಮತ ಮುರಿದೆ ಶ್ರೀಕೃಷ್ಣ ಪರನೆಂದೆ |೫|