ದಾಸರಪದ (ಎ)
ಎನಗೂ ಆಣೆ ರಂಗ
ಎನಗೂ ಆಣೆ ರಂಗ
ಎನಗೂ ಆಣೆ ರಂಗ ನಿನಗೂ ಆಣೆ |ಪ|
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ |ಅ.ಪ|
ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ |೧|
ತನುಮನಧನದಲಿ ವಂಚಕನಾದರೆ ನಿನಗೆ ಆಣೆ ರಂಗ
ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ |೨|
ಕಾಕು ಮನುಜರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ |೩|
ಶಿಷ್ಟರ ಸಂಗ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ |೪|
ಹರಿನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ |೫|
ಎದುರುಗೊಂಡಳು ಇಂದಿರಾದೇವಿ
ಎದುರುಗೊಂಡಳು ಇಂದಿರಾದೇವಿ
ಮದನಮೋಹನ ದಿವ್ಯಮೂರುತಿಯ
ಸದಮಲಾನಂದ ಕೀರುತಿಯ ||ಪ||
ನವಸ್ವರ್ಣಹರಿವಾಣದಿ ಕಂಚಕಲಶನಿಕ್ಕಿ
ಹವಳದಾರತಿ ರನ್ನ ಜ್ಯೋತಿಯಲಿ
ತವಕದಿಂದಲಿ ಎತ್ತಿ ಮುತ್ತಿನಾಕ್ಷತೆ ಇಟ್ಟು
ನವರತ್ನ ನಿವಾಳೆಯ ಕೊಡುತ ||೧||
ಜಯಮತ್ಸ್ಯಕೂರ್ಮನೆ ಜಯಕ್ರೋಡ ನರಸಿಂಹ
ಜಯಮುನಿವಟು ಭಾರ್ಗವರೂಪನೆ
ಜಯ ರಾಮ ಶ್ರಿಕೃಷ್ಣ ಜಯ ಬೌದ್ಧಕಲ್ಕಿಯೆ
ಜಯವೆಂದು ಬೆಳಗಿ ಪಾದಕೆ ನಮಿಸಿ ||೨||
ಕರೆದೊಯ್ದು ತೂಗುಮಂಚದಿ ಕುಳ್ಳಿರಿಸಿ
ಕರ್ಪೂರದ ವೀಳ್ಯ ಕೊಟ್ಟು ಹರುಷದಲಿ
ಗುರುಮಹಿಪತಿ ಸುತ ಪ್ರಭುವಿನ ಸನಿಹದಿ
ಕರುಣ ಮಾತುಗಳಾಡಿಸುತ ಹರಿಯ ||೩||
ಎದ್ದು ಬರುತಾರೆ
ಎದ್ದು ಬರುತಾರೆ ನೋಡೆ ತಾ
ವೆದ್ದು ಬರುತಾರೆ ನೋಡೆ ||ಪ||
ಮುದ್ದು ವೃಂದಾವನದ ಮಧ್ಯದೊಳಗಿಂದ
ತಿದ್ದಿಹಚ್ಚಿದ ನಾಮ ಮುದ್ರೆಗಳೊಪ್ಪುತಿವೆ ||ಅ.ಪ||
ಗಳದೊಳು ಶ್ರೀತುಳಸಿ ನಳಿನಾಕ್ಷಿಮಾಲೆಗಳು
ಚೆಲುವ ಮುಖದೊಳು ಪೊಳೆವ ದಂತಗಳಿಂದ ||೧||
ಹೃದಯ ಸದನದಲ್ಲಿ ಪದುಮನಾಭನ ಭಜಿಸಿ
ಮುದಮನದಿಂದ ನಿತ್ಯ ಸದಮಲರೂಪ ತಾಳಿ ||೨||
ದಾತ ಗುರು ಜಗನ್ನಾಥವಿಠಲನ
ಪ್ರೀತಿಯ ಪಡಿಸುತ ದೂತರ ಪೊರೆಯುತ ||೩||
ಎನ್ನ ಪಾಲಿಸೋ ಕರುಣಾಕರ
ಎನ್ನ ಪಾಲಿಸೋ ಕರುಣಾಕರ
ಪನ್ನಗಶಯನ ಗದಾಧರ ||ಪ||
ವಸುದೇವನಂದನ ಹರಿಮಧುಸೂದನ
ಅಸುರಾಂತಕ ಮುರಲೀಧರ
ಬಿಸರುಹನಾಭ ಸರ್ವೇಶನೆ ಮುನಿಮಾ
ನಸ ಸಂಚಾರ ರಮಾಧವ ||೧||
ಪರಮಪುರುಷ ಉರಗಾಸನ ವಾಹನ
ಕರುಣಾರ್ಣವ ವಡವಾನಳ
ಸರಸಿಜಭವ ಗಿರಿಜಾವಲ್ಲಭನುತ
ವರ ಸುಜನಾವಳಿ ಪಾಲನ ||೨||
ಕಾವನಪಿತ ಮುಚುಕುಂದವರದ ರಾ
ಜೀವ ನಯನ ನಾರಾಯಣ
ಶ್ರೀವತ್ಸಲಾಂಛನ ಗುರುಮಹಿಪತಿಸುತ
ಜೀವನಸಖ ಶ್ರೀಕೃಷ್ಣನೆ ||೩||
ಎನ್ನ ಬಿನ್ನಪ ಕೇಳು
ಎನ್ನ ಬಿನ್ನಪ ಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲ
ಬನ್ನಬಡಿಸುವ ರೋಗವನ್ನು ಯೋಚನೆ ಮಾಡಿ ಚೆನ್ನಾಗಿ
ಪಾಲಿಸುವುದು ಕರುಣಿ ||ಪ||
ಆರೋಗ್ಯ ಆಯುಷ್ಯ ಐಶ್ವರ್ಯವೆಂಬೊ ಈ ಮೂರು ವಿಧ ವಸ್ತುಗಳು
ನಾರಾಯಣನ ಭಜಕರಾದವರ ಸಾಧನಕೆ ಪೂರ್ಣವಾಗಿಪ್ಪುವು
ಘೋರ ವ್ಯಭಿಚಾರ ಪರನಿಂದೆ ಪರವಿತ್ತಾಪಹಾರ ಮಾಡಿದ ದೋಷದಿ
ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ
ಪರಿಹರಿಸುವುದು ಹರಿಯೆ ||೧||
ವಸುಮತಿಯ ಮೇಲಿನ್ನು ಅಸುರಜನರೆ ಬಹಳ ವಶವಲ್ಲ ಕಲಿಯ ಬಾಧೆ
ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಳು ನಾವಿಪ್ಪೆವು
ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದು
ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ಅಸುನಾಥ
ಹರಿಯೆ ಪೊರೆಯೊ ಸ್ವಾಮಿ ||೨||
ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆ
ಹೇದೇವ ನಿನ್ನ ಕರಕಲಶಸುಧೆಗರೆದು ಸಾಧುಗಳ ಸಂತೈಸುವಿ
ಮೋದಬಡಿಸುವಿ ನಿನ್ನ ಸಾಧಿಸುವರಿಗೆ ಶುಭೋದಯಂಗಳನೀವಿ
ಆದರಿಸಿ ಇವಗೆ ತವಪಾದಧ್ಯಾನವಿತ್ತು ಸಾಧುಗಳೊಳಗಿಟ್ಟು
ಮೋದಕೊಡು ಸರ್ವದಾ ||೩||
ಅನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿ
ನಿನ್ನವರವನೆನಿಸಿ ನಿನ್ನ ನಾಮೋಚ್ಚರಿಸಿ ನಿನ್ನಿಂದ ಉಪಜೀವಿಸಿ
ಅನ್ನ ಆರೋಗ್ಯಕ್ಕೆ ಅಲ್ಪಜೀವಿಗಳಿಗೆ ಇನ್ನು ಅಲ್ಲರಿಯಬೇಕೆ
ನಿನ್ನ ಸಂಕಲ್ಪ ಭಕ್ತರಪೋಷಕನೆಂಬ ಘನ್ನ ಬಿರುದನ್ನು
ಉಳುಹೊ ಸಲಹೊ ||೪||
ನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು ನಿನ್ನವನೆಂದು ಅರಿದು
ನಿನ್ನ ನಾ ಪ್ರಾರ್ಥಿಸಿದೆ ಅನ್ಯರಿಗೆ ಅಲ್ಲರಿಯೆ ಎನ್ನ ಪಾಲಿಸುವ ದೊರೆಯೆ
ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು ಮನ್ನಿಸಬೇಕು
ಕರುಣಿ ಅನಂತಗುಣಪೂರ್ಣ ಗೋಪಾಲವಿಠಲ ಇನ್ನಿದನೆ
ಪಾಲಿಸುವುದೊ ಸ್ವಾಮಿ ||೫||
ಎಲ್ಲ್ಯಾಡಿ ಬಂದ್ಯೋ ನೀ ಹೇಳಯ್ಯ
ಎಲ್ಲ್ಯಾಡಿ ಬಂದ್ಯೋ ನೀ ಹೇಳಯ್ಯ ||ಪ||
ನಿಲ್ಲು ನಿಲ್ಲು ಗೋಪಾಲಕೃಷ್ಣಯ್ಯ ||ಅ ಪ||
ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿ
ಹೊಸಪರಿ ಸುದ್ದಿಯು ಹುಟ್ಟಿದೆ
ಪುಸಿಯಲ್ಲ ಈ ಮಾತು ಮುಟ್ಟಿದೆ ನಿನ್ನ
ನಸುನಗೆ ಕೀರ್ತಿ ಹೆಚ್ಚಿದೆ ||೧||
ಬೆರಳ ಉಂಗುರವೆಲ್ಲಿ ಹೋಗಿದೆ ನಿನ್ನ
ಕೊರಳ ಪದಕವೆಲ್ಲಿ ನೀಗಿದೆ
ಸರಕೆಲ್ಲ ಅವಳಲ್ಲಿ ಸಾಗಿದೆ ಆ
ತರುಣಿ ಮಹಿಮೆ ಹೀಂಗಾಗಿದೆ ||೨||
ಕಳ್ಳತನವ ಹೀಗೆ ಮಾಡಿದೆ ನಿನ್ನ
ಸುಳ್ಳು ಕಡೆಗೆ ನಾ ನೋಡಿದೆ
ಎಲ್ಲರಿಗೂ ಠಕ್ಕು ಮಾಡಿದೆ
ಚೆಲುವ ರಂಗವಿಠಲ ನಗೆಗೀಡಾದೆ ||೩||
ಎಲ್ಲಿಂದ ಬಂದೆ
ಎಲ್ಲಿಂದ ಬಂದೆ ಮುಂದೆತ್ತ ಪಯಣ
ಇಲ್ಲಿ ನಿನಗೆಷ್ಟುದಿನವಾಲಸ್ಯ ಮರುಳೆ ||ಪ||
ಮಾತೆಯುದರದೊಳು ನವಮಾಸ ಮಲ ಮೂತ್ರದೊಳು
ಯಾತನೆಯ ಯೋನಿಮುಖ ಮಾರ್ಗವಿಡಿದು
ಭೂತಳಕೆ ಬಂದು ಹದನೇನ ತೀರಿಸಿಕೊಂಡೆ
ಜಾತಿ ಯಾವುದು ನಿನ್ನ ಹೆಸರೇನು ಮರುಳೆ ||೧||
ಮುಂದಾವ ಪಥವ ಸೇರುವೆ ಮರುಳೆ ಸಾಕಿನ್ನು
ಹಿಂದೆ ನಿನ್ನವರಾರು ಆಪ್ತರುಂಟೆ
ಒಂದುಗೂಡಿದ ಪತ್ನಿಸುತರೆಲ್ಲ ವರ್ಜಿಪರು
ನಿಂದು ಮಾತಾಡು ಬಳಲಿದೆ ಬರಿದೆ ಮರುಳೆ ||೨||
ಬರವಿದೇತಕೆ ನಿನ್ನ ಸ್ಥಳವೆಲ್ಲಿ ನೆಲೆಯಾಗಿ
ಇರುವ ಮಂದಿರವಾವುದದನೆನಗೆ ಪೇಳೊ
ಧರೆಯೊಳಗೆ ವರಕಾಗಿನೆಲೆಯಾದಿಕೇಶವನ
ಸಿರಿಚರಣಕಮಲವನು ನೆರೆನಂಬಿ ಸುಖಿಸೊ ||೩||
ಎಲೆ ಮನ ಮುರಾರಿ
ಎಲೆ ಮನ ಮುರಾರಿಯನು ಕೊಂಡಾಡು ||ಪ||
ಮಂದಿಯ ಮಾತಿಗೆ ಎಂದೆಂದು ಮರುಗದೆ
ಮುಂದಿನ ಗತಿಯನು ನೋಡು ||೧||
ಕಾಲನದೂತರ ಕಾಲಿಗೆ ಬಿದ್ದರೆ
ನಾಳೆಗೆ ನಿಲ್ಲೋರೆ ನೋಡು ||೨||
ರಾಜೀವಮುಖಿಯರ ಸೋಗಿಗೆ ಮೆಚ್ಚದೆ
ವಿಜಯವಿಠಲನ ಬೇಡು ||೩||
ಎಷ್ಟು ಮಮತೆಯೊ ನಿನಗೆ
ಎಷ್ಟು ಮಮತೆಯೊ ನಿನಗೆ ಭ್ರಷ್ಟಮನವೆ
ಕಷ್ಟದೇಹವ ನೆಚ್ಚಿ ಇವನ ಕಳೆದಿ ||ಪ||
ಹಿಂದೆ ಅನಂತ ಜನುಮಗಳಲ್ಲಿ ಇನ್ನು
ತಂದೇಸುಮಂದಿಗಳು ತಾಯೇಸು ಎನಗೆ
ಬಂದು ಸತಿಸುತರೇಸು ಬಂಧುಜನರುಗಳೇಸು
ಇಂದೊಬ್ಬರನ್ನು ಕರೆತಂ(ದ)ದ್ದೇನೊ ಮರುಳೆ ||೧||
ಚಿನ್ನಬೆಳ್ಳಿ ನಾನಾ ಬಣ್ಣ ಬಿರುದುಗಳನ್ನು
ಅನಂತ ಗಳಿಸಿ ಅನಂತ ಹರುಷದಲಿ
ನನ್ನವರು ನನ್ನದು ಎಂಬ ದೋಷದ ಮದದಿ
ಇನ್ನು ದೇಹವ ಧರಿಸಿ ಇನ್ನು ಎಚ್ಚರಿಯೊ ||೨||
ನಿನ್ನ ಕಣ್ಣ ಮುಂದೆ ಪೋಪ ಜೀವರ ಕಂಡು
ಇನ್ನು ನಿನಗೆ ನಾಚಿಕೆ ಬಾರದೆ
ಇನ್ನು ಮುಂದೆ ನಾಳಿಗೆಂಬೊ ಘನ್ನ ಆಸೆ
ಚೆನ್ನಾಗಿ ಬಿಡುಕಂಡ್ಯ ಖೂಳಮನವೆ ||೩||
ಆಸೆ ಎಂಬೋದು ಸಂಧಿಸಿಕೊಂಡರೆ ನಿನಗೆ
ದೋಷವೆಂಬೊ ರಾಶಿ ಆಶ್ರಯಿಸದು
ಮೀಸಲ ಮಾಡು ಮನ ಮೋಸ ಹೋಗದೆ
ಹೃಷಿಕೇಶನ ಚರಣ ವಿಶೇಷವಾಗಿ ಸ್ಮರಿಸೊ ||೪||
ಸತಿಸುತರು ಇತರ ಜನ ಹಿತವಾದ ಧನದೇಹ
ಇತರ ನೋಡಲು ಮೋಹ ಅಧಿಕವಾಗಿ
ಪತಿತಪಾವನ ರಂಗ ಗೋಪಾಲವಿಠಲನ
ಜಿತವಾಗಿ ಭಕುತಿ ಇಟ್ಟು ಮುಕುತಿಯ ಪಡೆಯೊ ||೫||
ಎಷ್ಟು ಸುಖಿಗಳೊ ಗೋವು
ಎಷ್ಟು ಸುಖಿಗಳೊ ಗೋವು ಗೊಲ್ಲತಿ ಗೋಪರು ಶ್ರೀ
ಕೃಷ್ಣನೊಡನೆ ಹಗಲಿರುಳು ಕ್ರೀಡೆಯಲಿ ಕಾಲಕಳೆವರು ||ಪ||
ಕೇಹೋ ಕೇಹೋ ತ್ವವೈ ತ್ವವೈ ಅಂಬಾ ಅಂಬಾ ಬಾರೆಯೆಂದು
ಮೋಹದಿಂದ ಕರೆಸಿಕೊಂಡು ಓಡಿಓಡಿ ಬಂದು
ಶ್ರೀಹರಿಯ ಹೆಗಲಮ್ಯಾಲೆ ಗಳಗಳಿಟ್ಟು ಕದಪು ಕಂಠ
ಲೇಹಿಗೆ ಮೊಗದಿರುವಿ ಸಿರಿನಖದಿಂ ತುರಿಸಿಕೊಂಬರು ||೧||
ತುಡಗನೆಂದು ತುಡುವಿಡಿದು ಅಡಿಗಡಿಗೆ ಅಪ್ಪಿ ಚುಂಬಿಸಿ
ಪಿಡಿಪಿಡಿದು ಗೋಪಿಯರಿಗೆ ಒಪ್ಪಿಸಿ ಒಪ್ಪಿಸಿ
ಮಡದೇರೆಲ್ಲ ಮಧುವೈರಿಯ ಸಂಗ ಸೊಬಗಿಲ್ಯೋಲಾಡುತಲಿ
ಒಡನೆ ಗೋಪಾಲಮೂರುತಿಯ ಕಣ್ಣು ಮನದಲಿಟ್ಟು ಸುಖಿಪರು ||೨||
ಸಣ್ಣವರಾಡಲೊಲ್ಲೆನಲು ಗದ್ದವಿಡಿದು ಮುದ್ದಿಸಿ ನ
ಮ್ಮಣ್ಣ ತಮ್ಮಗಳಿರಾ ಗೆಳೆಯರಿರಾ ಬಾಯೆಂದು
ಆಣ್ಣೆಕಲ್ಲೊಡ್ಡಿ ಗಜುಗನಾಡಿ ಸೋಲಿಸಿಕೊಂಡಳುವ
ಚಿಣ್ಣರಾಮ ಪ್ರಸನ್ವೆಂಕಟೇಶನ ಉಣ್ಣುವೆಂಜಲ ಸೆಳೆದುಂಬುವರು ||೩||
ಎಂತು ತುತಿಸಲಿ ಎನ್ನ ದೇವನ
ಎಂತು ತುತಿಸಲಿ ಎನ್ನದೇವನ ಸಂತತ ಎಮ್ಮ ಸಲಹೋನೆ
ಅಂತರಂಗದಿ ಹರಿಯ ತೋರಿಸಿ ಸಂತೋಷದಿಂದ ನಲಿವ ಪವನನ ||ಪ||
ತಾನು ಮಾಡಿದ ಕರ್ಮಶೇಷವು ತಾನು ತಿಳುಹಿದ ಜ್ಞಾನಶೇಷವು
ತಾನು ಮಾಡಿದ ಭಕುತಿಶೇಷವು ನಾನಾ ಸಾಧನಶೇಷವು
ತಾನು ಕರುಣಿಸಿ ಜೀವಯೋಗ್ಯತೆಯೇನು ಅರಿತು ಕರ್ಮ ಮಾಡಿಸಿ
ತಾನು ಸಹಿತ ಧ್ಯಾನದಲಿ ಹರಿಕಾಣಿಸಿ ತೋರ್ಪ ಕರುಣೆಯ ||೧||
ಇವನ ಪ್ರೇರಣೆ ಹರಿಯ ಪ್ರೇರಣೆ ಇವನ ಸೇವೆಯು ಹರಿಯ ಸೇವೆಯು
ಇವನ ಕರುಣವೆ ಹರಿಯ ಕರುಣವು ಇವನ ಬಲವೇ ಪ್ರಬಲವು
ಇವನು ನಂಬಲು ಹರಿಯು ನಂಬುವ ಇವನು ಒಲಿಯಲು ಹರಿಯು ಒಲಿಯುವ
(ಪವನಾಖ್ಯನಾಗಿ) ನಮ್ಮನು ಪವನಗತಿ ಪೊಂದಿಸುವನ ||೨||
ಜ್ಞಾನಭಕುತಿ ವೈರಾಗ್ಯಖಣಿಯು ದಾನವಾಂತಕ ಧರ್ಮಶೀಲ
ಪೂರ್ಣಬೋಧೆಯ ಪುಣ್ಯನಾಮಕ ಪ್ರಾಣಾಪಾನವುದಾನರಿಗೆ
ಪ್ರಾಣ ಮುಖ್ಯಪ್ರಾಣ ಇವನಮ್ಮ ಪ್ರಾಣವಿಲ್ಲದು ಇವನು ಇಲ್ಲದಿರೆ
ಪ್ರಾಣಪತಿ ಗೋಪಾಲವಿಠಲನ ಕಾಣಿಸಿ ತೋರ್ಪ ಕರುಣೆಯ ||೩||
ಎಂಥಾ ಪುಣ್ಯವೆ ಗೋಪಿ
ಎಂಥಾ ಪುಣ್ಯವೆ ಗೋಪಿ
ಎಂಥಾ ಭಾಗ್ಯವೆ ನಿನ್ನ
ಇಂಥಾ ಮಗನ ಕಾಣೆವೆ ||ಪ||
ಚಿಂತಿಸಿದರು ದೊರಕ ಚೆಲುವ ರಾಜಗೋಪಾಲ
ಚಿಂತೆಯೆಲ್ಲವು ಪೋಪುದೇ ಕೇಳೆ ಯಶೋದೆ ||ಅ.ಪ||
ಸರಸಿಜನಾಭನ ಸುಮ್ಮನೆ ಕಂಡರೆ
ದುರಿತವೆಲ್ಲವು ಪೋಪುದೆ
ಸರಸವಾಡುತ ಬಂದು ಸವಿ ಮಾತನಾಡಿದರೆ
ಹರುಷ ಕೈಗೂಡುವುದೇ ಕೇಳೆ ಯಶೋದೆ ||೧||
ಊರೊಳಗೆ ಇವ ನೆರೆಹೊರೆಯರಂಜಿಕೆ
ದೂರಿಕೊಂಬುವರಲ್ಲವೆ
ಅರಣ್ಯದಲಿ ನಾವು ಆಡುವ ಆಟಗಳು
ಆರಿಗಾದರು ಉಂಟೇನೆ ಕೇಳೆ ಯಶೋದೆ ||೨||
ನಿನ್ನ ಮಗನ ಕರೆಯೆ ಎಮ್ಮ ಪ್ರಾಣದ ದೊರೆಯೆ
ಘನ್ನನು ಪರಬ್ರಹ್ಮನೆ
ಚೆನ್ನಶ್ರೀ ಪುರಂದರವಿಠಲರಾಯನ
ನಿನ್ನಾಣೆ ಬಿಡಲಾರೆವೇ ಕೇಳೆ ಯಶೋದೆ ||೩||
ಎಂದಿಗಾದರೂ ಒಮ್ಮೆ
ಎಂದಿಗಾದರೂ ಒಮ್ಮೆ ಕೊಡು ಕಂಡ್ಯ ಹರಿಯೆ ||ಪ||
ಬೃಂದಾವನಪತಿ ದಯದಿಂದಲೆನಗೆ ||ಅ.ಪ||
ಫಲಭಾರಗಳಿಂದ ತಲೆವಾಗಿ ಶುಕಪಿಕ
ಕಲಕಲದೊಳು ನಿನ್ನ ತುತಿಸಿ ತುಂಬಿಗಳ
ಗಳರವದಿಂ ಪಾಡಿ ಅಪ್ಸರರಂತೆ ಪೂ
ಮಳೆಯಗರೆವ ತರುಲತೆಯ ಜನ್ಮವನು ||೧||
ಕೊಳಲ ಶ್ರುತಿಯ ಕೇಳಿ ಸುಖದ ಸಂಭ್ರಮದಲಿ
ಹೊಲಬು ತಪ್ಪಿ ತಾವು ಅರೆಗಣ್ಣು ಮುಚ್ಚಿ
ನಳಿನಾಸನದಿ ಮೌನಗೊಂಡು ಪರಮಹಂಸ
ಕುಲದಂತೆ ಧ್ಯಾನಿಪ ಹಂಸಜನ್ಮವನು ||೨||
ನಖಗಳೆಂಬ ಸಂತತ ಪೂರ್ಣಚಂದ್ರನ್ನ
ಅಕಳಂಕ ನವಚಂದ್ರಿಕೆಯನ್ನು ಸವಿದು
ಸುಖದ ಸುಗ್ಗಿಗಳಲ್ಲಿ ಸೊಕ್ಕಿ ಯೋಗಿಗಳಂತೆ
ಅಖಿಳವ ಮರೆತ ಚಕೋರಜನ್ಮವನು ||೩||
ಭಾವಜನಯ್ಯನ ಕಡುಚಲ್ವಿಕೆಯನ್ನು
ಭಾವಿಸಿ ನಿಡುಗಂಗಳಿಂದ ದಣಿದುಂಡು
ಗೋವಳೇರಂತೆ ಮನೆಮಕ್ಕಳ ಹಿಂಗಿ ನಿನ್ನ
ಆವಾಗ ಈಕ್ಷಿಸುವ ಗೋವ್ಗಳ ಜನ್ಮವನ್ನು ||೪||
ತೋಳದಂಡಿಗೆ ಮಾಡಿ ಹೀಲಿಯ ಚಾಮರವ
ಮೇಲೆ ಎತ್ತಿದ ತಾವರೆಗೊಡೆಯಿಂದ
ಓಲೈಸಿ ನಿನ್ನನು ಒಲಿಸಿ ಮುಕುತರಂತೆ
ಸುಲೋಖ್ಯ ಸುಖವುಂಬ ಗೋಪರ ಜನ್ಮವನು ||೫||
ಕೊಳಲಧ್ವನಿಯ ಕೇಳಿ ಎದುರುಗೊಳ್ಳುತ ನಿನ್ನ
ನಳಿನನಾಭಾ ಅವಧಾರೆಂದು ಪೊಗಳಿ
ತಳಿಗೆ ಆರತಿಯೆತ್ತಿ ಲಕ್ಷ್ಮಿಯಂತೆ ನಿನ್ನ
ಚೆಲುವ ಸವಿಯಂಥ ಗೋಪೇರಜನ್ಮವನು ||೬||
ಇಂದಿರೆಯರಸ ಬ್ರಹ್ಮೇಂದ್ರಾದಿ ವಂದಿತ
ಎಂದು ಮೊಸರ ಕಡೆಯುತ್ತಲಿ ನಿನ್ನ
ಅಂದಿನ ಶ್ರುತಿಯೋಳುಪ್ಪುವಡಿಪ ವ್ರಜ
ದಿಂದುಮುಖಿಯರ ಜನ್ಮವ ಸಿರಿಕೃಷ್ಣ ||೭||
ಎಂದಿಗಾಹುದೋ ನಿನ್ನ ದರುಶನ
ಎಂದಿಗಾಹುದೋ ನಿನ್ನ ದರುಶನ
ಅಂದಿಗಲ್ಲದೆ ಬಂಧ ನೀಗದೋ ||ಪ||
ಗಾನಲೋಲನೇ ದೀನವತ್ಸಲ
ಮಾನದಿಂದಲಿ ನೀನೆ ಪಾಲಿಸೊ ||೧||
ಯಾರಿಗೆ ಮೊರೆಯಿಡಲೋ ಶ್ರೀಹರೀ
ಸಾರಿಬಂದು ನೀನೀಗಲೇ ಪೊರಿ ||೨||
ಗಜವ ಪಾಲಿಸೋ ಗರುಡಗಮನನೆ
ಭುಜಗಶಯನ ಶ್ರೀ ವಿಜಯವಿಠಲ ||೩||
ಎಂದಿದ್ದರೀ ಕೊಂಪೆಯೆನಗೆ ನಂಬಿಕೆಯಿಲ್ಲ
ಎಂದಿದ್ದರೀ ಕೊಂಪೆಯೆನಗೆ ನಂಬಿಕೆಯಿಲ್ಲ ||ಪ||
ಮುಂದರಿತು ಶ್ರೀಹರಿಯ ಭಜಿಸುವುದು ಲೇಸು ||ಅ.ಪ||
ಎಲುವುಗಳು ತೊಲೆಯಂತೆ ಏಕನರಗಳ ಸೂತ್ರ
ಮಲಮೂತ್ರ ಮಾಂಸದ ಮೇಲೆ ಹೊದಿಕೆ
ಕಲಕಲನೆ ತಿರುಗಿ ನಾಲಿಗೆಘಂಟೀಪರಿಗಳು
ಕೆಲಕಾಲಕೀ ಕೊಂಪೆ ಕಾಣದೆ ಹೋಗುವುದು ||೧||
ಪಿಂಡಗಳು ಒಂಬತ್ತು ಕೆಲಬಂಟರೈವರು
ದಂಡೆತ್ತಿರುವ ಕ್ರೋಧ ಮತ್ಸರಗಳು
ಮಂಡಲಾಧಿಪ ನಮ್ಮ ಮನ್ಮಥನಾರಣ್ಯವಿದು
ಬೆಂಡಾಗಿ ಹೋಗುವರು ಅರಿಯದೀ ಕೊಂಪೆ ||೨||
ತನುವಿನೊಳು ಶೃಂಗಾರ ಕೊಂಡಾಡಲಳವಲ್ಲ
ಬನ್ನಬಡುತಲಿ ಬಹಳ ಚೆನ್ನಿಗನು
ರನ್ನ ಸಿರಿ ಕಾಗಿನೆಲೆಯಾದಿಕೇಶವರಾಯ
ಇನ್ನುಂಟೆ ಜಗದೊಳು ನಿನ್ನ ಪೊಗಳುವರು ||೩||